ಟೀಕಿಸುವವರಿಗೆ ಅಭಿವೃದ್ಧಿಯ ಮೂಲಕ ಉತ್ತರ: ಯು.ಟಿ.ಖಾದರ್
ಅಸೈಗೋಳಿಯಲ್ಲಿ ಸಚಿವರಿಗೆ ಸಾರ್ವಜನಿಕ ಅಭಿನಂದನೆ
ಉಳ್ಳಾಲ: ಪ್ರತಿಪಕ್ಷದ ಕೆಲವರು ಮಂಗಳೂರು ಕ್ಷೇತ್ರಕ್ಕೆ ರಸ್ತೆ ಬಿಟ್ಟರೆ ಬೇರೆ ಅಭಿವೃದ್ಧಿ ಕೆಲಸ ಆಗಲಿಲ್ಲ ಎಂದು ಆರೋಪಿಸುತ್ತಿದ್ದರು. ತಾಲೂಕು ಮಟ್ಟಕ್ಕೆ ಸೀಮಿತವಾಗಿರುವ ಅಗ್ನಿಶಾಮಕ ಠಾಣೆ, ತಾಲೂಕು ಕ್ರೀಡಾಂಗಣದಂತಹ ಸೌಲಭ್ಯಗಳನ್ನು ಉಳ್ಳಾಲ ಹೋಬಳಿ ಆಗಿದ್ದರೂ ಲಭ್ಯವಾಗಿಲ್ಲ ಎಂದು ಟೀಕಿಸುತ್ತಾ ಒಂದು ಪಥದಲ್ಲಿ ನನಗೆ ಬಹಳಷ್ಟು ಯೋಜನೆ ತರಲು ಪ್ರೇರಣೆ ಆಗಿದ್ದಾರೆ. ಟೀಕಿಸುವವರಿಗೆ ಅಭಿವೃದ್ಧಿ ಮಾಡಿ ಉತ್ತರಿಸಿದ್ದೇನೆ. ಅವರಿಗೆ ನನ್ನ ಪರವಾಗಿ ಧನ್ಯವಾದಗಳು. ಹಾಗೆಯೇ ಉಳ್ಳಾಲ ತಾಲೂಕಿಗೆ 29 ಸರಕಾರಿ ಇಲಾಖೆಗಳು, ಆರ್ ಟಿ ಒ, ಅಗ್ನಿಶಾಮಕ ಠಾಣೆ, ತಾಲೂಕು ಕೋರ್ಟ್ ಮೊದಲಾದ ಎಲ್ಲ ಸೌಲಭ್ಯಗಳನ್ನು ನಮ್ಮ ಹಕ್ಕಾಗಿ ಬರಲಿದ್ದು ಅವೆಲ್ಲವನ್ನು ಇಂತಿಷ್ಟು ದೂರದಲ್ಲಿ ನಿರ್ಮಿಸುವ ಮೂಲಕ ಉಳ್ಳಾಲದ ಸಮಗ್ರ ಅಭಿವೃದ್ಧಿ ಕಣ್ತುಂಬಿಸಿಕೊಳ್ಳಲಿ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಉಳ್ಳಾಲ ನೂತನ ತಾಲೂಕು ಆಗಿ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಶ್ರಮಿಸಿದ ಸಚಿವ ಯು.ಟಿ. ಖಾದರ್ ಅವರನ್ನು ಅಭಿನಂದಿಸುವ ಪ್ರಯುಕ್ತ ಸಾರ್ವಜನಿಕ ಅಭಿನಂದನೆ ಸಮಿತಿ ಆಶ್ರಯದಲ್ಲಿ ಅಸೈಗೋಳಿಯಲ್ಲಿ ಗುರುವಾರ ನಡೆದ ಯು.ಟಿ. ಖಾದರ್ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಂಗಳೂರು ತಾಲೂಕಿನಲ್ಲಿ ಈಗಾಗಲೇ 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವುದರಿಂದ ಮುಲ್ಕಿ ಹಾಗೂ ಉಳ್ಳಾಲ ಭಾಗದ ಜನಸಾಂದ್ರತೆಯ ಒತ್ತಡ ತಗ್ಗಿಸುವ ನಿಟ್ಟಿನಲ್ಲಿಯೂ ಮುಲ್ಕಿ ಹಾಗೂ ಉಳ್ಳಾಲ ತಾಲೂಕು ಘೋಷಣೆ ಆಗಿರುವುದು ಜನಸಾಮಾನ್ಯರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಹಾಗೆಯೇ ಸದ್ದು ಗದ್ದಲ, ನಿರಶನ, ಹಲವು ದಶಕಗಳ ಹೋರಾಟ, ನಿರಂತರ ಪ್ರತಿಭಟನೆ ಅದ್ಯಾವುದೂ ಇಲ್ಲದೆ ಉಳ್ಳಾಲ ತಾಲೂಕು ರಚನೆ ಆಗಿದೆ. ಅದರ ಹಿಂದೆ ಸ್ವಾರಸ್ಯಕರ ಸಂಗತಿಗಳಿದ್ದು ಸದ್ಯಕ್ಕೆ ಹೇಳಲು ಅಸಾಧ್ಯ. ಮುಂದಿನ ದಿನಗಳಲ್ಲಿ ಯಾವುದಾದರೂ ಪುಸ್ತಕ ಬರೆಸುವ ಅವಕಾಶ ಸಿಕ್ಕಾಗ ಆ ಕುರಿತಾಗಿ ಜನತೆಯ ಮುಂದೆ ಸವಿವರವಾಗಿ ಹೇಳುತ್ತೇನೆ ಎಂದು ಹೇಳಿದರು.
