ಯಡಿಯೂರಪ್ಪ ಹಣದ ಆಮಿಷದ ಆರೋಪ: ಫೋನ್ ಸಂಭಾಷಣೆ ತನಿಖೆಗೆ ಕೋರಿ ರಾಜ್ಯಪಾಲರಿಗೆ ಮನವಿ
ಬೆಂಗಳೂರು, ಫೆ.9: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಶಿವನಗೌಡ ಪುತ್ರನ ನಡುವಿನ ಫೋನ್ ಸಂಭಾಷಣೆ ಅಸಲು ವಿಚಾರ ಬಯಲಿಗೆ ತರುವಂತೆ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಶನಿವಾರ ರಾಜ್ಯಪಾಲರ ಕಚೇರಿಗೆ ಧಾವಿಸಿದ ಒಕ್ಕೂಟದ ಕಾರ್ಯಕರ್ತರು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ಆದರೆ, ರಾಜ್ಯಪಾಲರು ಇಲ್ಲದಿದ್ದರಿಂದ ರಾಜಭವನದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆಗೂ ಮೊದಲು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿರುವ ಆಡಿಯೋದ ಅಸಲಿಯ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜೆಡಿಎಸ್ ಶಾಸಕರೊಬ್ಬರಿಗೆ ಹಣದ ಆಮಿಷವೊಡ್ಡಿ ಆಪರೇಷನ್ ಕಮಲ ಮಾಡಲು ಮುಂದಾಗಿದ್ದರು. ಅಲ್ಲದೆ, ವಿಧಾನಸಭೆಯ ಸಭಾಪತಿ ರಮೇಶ್ ಕುಮಾರ್ ಹಾಗೂ ನ್ಯಾಯಾಧೀಶರನ್ನು ಖರೀದಿ ಮಾಡಲಾಗಿದೆ ಎಂಬ ಅಂಶಗಳಿವೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲಿ ಸತ್ಯಾಸತ್ಯತೆ ಕುರಿತು ತನಿಖೆಗೆ ಆದೇಶಿಸಬೇಕು. ಸಾರ್ವಜನಿಕರಿಗೆ ಸ್ಪಷ್ಟತೆ ಸಿಗುವಂತಾಗಬೇಕು ಎಂದು ದೂರಿನಲ್ಲಿ ಅವರು ಹೇಳಿದ್ದಾರೆ.