ಪಾಕ್-ಭಾರತ ನಡುವೆ ಶಾಂತಿ ನೆಲೆಸಲಿ: ಪಿಯುಸಿಎಲ್ ರಾಷ್ಟ್ರಾಧ್ಯಕ್ಷ ರವಿಕಿರಣ್ ಜೈನ್
ಬೆಂಗಳೂರು, ಮಾ.2: ಪಾಕಿಸ್ತಾನ ಹಾಗೂ ಭಾರತದ ನಡುವೆ ಶಾಂತಿ ಸ್ಥಾಪನೆಗಾಗಿ ಕೇಂದ್ರ ಸರಕಾರ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂದು ಪಿಯುಸಿಎಲ್ನ ರಾಷ್ಟ್ರಾಧ್ಯಕ್ಷ ರವಿಕಿರಣ್ ಜೈನ್ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಪುಲ್ವಾಮದಲ್ಲಿ ಪಾಕ್ ಭಯೋತ್ಪಾದಕರು ಆತ್ಮಹತ್ಯಾ ದಾಳಿ ನಡೆಸಿ ಭಾರತದ 40 ಕ್ಕೂ ಅಧಿಕ ಯೋಧರನ್ನು ಕೊಂದಿದ್ದರು. ಇದಾದ ಬಳಿಕ ಭಾರತ ಪ್ರತೀಕಾರಕ್ಕಾಗಿ ಪಾಕ್ ಭಯೋತ್ಪಾದಕ ನೆಲೆಗಳ ಮೇಲೆಯೂ ದಾಳಿ ನಡೆಸಿತ್ತು. ಈ ಘಟನೆಗಳ ನಡುವೆ ಎರಡೂ ದೇಶಗಳ ಮಧ್ಯೆ ಯುದ್ಧ ನಡೆಯುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೇಳಿದರು.
ಎರಡೂ ದೇಶಗಳ ನಡುವೆ ಯುದ್ಧ ನಡೆಯುವುದರಿಂದ ಯೋಧರಲ್ಲದೆ ಸಾಮಾನ್ಯ ಜನರೂ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಎರಡೂ ದೇಶಗಳ ನಾಯಕರು ಶಾಂತಿ ಕಾಪಾಡುವ ಸಂಬಂಧ ಮಾತುಕತೆ ನಡೆಸಿ ಒಮ್ಮತ ಒಪ್ಪಂದಕ್ಕೆ ಬರಬೇಕಾಗಿದೆ ಎಂದು ಪಿಯುಸಿಎಲ್ನ ರಾಷ್ಟ್ರೀಯ ಸಮಾವೇಶ ಪ್ರತಿಪಾದಿಸಿದೆ ಎಂದು ಅವರು ತಿಳಿಸಿದರು.
ಕಳೆದ ವರ್ಷ ನಡೆದ ಭೀಮಾ ಕೊರೆಂಗಾವ್ ಪ್ರಕರಣದಲ್ಲಿ ಪಿಯುಸಿಎಲ್ನ ರಾಷ್ಟ್ರೀಯ ಕಾರ್ಯದರ್ಶಿ ಸುಧಾಭಾರದ್ವಾಜ್ ಸೇರಿದಂತೆ ಹಲವು ಪ್ರಗತಿಪರ ಹೋರಾಟಗಾರರು, ಲೇಖಕರನ್ನು ಸಂವಿಧಾನದ ವಿರುದ್ಧವಾಗಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಘಟನೆಯನ್ನು ಸಮಾವೇಶ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ಆಶಯಗಳು ನಾಶವಾಗುತ್ತಿದ್ದು, ಸರ್ವಾಧಿಕಾರಿ ಧೋರಣೆಗಳು ಬೆಳೆಯುತ್ತಿವೆ. ಬಹುತ್ವ ಭಾರತದ ಕಲ್ಪನೆ ಇಲ್ಲವಾಗಿಸಿ ಒಂದು ಧರ್ಮದ ರಾಷ್ಟ್ರ ಕಟ್ಟಲು ಮುಂದಾಗುತ್ತಿದ್ದಾರೆ. ಸಂವಿಧಾನವನ್ನು ನಾಶ ಮಾಡಲು ವ್ಯವಸ್ಥಿತವಾದ ಹುನ್ನಾರ ಮಾಡಲಾಗುತ್ತಿದೆ. ವ್ಯಾಪಕವಾಗಿ ಕೋಮುವಾದ ಬೆಳೆಯುತ್ತಿದ್ದು, ಫ್ಯಾಸಿಸ್ಟ್ ಧೋರಣೆಗಳು ಅತಿಯಾಗುತ್ತಿದೆ ಎಂದು ಸಮಾವೇಶ ಆತಂಕ ವ್ಯಕ್ತಪಡಿಸಿದೆ ಎಂದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಪ್ರದೇಶದಲ್ಲಿರುವ ಆದಿವಾಸಿ, ಬುಡಕಟ್ಟು ಜನರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಈ ಮೂಲಕ ಅರಣ್ಯ ಕಾಯ್ದೆಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಕೂಡಲೇ ಇದನ್ನು ನಿಲ್ಲಿಸಬೇಕು ಹಾಗೂ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಸೂಕ್ತವಾದ ಸಲಹೆ ನೀಡಬೇಕು ಎಂದು ಪಿಯುಸಿಎಲ್ ರಾಷ್ಟ್ರೀಯ ಸಮಾವೇಶ ನಿರ್ಣಯ ಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಸುರೇಶ್, ರಾಜ್ಯಾಧ್ಯಕ್ಷ ವೈ.ಜೆ.ರಾಜೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.