ದೊಡ್ಡರಂಗೇಗೌಡರ ಸಾಹಿತ್ಯ ಓದುಗರನ್ನು ಸೆಳೆಯುತ್ತದೆ: ವೈ.ಕೆ. ಮುದ್ದುಕೃಷ್ಣ
ಬೆಂಗಳೂರು, ಫೆ.17: ಕವಿ ಡಾ.ದೊಡ್ಡರಂಗೇಗೌಡರ ಸಾಹಿತ್ಯ ಓದುಗರ ಗಮನವನ್ನು ಸೆಳೆಯುವಂತಹದ್ದು, ಅವರ ಕಥೆಗಳು ಆಸಕ್ತಿ ಅಂತರಂಗದ ಹುಡುಕಾಟವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ ಹೇಳಿದ್ದಾರೆ.
ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸದ್ಭಾವನಾ ಪ್ರತಿಷ್ಠಾನ ಆಯೋಜಿದ್ದ, ಡಾ.ದೊಡ್ಡರಂಗೇಗೌಡರ 74ನೇ ಜನ್ಮ ದಿನಾಚರಣೆಯ ಅಂಗವಾಗಿ ಸಮನ್ವಯ ಕಾವ್ಯ ಹಾಗೂ ಸಾಹಿತ್ಯ ಸಿಂಚನ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಏಷ್ಟೋ ಓದುಗರ ಜೀವನವನ್ನು ಡಾ.ದೊಡ್ಡರಂಗೇಗೌಡ ತಮ್ಮ ಬರವಣಿಗೆ ಮೂಲಕ ಬದಾಲಿಯಿಸಿದ್ದಾರೆ ಎಂದು ತಿಳಿಸಿದರು.
ವಿಮರ್ಶಕನೊಬ್ಬ ಕತೆ, ಕಾದಂಬರಿ ಬರೆದರೆ ಅಚ್ಚರಿಯಿಂದ ನೋಡುವುದು ಸಹಜ. ಯಾವ ದೃಷ್ಟಿಕೋನದಲ್ಲಿ ಅದನ್ನು ನೋಡಬೇಕೆಂದು ಪ್ರಶ್ನೆ ಹುಟ್ಟುತ್ತವೆ. ವಿಮರ್ಶಕರು ತಾತ್ವಿಕವಾಗಿ ಹೇಳಲು ಪ್ರಯತ್ನಿಸಿದ್ದಾನೆಯೇ ಎಂದು ಅನುಮಾನ ಪ್ರಾರಂಭವಾಗುತ್ತವೆ. ದೊಡ್ಡರಂಗೇಗೌಡರ ಕೃತಿಗಳಲ್ಲಿ ಸಂಬಂಧಗಳ ತಾಕಲಾಟ ಗುರುತಿಸುವಂತಹದ್ದು ಎಂದು ಹೇಳಿದರು.
ದೊಡ್ಡರಂಗೇಗೌಡರ ಬರವಣಿಗೆ ಹಲವು ಪ್ರಯಾಣಗಳ ಕಥೆ ಎನಿಸುತ್ತದೆ. ಸಮಾಜ ಹಿನ್ನೆಲೆಯಲ್ಲಿದ್ದು, ಮನುಷ್ಯ ಸಂಬಂಧಗಳು ಮುಂಚೂಣಿಯಲ್ಲಿರುತ್ತವೆ. ಅವರು ಸಿನಿಮಾ ರಂಗದಲ್ಲಿಯೂ ಕೂಡ ತಮ್ಮ ಬರವಣಿಗೆಯ ಹಾಡುಗಳಿಂದ ಖ್ಯಾತಿ ಪಡೆದಿದ್ದಾರೆ ಎಂದರು.
ಶ್ರೀ ಕೃಷ್ಣದೇವರಾಯ ವಿವಿಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್. ಶೇಷಶಾಸ್ತ್ರಿ ಮಾತನಾಡಿ, ಎಲ್ಲಿ ನೈತಿಕತೆ ಉಳಿದಿರುತ್ತೇಯೂ, ಅಲ್ಲಿ ಕಾವ್ಯ, ವಿಮರ್ಶೆ ಹುಟ್ಟಲು ಸಾಧ್ಯ. ಈ ಕೃತಿಗಳು ದೊಡ್ಡರಂಗೇಗೌಡರ ಸಹೃದಯತೆಯನ್ನು ಸಾರುತ್ತವೆ. ನವೋದಯದ ಕಾವ್ಯ ಅರ್ಥ ಮಾಡಿಕೊಳ್ಳಲು ಈ ಕೃತಿಗಳನ್ನು ಓದಬೇಕು. ಸಾಹಿತಿಗಳ ಮೊದಲು ವಿಮರ್ಶಕರಾಗಲು ನೋಡುತ್ತಾರೆ. ಆದರೆ, ದೊಡ್ಡರಂಗೇಗೌಡರ ಔದಾರ್ಯ ದೊಡ್ಡದು. ಸಿದ್ಧಾಂತದಲ್ಲಿ, ಮಾನವೀಯತೆ, ಸಮಾಜ ಸರಿದಾರಿಗೆ ಕೊಂಡೊಯ್ಯುವಲ್ಲಿ ಬದ್ಧತೆಯಿಂದ ಇದ್ದವರು ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಮೈಸೂರು ವಿವಿಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಭೈರಮೂರ್ತಿ, ಸಾಂಸ್ಕೃತಿಕ ಚಿಂತಕ ದೊಡ್ಡರಂಗೇಗೌಡ, ಕವಿ ತಾ.ಸಿ. ತಿಮ್ಮಯ್ಯ, ಪತ್ರಕರ್ತ ಡಾ.ಭಾಷಗೂಳ್ಯಂ, ಕವಿ ಸುಬ್ಬ ಹೊಲೆಯಾರ್, ಪ್ರತಿಷ್ಠಾನದ ಅಧ್ಯಕ್ಷ ಎಂ.ಪ್ರಕಾಶ್ ಮೂರ್ತಿ, ಡಿ.ಎಸ್.ಶ್ರೀನಿವಾಸ್ ಪ್ರಸಾದ್, ಜೇನುಗೂಡು ಸಂಸ್ಥೆಯ ಮಹೇಶ್ ಮತ್ತಿತರರು ಇದ್ದರು.