ಎಲಿವೇಟೆಡ್ ಕಾರಿಡಾರ್ ಯೋಜನೆ: ಮರಗಳನ್ನು ಕಡಿಯಲು ಅವಕಾಶ ಕೋರಿ ಮನವಿ
ಬೆಂಗಳೂರು, ಫೆ.6: ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಗಾಗಿ ಸಾವಿರಾರು ಮರಗಳನ್ನು ಕಡಿಯಲು ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಲಿವೇಟೆಡ್ ಕಾರಿಡಾರ್ಗೆ ಪರಿಸರವಾದಿಗಳು ಸೇರಿದಂತೆ ಸಾರ್ವಜನಿಕರ ವಿರೋಧದ ನಡುವೆಯೂ ಮರಗಳನ್ನು ಕಡಿಯಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದೆ.
102 ಕಿ.ಮೀ.ನಷ್ಟು ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಉದ್ದೇಶದಿಂದ ನಿಗಮವು ಸುಮಾರು ಮೂರೂವರೆ ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲು ಅನುಮತಿ ಎಂದು 2019 ಜನವರಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಒಂದೇ ಬಾರಿಗೆ ಇಷ್ಟು ಮರಗಳನ್ನು ಕಡಿಯುವ ಸಲುವಾಗಿ ನಮ್ಮ ಹಂತದಲ್ಲಿ ಅನುಮತಿ ಸಿಗುವುದು ಕಷ್ಟ.
ಮರ ಸಂರಕ್ಷಣೆ ಕಾಯ್ದೆ-1976ರ ಸೆಕ್ಷನ್ 8ರ ಅನ್ವಯ ನಗರೀಕರಣಕ್ಕಾಗಿ 50ಕ್ಕೂ ಹೆಚ್ಚಿನ ಮರಗಳನ್ನು ಕಡಿಯಬೇಕಾದರೆ ಅಧಿಕಾರಿಗಳು, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು. ಆ ನಂತರ ಎಲ್ಲರೂ ಸೇರಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ. ಮರ ಕಡಿಯಲು ನಾವು ಅನುಮತಿ ನೀಡಿದರೆ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಾರೆ. ಆದುದರಿಂದ ನಾವು ಈ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
25 ಸಾವಿರ ಕೋಟಿ ರೂ. ವೆಚ್ಚದ ಕಾರಿಡಾರ್ ಯೋಜನೆಯನ್ನು 2025-26ರ ವೇಳೆಗೆ ಪೂರ್ಣಗೊಳಿಸಲು ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಆದರೆ, ಈ ನಡುವೆ ಪರಿಸರವಾದಿಗಳು ಮರ ಕಡಿಯುವುದರ ಬದಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯೋಜನೆ ಕೈಗೆತ್ತಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. ಆದರೆ, ಕೆಆರ್ಡಿಸಿಎಲ್ ಅಧಿಕಾರಿಗಳು ಪರಿಸರವಾದಿಗಳ ಸಲಹೆಯನ್ನು ಪರಿಗಣಿಸುವ ಗೋಜಿಗೆ ಹೋಗುತ್ತಿಲ್ಲ.
ಕಾರಿಡಾರ್ ಯೋಜನೆ ಜಾರಿಯಾಗುವುದರಿಂದ ಪರಿಸರ ಮೇಲಾಗುವ ಪರಿಣಾಮ ಹಾಗೂ ಎಷ್ಟು ಪ್ರಮಾಣದಲ್ಲಿ ಹಾನಿಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದೇವೆ. ಅಲ್ಲದೆ, ಈ ಯೋಜನೆಯ ಪಾಲುದಾರ ಸಂಸ್ಥೆಗಳಿಂದಲೂ ಆನ್ಲೈನ್ ಮೂಲಕ ಸಲಹೆ ಪಡೆಯುತ್ತಿದ್ದೇವೆ. ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಆರಂಭಿಸುವ ಉದ್ದೇಶವಿದೆ ಎಂದು ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು ಹೇಳಿದ್ದಾರೆ.