ರಾಜಕೀಯ ಏಕತೆಯಿಂದಾಗಿ ದ.ಕ. ಜಿಲ್ಲೆಯ ಅಭಿವೃದ್ಧಿ: ಆರ್.ವಿ.ದೇಶಪಾಂಡೆ
ಮೂಡುಬಿದಿರೆ ತಾಲೂಕು ಉದ್ಘಾಟನೆ, ಮಿನಿ ವಿಧಾನ ಸೌಧಕ್ಕೆ ಶಂಕುಸ್ಥಾಪನೆ
ಮೂಡುಬಿದಿರೆ: ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಬೇಕು. ಅಭಿವೃದ್ಧಿಯ ವಿಚಾರ ಬಂದಾಗ ಏಕತೆಯಿಂದ ಸ್ಪಂದಿಸಬೇಕು. ಈ ಕಾರಣ ದಿಂದಾಗಿಯೇ ದಕ್ಷಿಣ ಕನ್ನಡ ಜಿಲ್ಲೆ ನಿರಂತರ ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿದೆ. ಟಿ.ಎ.ಪೈ, ಟಿ.ಎಂ.ಎ.ಪೈ, ಯು.ಶ್ರೀನಿವಾಸ ಮಲ್ಯ ಅವರು ಈ ನಿಟ್ಟಿನಲ್ಲಿ ಹಾಕಿಕೊಟ್ಟಿರುವ ಆದರ್ಶದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ ಎಂದು ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ಶುಕ್ರವಾರ ಅಪರಾಹ್ನ ಪದ್ಮಾವತಿ ಕಲಾ ಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಸಮಾರಂಭದಲ್ಲಿ ಮೂಡುಬಿದಿರೆ ತಾಲೂಕು ಉದ್ಘಾಟನೆ ಯನ್ನು ಶಿಲಾಫಲಕಗಳು, ಮಿನಿ ವಿಧಾನ ಸೌಧದ ಮಾದರಿ ಚಿತ್ರ, ತಾಲೂಕು ನಕಾಶೆಯ ಪರದೆ ಸರಿಸಿ, ಜ್ಯೋತಿ ಬೆಳಗಿಸಿ ಮಾತನಾಡಿದರು. ಇದಕ್ಕೂ ಮೊದಲು ತಹಶೀಲ್ದಾರ್ ಕಛೇರಿಯ ಆವರಣದಲ್ಲಿ ಮಿನಿವಿಧಾನ ಸೌಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಮೂಡುಬಿದಿರೆ ತಾಲೂಕಿನ ಮಿನಿವಿಧಾನ ಸೌಧಕ್ಕೆ ಈಗಾಗಲೇ 10 ಕೋಟಿ ರೂಪಾಯಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ತಾಲೂಕು ಉದ್ಘಾಟಿಸುತ್ತಿದ್ದೇನೆ. ಮೂಡುಬಿದಿರೆ, ಮೂಲ್ಕಿ ತಾಲೂಕುಗಳು ರಾಜ್ಯಕ್ಕೆ ಮಾದರಿಯಾಗಿ ಮೂಡಿಬರಲಿ ಎಂದ ಸಚಿವರು ಹೌಸಿಂಗ್ ಬೋರ್ಡ್ ಮೂಲಕ ನಡೆಯುವ ಈ ಕಾಮಗಾರಿಗೆ ತಕ್ಷಣ ಟೆಂಡರ್ ಕರೆದು ಪಾರದರ್ಶಕ, ಗುಣಮಟ್ಟದ ಕೆಲಸ ನಡೆಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ಕೃಷಿ ಭೂಮಿ ಪರಿವರ್ತನೆಯ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ಸರಳೀಕರಣ ಮಾಡಿರುವುದು ದೇಶದಲ್ಲೇ ರಾಜ್ಯದ ಮೊದಲ ಹೆಜ್ಜೆ. 