ಮಂಗಳೂರು: ಶ್ರೀನಿವಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅಪರೂಪದ ನರ ಶಸ್ತ್ರಚಿಕಿತ್ಸೆ
ಮಂಗಳೂರು, ಮಾ.9: ಸುರತ್ಕಲ್ ಸಮೀಪದ ಶ್ರೀನಿವಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಅಪರೂಪದ ಸಂಕೀರ್ಣ ನರ ಶಸ್ತ್ರಚಿಕಿತ್ಸೆ ನಡೆದಿದೆ. ಇದು ಶ್ರೀನಿವಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಅಪರೂಪರ ಶಸ್ತ್ರಚಿಕಿತ್ಸೆ ಎಂದು ಚಿಕಿತ್ಸೆ ನಡೆಸಿದ ನರರೋಗ ತಜ್ಞ ಡಾ. ದೀಪಕ್ ಸುರಪರಾಜು ಹೇಳಿದ್ದಾರೆ.
ಶನಿವಾರ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ. 4ರಂದು ಕಿನ್ನಿಗೋಳಿಯ 43ರ ಹರೆಯದ ಮಹಿಳೆ ಆಸ್ಪತ್ರೆಗೆ ಬಂದು ತಲೆನೋವು, ನಿದ್ದೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಅದರಂತೆ ಈ ಮಹಿಳೆಯನ್ನು ಪರೀಕ್ಷಿಸಿ ಮೆದುಳಿನ ಎಂಆರ್ಐ ಸ್ಕಾನ್ ಮಾಡಿಸಿದಾಗ ದೊಡ್ಡ ಗೆಡ್ಡೆ ಪತ್ತೆಯಾಗಿದೆ. ಇದರಿಂದಾಗಿ ಅಂಗಾಂಗ ಚಲನೆಗೆ ಅಡ್ಡಿ, ಮಾನಸಿಕ ಒತ್ತಡ, ಮಾತು ಕಡಿಮೆ, ಸ್ಮರಣಾ ಶಕ್ತಿಯೂ ಕುಂದಿತ್ತು. ಮಹಿಳೆ ಸಹಜ ಸ್ಥಿತಿಗೆ ಬರಬೇಕಾದರೆ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಆದರೆ, ಈ ಚಿಕಿತ್ಸೆಯು ಅಪಾಯಕಾರಿಯಾಗಿತ್ತು. ಸವಾಲನ್ನು ಸ್ವೀಕರಿಸಿದ ವೈದ್ಯಕೀಯ ತಂಡವು ಜ. 7ರಂದು ಈ ಮಹಿಳೆಗೆ ಸುಮಾರು 8 ಗಂಟೆಗಳ ಕಾಲ ಅತ್ಯಂತ ಸಂಕೀರ್ಣವಾದ ನರ ವೈಜ್ಞಾನಿಕ ಶಸ್ತ್ರಚಿಕಿತ್ಸೆ ನೀಡಿತು. ಅಂದರೆ ಆಧುನಿಕ ಆಪರೇಟಿವ್ ಸೂಕ್ಷ್ಮದರ್ಶಕ ಮತ್ತು ಮೇಲ್ವಿಚಾರಕ ಸಾಧನಗಳನ್ನು ಬಳಸಲಾಗಿತ್ತು. ಆ ಮೂಲಕ ಶ್ರೀನಿವಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯು ಪ್ರಪ್ರಥಮ ಬಾರಿಗೆ ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ಕೀರ್ತಿಗೆ ಪಾತ್ರವಾಗಿದೆ ಎಂದರು.
ಇದು ಕರಾವಳಿಯ ವೈದ್ಯಕೀಯ ವಲಯದಲ್ಲೊಂದು ಸಾಧನೆಯಾಗಿದೆ. ಈಗ ಈ ಮಹಿಳೆಯು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆದ 2 ದಿನದೊಳಗೆ ಇತರರ ಸಹಾಯವಿಲ್ಲದೆ ಈ ಮಹಿಳೆಯು ಸಹಜ ಸ್ಥಿತಿಗೆ ಮರಳಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮೆದುಳಿನ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆಯಲಾಗಿದೆ. ಮಹಿಳೆಯು ತನ್ನ ಆರೋಗ್ಯ ಸಮಸ್ಯೆಯಿಂದ ಸಂಪೂರ್ಣ ಹೊರ ಬಂದಿದ್ದು, ಯಾವುದೇ ವಿಕಿರಣ ಅಥವಾ ಕಿಮೋಥೆರಪಿಯ ಅಗತ್ಯವಿಲ್ಲ. ಶಸ್ತ್ರಚಿಕಿತ್ಸೆ ಪಡೆದ 5ನೆ ದಿನದಂದೇ ಮಹಿಳೆಯು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ತಲೆನೋವು, ಅರೆನಿದ್ರಾವಸ್ಥೆ, ಮಬ್ಬು ದೃಶ್ಯ, ಡಬಲ್ ದೃಷ್ಟಿ, ವಾಂತಿ, ಸ್ಮರಣಾ ಶಕ್ತಿ ಕುಂದುವಂತಹ ಗುಣಲಕ್ಷಣಗಳಿರುವವರು ಸಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ಆರಂಭಿಕ ಹಂತದಲ್ಲೇ ರೋಗವನ್ನು ಗುಣಪಡಿಸಲು ಸಾಧ್ಯ ಎಂದು ಡಾ. ದೀಪಕ್ ಸುರಪರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ರಿಜಿಸ್ಟ್ರಾರ್ ಡಾ. ಅನಿಲ್ ಕುಮಾರ್, ಅಧೀಕ್ಷಕ ಡಾ. ಅಮರ್, ಡಾ. ಉದಯ ಕುಮಾರ್ ರಾವ್, ನವೀನ್ ಭಂಡಾರಿ, ಭಾಸ್ಕರ ಅರಸ್ ಮತ್ತಿತರರು ಉಪಸ್ಥಿತರಿದ್ದರು.