ಮಹಿಳಾ ಉದ್ಯಮಿಗಳ ಯಶಸ್ಸಿಗೆ ಪ್ರೋತ್ಸಾಹ ಅಗತ್ಯ: ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಾಪ್ರಭಾ
ಬೆಂಗಳೂರು, ಮಾ. 8: ಸಮಾಜದಲ್ಲಿ ಮಹಿಳೆಯರು ಹಾಗೂ ಮಹಿಳಾ ಉದ್ಯಮಿಗಳು ಉನ್ನತ ಪ್ರಗತಿಗೆ ಪ್ರತಿಯೊಬ್ಬರ ಸಹಾಯ, ಪ್ರೋತ್ಸಾಹ ಅತ್ಯಗತ್ಯ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಾಪ್ರಭಾ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಐಎಎಸ್ ಅಧಿಕಾರಿಗಳ ಕ್ಲಬ್ ಸಭಾಂಗಣದಲ್ಲಿ ಮಹಿಳಾ ಉದ್ಯಮಿಗಳ ಅಸೋಸಿಯೇಷನ್ ಹಾಗೂ ರಾಜ್ಯ ಸರಕಾರ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಕ್ಕೆ ಮಹಿಳೆಯರು ನೀಡಿದ ಕೊಡುಗೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಮನ್ನಣೆ ಒದಗಿಸುವಲ್ಲಿ ಸರಕಾರವು ಬಹುಮುಖ್ಯ ಪಾತ್ರವನ್ನು ವಹಿಸಬೇಕು. ‘ಉಬುಂಟು’ ಒಕ್ಕೂಟವು ನಮ್ಮಿಂದಲೇ ನಾನು ಎಂಬ ಉತ್ಸಾಹವನ್ನು ನೀಡುತ್ತದೆ ಎಂದರು.
ಇದರ ಮುಖ್ಯ ಉದ್ದೇಶ ಗ್ರಾಮೀಣ ಮತ್ತು ನಗರ ಮಹಿಳಾ ಉದ್ಯಮಿಗಳ ಅಂತರವನ್ನು ಕಡಿಮೆ ಮಾಡಿ ಆ ನಂತರ ಒಗ್ಗೂಡಿಸುವುದಾಗಿದೆ. ಇದರಿಂದ ಮಹಿಳೆಯರ ಸಮಗ್ರ ಅಭಿವೃದ್ಧಿಯ ಜತೆಗೆ ಆರೋಗ್ಯ, ಶಿಕ್ಷಣ, ರಕ್ಷಣೆ, ಆರ್ಥಿಕ ಸಹಾಯಗಳು ಒಂದೇ ಒಕ್ಕೂಟದಲ್ಲಿ ಒದಗಿದಂತೆ ಆಗುತ್ತದೆ ಎಂದು ರತ್ನಾಪ್ರಭಾ ಹೇಳಿದರು.
ಕೈಗಾರಿಕೆ, ವಾಣಿಜ್ಯ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ತಂತ್ರಜ್ಞಾನವು ಆಧುನಿಕ ಸಮಾಜವನ್ನು ಹೊಸ ಎತ್ತರಕ್ಕೆ ಸಾಗಿಸಿದ್ದು, ತಂತ್ರಜ್ಞಾನದಿಂದ ಮಹಿಳೆಯರು ಹಲವು ಸಾಧನೆಯಲ್ಲಿ ಪುರುಷರೊಂದಿಗೆ ಒಟ್ಟಾಗಿ ಹೆಜ್ಜೆ ಹಾಕಲು ಅನುಕೂಲವಾಗಿದೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸರಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.