ಕರ್ನಾಟಕದ ಕಿಚಿಡಿ ಸರಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ: ರಾಜನಾಥ್ ಸಿಂಗ್
ಮಂಗಳೂರಿನಲ್ಲಿ ಶಕ್ತಿ ಕೇಂದ್ರಗಳ ಪ್ರತಿನಿಧಿ ಸಮಾವೇಶ
ಮಂಗಳೂರು, ಮಾ. 9: ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ನ ಕಿಚಿಡಿ ಸರಕಾರವಿದೆ. ಇದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ರೈತರ ಸಾಲಮನ್ನಾದ ಭರವಸೆ ನೀಡಿರುವ ರಾಜ್ಯ ಸರಕಾರ ಅದನ್ನು ತ್ವರಿತವಾಗಿ ಈಡೇರಿಸುವಲ್ಲಿ ವಿಫಲವಾಗಿದೆ. ಸರಕಾರ ನುಡಿದಂತೆ ನಡೆಯುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ದ.ಕ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕೇಂದ್ರ ವ್ಯಾಪ್ತಿ ಶಕ್ತಿ ಕೇಂದ್ರಗಳ ಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತವನ್ನು ಶಕ್ತಿ ಶಾಲಿ ರಾಷ್ಟ್ರವಾಗಿ, ತಂತ್ರಜ್ಞಾನ, ಆರ್ಥಿಕವಾಗಿ ಸಮೃದ್ಧ ರಾಷ್ಟ್ರವಾಗಿ ರೂಪಿಸುವುದು ಸರಕಾರದ ನೀತಿಯಾಗಿದೆ. ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತ ವಿಶ್ವದ 6ನೆ ರಾಷ್ಟ್ರವಾಗಿದೆ. ದೇಶದಲ್ಲಿ ಕಂಡು ಬಂದ ಹಣದುಬ್ಬರ ವೇಗ ಶೇ 50ರಷ್ಟು ಕುಸಿತ ಕಂಡಿದೆ. ಶೌಚಾಲಯ ನಿರ್ಮಾಣದಲ್ಲಿ ಶೇ 99 ಪ್ರಗತಿ ಸಾಧಿಸಲಾಗಿದ್ದು, ಶೀಘ್ರದಲ್ಲಿ ಬಯಲು ಬಹಿರ್ದೇಸೆ ಮುಕ್ತ ದೇಶವಾಗಿ ಭಾರತ ಬದಲಾವಣೆಗೊಳ್ಳಲಿದೆ. ಸರಕಾರ ಈ ಬಾರಿಯ ಬಜೆಟ್ನಲ್ಲಿ ರೈತರಿಗೆ ವಾರ್ಷಿಕ 6 ಸಾವಿರ ಸಹಾಯಧನ ನೀಡುವ ರೈತ ಸಮ್ಮಾನ್ ಕಾರ್ಯಕ್ರಮ, 60 ವರ್ಷ ದಾಟಿದ ಅಸಂಘಟಿತ ವಲಯದ ಕಾರ್ಮಿಕರಿಗೆ 3000 ವಾರ್ಷಿಕ ಪಿಂಚಣಿ ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ. ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಪುಲ್ವಾಮ ಘಟನೆಯ ಬಳಿಕ ಭಾರತದ ನಿಲುವಿಗೆ ರಾಜತಾಂತ್ರಿಕ ಗೆಲುವು ಲಭಿಸಿದೆ
ಪುಲ್ವಾಮ ಘಟನೆಯ ಬಳಿಕ ಭಾರತ ತೆಗೆದುಕೊಂಡ ನಿಲುವಿಗೆ ವಿಶ್ವದಾದ್ಯಂತ ಭಾರತದ ಪರವಾದ ಬೆಂಬಲ ವ್ಯಕ್ತವಾಗಿದೆ. ಪಾಕಿಸ್ತಾನ ಚೀನಾದ ನೆರವು ದೊರೆಯದೆ ಎಕಾಂಗಿಯಾಗ ಬೇಕಾಯಿತು. ಭಾರತ ಸೇನೆ ಬಳಿಕ ನಡೆಸಿದ ವೈಮಾನಿಕ ದಾಳಿ ಭಯೋತ್ಪಾದಕರಿಗೆ ರಕ್ಷಣೆ ನೀಡುತ್ತಿರುವ ಪಾಕಿಸ್ತಾನಕ್ಕೆ ನೀಡಿದ ಎಚ್ಚರಿಕೆಯ ಸಂದೇಶವಾಗಿದೆ. ಆದರೆ ವಿಪಕ್ಷಗಳು ದಾಳಿಯಲ್ಲಿ ಎಷ್ಟು ಜನ ಭಯೋತ್ಪಾದಕರು ಸತ್ತಿದ್ದಾರೆ ಎಂದು ಸಂಶಯ ವ್ಯಕ್ತಪಡಿಸುತ್ತಿವೆ. ಭಾರತದ ವಾಯು ಸೇನೆಯ ಯೋಧರು ಯುದ್ಧ ವಿಮಾನಗಳ ಮೂಲಕ ಭಾರತದ ಗಡಿ ದಾಟಿ ಪಾಕಿಸ್ತಾನದೊಳಗೆ ನುಗ್ಗಿರುವುದು ಅಲ್ಲಿ ಪುಷ್ಪ ವೃಷ್ಟಿ ಗೆರೆಯಲು ಅಲ್ಲ. ಭಾರತದಲ್ಲಿ ಆತಂಕವಾದವನ್ನು ಸೃಷ್ಟಿ ಮಾಡುತ್ತಿರುವ ಭಯೋತ್ಫಾದಕರು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಬದ್ಧವಾಗಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅಲ್ಲಿನ ಜನರ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದು ರಾಜ್ನಾಥ ಸಿಂಗ್ ತಿಳಿಸಿದ್ದಾರೆ.
ಕರ್ನಾಟಕದ ಕಿಚಿಡಿ ಸರಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ
ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ನ ಕಿಚಿಡಿ ಸರಕಾರವಿದೆ. ಇದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ರೈತರ ಸಾಲಮನ್ನಾದ ಭರವಸೆ ನೀಡಿರುವ ರಾಜ್ಯ ಸರಕಾರ ಅದನ್ನು ತ್ವರಿತವಾಗಿ ಈಡೇರಿಸುವಲ್ಲಿ ವಿಫಲವಾಗಿದೆ. ಸರಕಾರ ನುಡಿದಂತೆ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿ ಲೋಕ ಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಪ್ರಧಾನಿ ಮೋದಿಗೆ ಶಕ್ತಿ ನೀಡಿ ಎಂದು ರಾಜ್ನಾಥ್ ಸಿಂಗ್ ಮನವಿ ಮಾಡಿದರು.
ಎಚ್ಡಿಕೆಯಿಂದ ವಿಶ್ವಾಸ ದ್ರೋಹ
ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಸಾಲ ಮನ್ನಾ ವಿಚಾರದಲ್ಲಿ ರಾಜ್ಯ ಜನತೆಗೆ ವಿಶ್ವಾಸ ದ್ರೋಹ ಎಸಗಿದೆ. ಈ ಹಿಂದೆಯೂ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಹೆಚ್ಡಿಕೆ ವಿಶ್ವಾಸ ದ್ರೋಹ ಎಸಗಿದ್ದಾರೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಸಮಾರಂಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಬಿ.ಎಸ್. ರಾಘವೇಂದ್ರ, ಶಾಸಕರಾದ ಕೋಟಾ ಶ್ರೀನಿವಾಸ ಪೂಜಾರಿ, ವೇದವ್ಯಾಸ ಕಾಮತ್, ಅಂಗಾರ, ಸುನಿಲ್ ಕುಮಾರ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ಶಿವಮೊಗ್ಗ ಜಿಲ್ಲಾಧ್ಯಕ್ಷ ರುದ್ರೇಗೌಡ, ಚಿಕ್ಕ ಮಗಳೂರು ಜಿಲ್ಲಾಧ್ಯಕ್ಷ ಜೀವರಾಜ್, ಬಿಜೆಪಿ ವಿಭಾಗೀಯ ಮುಖಂಡ ಪ್ರತಾಪ್ ಸಿಂಹ ನಾಯಕ್, ದಕ್ಷಿಣ ಕನ್ನಡ ಲೋಕ ಸಭಾ ಪ್ರಚಾರ ಸಮಿತಿಯ ಸಂಚಾಲಕ ಗೊಪಾಲ ಕೃಷ್ಣ ಹೇರಳೆ, ರಾಜ್ಯ ಬಿಜೆಪಿ ಕಾರ್ಯದರ್ಶಿ ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.