ಮಂಗಳೂರು: ಎನ್ಡಬ್ಲುಎಫ್ನಿಂದ ಮಹಿಳಾ ದಿನಾಚರಣೆ
ಮಂಗಳೂರು, ಮಾ.9: ನ್ಯಾಷನಲ್ ವಿಮೆನ್ಸ್ ಫ್ರಂಟ್ ಮಂಗಳೂರು ತಾಲೂಕು ವತಿಯಿಂದ ‘ಆಗದಿರಲಿ ಸಂತ್ರಸ್ತರು ಹರಿಯದಿರಲಿ ಕಣ್ಣೀರು’ ಎಂಬ ಘೋಷಣೆಯಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಶುಕ್ರವಾರ ನಗರದ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಿತು.
ಎನ್ಡಬ್ಲುಎಫ್ ರಾಷ್ಟ್ರೀಯ ಸಮಿತಿಯ ಸದಸ್ಯೆ ನೌಶೀರಾ ಮಾತನಾಡಿ ಮಹಿಳಾ ದೌರ್ಜನ್ಯದಲ್ಲಿ ಭಾರತ ಮೊದಲ ಸ್ಥಾನದಲ್ಲಿರುವುದು ದುರದೃಷ್ಟಕರ. ಮಹಿಳೆಯರು ನವ ಉದಾರೀಕರಣ ನೀತಿಯಿಂದಾಗಿ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಸರಕಾರವು ತನ್ನ ಜವಾಬ್ದಾರಿಯನ್ನು ಅರಿಯದೆ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಲ್ಲಿ ವಿಫಲವಾಗುತ್ತಿದೆ. ಆದುದರಿಂದ ಆತ್ಮರಕ್ಷಣೆಗೆ ತರಬೇತಿಯನ್ನು ಪಡೆಯಬೇಕು. ಸಾಮಾಜಿಕ, ರಾಜಕೀಯ ವಿಷಯಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆತ್ಮರಕ್ಷಣಾ ತರಬೇತುದಾರೆ ಝಕಿಯಾ ಯಾಸ್ಮೀನ್ ಅವರಿಂದ ಮಹಿಳೆಯರಿಗೆ ಆತ್ಮರಕ್ಷಣಾ ಕಲೆಯ ಪಾತ್ಯಕ್ಷತೆ ನಡೆಯಿತು. ಈ ಸಂದರ್ಭ ನಗರದಲ್ಲಿ ಜನಾಝಾ ಪರಿಪಾಲನಾ ಮಾಡುವ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು.
ಸಂಘಟನೆಯ ವತಿಯಿಂದ ನಡೆಸಿದ ಹೊಲಿಗೆ ತರಬೇತಿಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅಲ್ಲದೆ ದಿನಾಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾಧ್ಯಕ್ಷೆ ಝುಲೇಕಾ ಇಲ್ಯಾಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉಪನ್ಯಾಸಕಿ ನಮಿತಾ ಕೆ., ಕ್ಯಾಂಪಸ್ ಫ್ರಂಟ್ನ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯೆ ಮುಫೀದಾ, ಡಾ. ಅಸ್ಮತ್ ಉಪಸ್ಥಿತರಿದ್ದರು.
ರಮೀಝಾ ಸ್ವಾಗತಿಸಿದರು. ಶಹನಾಝ್ ವಂದಿಸಿದರು. ಮಿನಾಝ್ ಕಾರ್ಯಕ್ರಮ ನಿರೂಪಿಸಿದರು.