ಹರೇಕಳದಲ್ಲಿ ನೂತನ ಡ್ಯಾಂ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮತ ನೀಡಿದ್ದಷ್ಟಲ್ಲದೆ ನನಗೋಸ್ಕರ ಪ್ರಾರ್ಥಿಸಿದ್ದು ಅದು ಹಂತಹಂತವಾಗಿ ಫಲ ನೀಡುತ್ತಿದ್ದು ಮಂಗಳೂರು ಕ್ಷೇತ್ರದಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದ್ದು ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಲು ಜನಪ್ರತಿನಿಧಿ ಗಳಿಗೆ ಹಾಗೂ ಅಧಿಕಾರಿಗಳಿಗೆ ಇಚ್ಛಾಶಕ್ತಿ ಮುಖ್ಯ ಎಂದು ನುಡಿದರು.
ಕುರ್ನಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಪ್ಪ ಕಾಜವ ಮಿತ್ತಕೋಡಿ ಅಧ್ಯಕ್ಷತೆ ವಹಿಸಿದ್ದರು. ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ ತಲಪಾಡಿ, ಉಳ್ಳಾಲ, ಸಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಗೂ ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ಧರ್ಮಗುರು ರೆ.ಫಾ. ಜೆ.ಪಿ. ಸಲ್ದಾನ ಕಾರ್ಯಕ್ರಮ ಉದ್ಘಾಟಿಸಿದರು.
ಸಾರ್ವಜನಿಕ ಅಭಿನಂದನಾ ಸಮಿತಿಯ ಸಂಚಾಲಕ ಕೆ. ರವೀಂದ್ರ ರೈ ಹರೇಕಳ ಅಭಿನಂದನಾ ಭಾಷಣ ಮಾಡಿದರು. ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕೊಣಾಜೆ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ರಘುರಾಮ ಕಾಜವ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಮಾಜಿ ಅಧ್ಯಕ್ಷ ಈಶ್ವರ ಉಳ್ಳಾಲ್, ಸಮಾಜ ಸೇವಕ ಪ್ರಸಾದ್ ರೈ ಕಲ್ಲಿಮಾರು, ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಮಮತಾ ಡಿ.ಎಸ್. ಗಟ್ಟಿ ಹಾಗೂ ಸಾಹುಲ್ ಹಮೀದ್, ಮಾಜಿ ಸದಸ್ಯ ಎನ್. ಎಸ್. ಕರೀಂ, ಕೊಣಾಜೆ ಗ್ರಾಮ ಪಂ. ಅಧ್ಯಕ್ಷ ನಝರ್ ಷಾ ಪಟ್ಟೋರಿ, ಎಸ್ಸೆಸ್ಸೆಫ್ ಮುಖಂಡರಾದ ಸಿದ್ದೀಕ್ ಮೋಂಟುಗೋಳಿ, ಕಾಂಗ್ರೆಸ್ ಮುಖಂಡರುಗಳಾದ ಸದಾಶಿವ ಉಳ್ಳಾಲ್, ಎನ್. ಪದ್ಮನಾಭ ನರಿಂಗಾನ, ವಿಶ್ವಕರ್ಮ ಸಮಾಜದ ಯೋಗೀಶ್ ಆಚಾರ್ಯ ಮುಡಿಪು ಹಾಗೂ ಅಭಿನಂದನಾ ಸಮಿತಿಯ ಪದಾಧಿಕಾರಿ ತ್ಯಾಗಂ ಹರೇಕಳ, ಶೌಕತ್ ಅಲಿ, ಸಂಘಟನಾ ಕಾರ್ಯದರ್ಶಿ ಮೆಗಾ ಸಲೀಂ, ಇಕ್ಬಾಲ್ ಉಪಸ್ಥಿತರಿದ್ದರು.
ತಾಲೂಕು ಪಂ. ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಹಿತ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿ ದರು. ಶಿಕ್ಷಕ ರವಿಶಂಕರ ರಾವ್ ಖಾದರ್ ಅಭಿವೃದ್ಧಿ ಕುರಿತಾದ ಸಾಹಿತ್ಯವುಳ್ಳ ಹಾಡು ಹಾಡಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್ ವಂದಿಸಿದರು.