ಪರೋಪಕಾರ, ಪ್ರಕೃತಿ ಧರ್ಮ ಪಾಲನೆಯಿಂದ ನೆಮ್ಮದಿ: ಮಾತಾ ಅಮೃತಾನಂದಮಯಿ
ಮಂಗಳೂರು, ಮಾ.8: ಪರೋಪಕಾರ, ಪ್ರಕೃತಿ ಧರ್ಮ ಪಾಲಿಸುವ ಮೂಲಕ ಜೀವನದಲ್ಲಿ ನೆಮ್ಮದಿ ಹೊಂದಬಹುದು ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅಮ್ಮ ಹೇಳಿದರು.
ನಗರದ ಬೋಳೂರು ಸುಲ್ತಾನ್ಬತ್ತೇರಿ ರಸ್ತೆಯ ಅಮೃತ ವಿದ್ಯಾಲಯಂ ಮೈದಾನದಲ್ಲಿ ‘ಅಮೃತ ಸಂಗಮ -2019’- ಶ್ರೀ ಬ್ರಹ್ಮಸ್ಥಾನ ಮಹೋತ್ಸವ ಅಂಗವಾಗಿ ಶುಕ್ರವಾರ ಅವರು ಪ್ರವಚನ ನೀಡಿದರು.
ಪ್ರಕೃತಿ ಯಾವಾಗಲೂ ಮಾನವನ ಪರ. ಆದರೆ, ಅತಿಬಳಕೆ, ಮಾಲಿನ್ಯ ಮತ್ತು ನಾಶದಿಂದ ಪ್ರಕೃತಿ ಮುನಿಯುತ್ತದೆ. ಪ್ರಕೃತಿಯ ಬಗ್ಗೆ ಗೌರವಾದರ ಇದ್ದಲ್ಲಿ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳಬಹುದು. ಮರಗಿಡಗಳು ಮನುಷ್ಯನಿಂದ ಏನನ್ನೂ ಪಡೆಯದೇ ಮಾನವ ಕುಲಕ್ಕೆ ಉಪಕಾರಿಯಾಗಿವೆ. ಆದರೆ, ಇಂದು ವಾಹನಗಳ ಹೊಗೆ, ಕಾರ್ಖಾನೆ ತ್ಯಾಜ್ಯ, ರಾಸಾಯನಿಕ ಗೊಬ್ಬರ ಬಳಕೆಯಿಂದ ಪ್ರಕೃತಿ ಕಲುಷಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿಸಿದರು.
ಅತಿಥಿಯಾಗಿದ್ದ ಕಾರ್ಪೊರೇಶನ್ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಪಿ.ವಿ. ಭಾರತಿ ಮಾತನಾಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಪತ್ರಕರ್ತೆ ಸಂಧ್ಯಾ ಎಸ್. ಪೈ, ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಚಂದ್ರಶೇಖರ್, ಒಎನ್ಜಿಸಿ ಎಂಆರ್ಪಿಎಲ್ ಜಿಎಂ ಬಿಎಚ್ವಿ ಪ್ರಸಾದ್, ಟಿ.ಎ. ಅಶೋಕನ್ ಅತಿಥಿಯಾಗಿದ್ದರು.
ಅಮೃತಾನಂದಮಯಿ ಸೇವಾ ಸಮಿತಿ ಮಂಗಳೂರು ಅಧ್ಯಕ್ಷ ಪ್ರಸಾದ್ರಾಜ್ ಕಾಂಚನ್ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಅಮೀನ್ ವಂದಿಸಿದರು.
ಅಮೃತ ಸಂಗಮ -2019’- ಶ್ರೀ ಬ್ರಹ್ಮಸ್ಥಾನ ಮಹೋತ್ಸವ ಅಂಗವಾಗಿ ಅಮೃತ ಶ್ರೀ ಯೋಜನೆ ಸದಸ್ಯರಿಗೆ ಸೀರೆ ವಿತರಣೆ, 40 ಮಂದಿ ದಿವ್ಯಾಂಗರಿಗೆ ಗಾಲಿ ಕುರ್ಚಿ ವಿತರಣೆ, 22 ಮಂದಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ, ಅಮೃತ ಶ್ರೀ ಯೋಜನೆಯ ಮಹಿಳಾ ಸ್ವಾವಲಂಬಿ, ಸ್ವ ಉದ್ಯೋಗ ಯೋಜನೆ ಅಂಗವಾಗಿ 30 ಮಂದಿಗೆ ಹೊಲಿಗೆ ಯಂತ್ರ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ವಿತರಣೆ, ಬಾಳೆ ನಾರು ಮತ್ತು ಹತ್ತಿಯಿಂದ ನಿರ್ಮಿಸಿದ ರಸಾಯನಿಕ ಮುಕ್ತ ‘ಸೌಖ್ಯಂ’ ಸ್ಯಾನಿಟರಿ ಪ್ಯಾಡ್ ವಿತರಣೆ, ಅಮಲ ಭಾರತ (ಸ್ವಚ್ಛ ಭಾರತ) ಅಭಿಯಾನದ ಅಂಗವಾಗಿ ಸುಲ್ತಾನ್ಬತ್ತೇರಿಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ಮಾದರಿಯ ಶೌಚಗೃಹ ನಿರ್ಮಾಣಕ್ಕೆ ಚಾಲನೆ, ಅಮೃತ ಸಂಗಮ ಸ್ಮರಣ ಸಂಚಿಕೆ ಬಿಡುಗಡೆ ಈ ಸಂದರ್ಭ ನಡೆಯಿತು.