94ಸಿಸಿ ಪ್ರಕರಣಗಳಲ್ಲಿ ಅರ್ಜಿ ಹಾಕಲು ಮಾರ್ಚ್31ರವರೆಗೆ ಅವಕಾಶ ವಿಸ್ತರಿಸಲಾಗಿದೆ. ಬಗರ್ಹುಕುಂನಲ್ಲಿ ಫಾರ್ಮ್ 50,53ಕ್ಕೆ 2020ರ ಎ20ರವರೆಗೆ ಅವಕಾಶವಿದೆ. ಫಾರ್ಮ್57,58ರ ಪ್ರಕರಣಗಳ ಅರ್ಜಿಗೆ ಮಾರ್ಚ್16 ಅಂತಿಮ ಅವಕಾಶವಿದೆ ಎಂದರು. ಬಗರ್ ಹುಕುಂ ಭೂಮಿಯನ್ನು 25 ವರ್ಷಗಳ ಬಳಿಕ ಪರಾಧೀನಕ್ಕೆ ಅವಕಾಶ ನೀಡುವ ಚಿಂತನೆ ಸರ್ಕಾರದ ಮುಂದಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಮೂಡುಬಿದಿರೆ ಮತ್ತು ಮುಲ್ಕಿ ತಾಲೂಕು ರಚನೆಯಿಂದ ಮಂಗಳೂರು ತಾಲೂಕಿನ ಒತ್ತಡ ಇಳಿದಂತಾಗಿದೆ. ಯೋಜಿತ ಬದ್ಧತೆಯಿಂದ ಪರಂಪರೆಯ ಮೂಡುಬಿದಿರೆಯನ್ನು ಉಳಿಸಿ ಬೆಳೆಸಬೇಕಾಗಿದೆ. ದೂರದರ್ಶಿತ್ವದಿಂದ ಮೂಡುಬಿದಿರೆಯಲ್ಲಿ ಆಡಳೀತಾತ್ಮಕ ಕಛೇರಿಗಳನ್ನು ಯೋಜಿಸಿ ಬೆಳೆಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಬೆಳ್ತಂಗಡಿ ತಾಲೂಕಿನ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಧರ್ಮಸ್ಥಳವನ್ನೂ ತಾಲೂಕಾಗಿ ಘೋಷಿಸುವಂತೆ ಅವರು ಕಂದಾಯ ಸಚಿವರನ್ನು ವಿನಂತಿಸಿದರು.
ಮೂಡುಬಿದಿರೆ ಶಾಸಕ ಎ. ಉಮಾನಾಥ ಕೋಟ್ಯಾನ್ ಅಧ್ಯಕ್ಷತೆವಹಿಸಿ ಜನತೆಯ ಪರವಾಗಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಅಭಿನಂದಿ ಸಿದರು. ತಾಲೂಕು ಉದ್ಘಾಟನೆಗೈದ ಕಂದಾಯ ಸಚಿವರು, ತಾಲೂಕು ರಚನೆಗಾಗಿ ಶ್ರಮಿಸಿದ ಮಾಜಿ ಸಚಿವರುಗಳಾದ ಕೆ. ಅಮರನಾಥ ಶೆಟ್ಟಿ ಹಾಗೂ ಕೆ. ಅಭಯಚಂದ್ರ ಜೈನ್ ಅವರನ್ನು ಸಮ್ಮಾನಿಸಲಾಯಿತು. ಮುಖ್ಯಮಂತ್ರಿಯವರ ಸಂಸದೀಯ (ಕಂದಾಯ) ಕಾರ್ಯದರ್ಶಿ ಐವನ್ ಡಿ.ಸೋಜಾ, ಶಾಸಕ ಕೆ.ಹರೀಶ್ ಕುಮಾರ್, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ದ.ಕ ಜಿಲ್ಲಾದಿಕಾರಿ ಎಸ್.ಸಸಿಕಾಂತ ಸೆಂಥಿಲ್ ಉಪಸ್ಥಿತರಿದ್ದರು.
ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಸ್ವಾಗತಿಸಿದರು. ತಹಶೀಲ್ದಾರ್ ಸುದರ್ಶನ ಬಿ.ಕೆ. ಅತಿಥಿಗಳನ್ನು ಗೌರವಿಸಿ ವಂದಿಸಿದರು. ಅಂಡಾರು ಗುಣಪಾಲ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಜೈನ್ ಹೈಸ್ಕೂಲ್ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಹಕ್ಕು ಪತ್ರ, ಪಿಂಚಣಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯಗಳ ವಿತರಣೆ ನಡೆಯಿತು.