ಬೋಳಾರದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಮಂಗಳೂರು, ಮಾ.9: ಮಹಿಳೆಯರಿಗೆ ರಾಜಕೀಯ ಅಧಿಕಾರ, ಆರ್ಥಿಕ ಸಬಲೀಕರಣ ಹಾಗೂ ಸಾಮಾಜಿಕ ತಾರತಮ್ಯದಿಂದ ಬಿಡುಗಡೆ ದೊರೆಯ ಬೇಕಿದ್ದರೆ ಮಹಿಳಾ ಸಂಘಟನೆಯನ್ನು ಬಲಪಡಿಸಿ ಹೋರಾಟಗಳನ್ನು ಕಟ್ಟುವುದೇ ಮಹಿಳಾ ದಿನದ ಪ್ರಮುಖ ಅಂಶವಾಗಿದೆ ಎಂದು ಸಮುದಾಯ ಸಾಂಸ್ಕೃತಿಕ ಸಂಘಟನೆಯ ಮುಖಂಡ ವಾಸುದೇವ ಉಚ್ಚಿಲ ಹೇಳಿದರು.
ದ.ಕ.ಜಿಲ್ಲಾ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಮತ್ತು ಜನವಾದಿ ಮಹಿಳಾ ಸಂಘದ ಜಿಲ್ಲಾ ಸಮಿತಿಯು ನಗರದ ಬೋಳಾರದ ಕಾರ್ಮಿಕ ಸಂಘದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೂರು ವರ್ಷಗಳಿಗೂ ಹಿಂದೆ ದುಡಿಯುವ ಮಹಿಳೆಯರ ವೇತನ, ದುಡಿಮೆಯ ಕಾಲಾವಧಿಯಲ್ಲಿದ್ದ ತಾರತಮ್ಯದ ವಿರುದ್ಧ ಮಹಿಳೆಯ ಹೋರಾಟವು ವಿಶ್ವ ಮಹಿಳಾ ದಿನದ ಆಚರಣೆಗೆ ಎಡೆಮಾಡಿತು. ಇಂದಿನ ಕಾಲಘಟ್ಟದಲ್ಲಿ ಮಹಿಳೆಯರಿಗೆ ತೋರುವ ಸಾಮಾಜಿಕ ತಾರತಮ್ಯ, ಆರಾಧನಾ ಹಕ್ಕಿನ ವಂಚನೆ, ಅತ್ಯಾಚಾರಗಳ ವಿರುದ್ಧವಾಗಿಯೂ ಮಹಿಳಾ ಚಳುವಳಿ ಸಾಗಿದೆ. ಭಾರತದ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಸ್ಥಾನಗಳ ಮೀಸಲಾತಿಗಾಗಿ ಮಂಡಿಸಲಾಗಿರುವ ಮಸೂದೆಯು ಕಳೆದ 23 ವರ್ಷಗಳಲ್ಲಿ ಬೇರೆ ಬೇರೆ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದಲ್ಲಿ ಬಂದಾಗಲೂ ಕಾನೂನು ಆಗದೆ ಇರುವುದು ಖೇದಕರ ಎಂದು ವಾಸುದೇವ ಉಚ್ಚಿಲ ನುಡಿದರು.
ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಸಿಐಟಿಯು ದ.ಕ.ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು.
ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ದ.ಕ.ಸಂಚಾಲಕಿ ಪದ್ಮಾವತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜನವಾದಿ ಮಹಿಳಾ ಸಂಘದ ದ.ಕ.ಜಿಲ್ಲಾಧ್ಯಕ್ಷೆ ಜಯಂತಿ ಬಿ.ಶೆಟ್ಟಿ, ಕಾರ್ಯದರ್ಶಿ ರಾಧಾ ಮೂಡುಬಿದಿರೆ ಉಪಸ್ಥಿತರಿದ್ದರು. ವಿಲಾಸಿನಿ ವಂದಿಸಿದರು.