ಹಿಂದುತ್ವಕ್ಕಾಗಿ ಹಪತಪಿಸುತ್ತಿರುವ ಕಾಂಗ್ರೆಸ್ :ಎಸ್ಡಿಪಿಐ ಟೀಕೆ
ಮಂಗಳೂರು, ಮಾ.9: ನಗರ ಹೊರವಲಯದ ಅಡ್ಯಾರ್ ಗಾರ್ಡನ್ನಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಭಾಷಣಗೈದಿದ್ದ ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹೀಂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಕಟ್ಟಿಸಿ ಕೊಡುತ್ತೇವೆ ಎಂಬ ಮಾತುಗಳನ್ನಾಡಿ ಕಳೆದ 26 ವರ್ಷಗಳಿಂದ ಬಾಬರಿ ಮಸ್ಜಿದ್ನ ಪುನಃ ನಿರ್ಮಾಣಕ್ಕಾಗಿ ಕಾಯುತ್ತಿರುವ ಈ ದೇಶದ ಮುಸ್ಲಿಂ ಸಮುದಾಯಕ್ಕೆ ಮತ್ತೊಮ್ಮೆ ಘೋರ ಅನ್ಯಾಯ ಮಾಡಿದ್ದಾರೆ ಎಂದು ಎಸ್ಡಿಪಿಐ ದ.ಕ.ಜಿಲ್ಲಾ ಸಮಿತಿ ಟೀಕಿಸಿದೆ.
ಅದೇ ಸ್ಥಳದಲ್ಲಿ ಬಾಬರಿ ಮಸ್ಜಿದ್ನ್ನು ಪುನಃ ನಿರ್ಮಿಸಿಕೊಡುತ್ತೇವೆ ಎಂದು 1992ರಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್ ಈವರೆಗೆ ಅದನ್ನು ಈಡೇರಿಸಿಲ್ಲ. ಇದೀಗ ರಾಮಮಂದಿರ ನಿರ್ಮಿಸುವ ಬಗ್ಗೆ ಭರವಸೆಯ ಮಾತುಗಳನ್ನಾಡಿ ಮೃದು ಹಿಂದುತ್ವವನ್ನು ತಾಳುವುದರೊಂದಿಗೆ ಕಾಂಗ್ರೆಸ್ನ ಜಾತ್ಯತೀತ ನಿಲುವುಗಳು ನಾಶ ಹೊಂದಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಗೆಯಾಗಿದೆ ಮತ್ತು ರಾಮಮಂದಿರ ನಿರ್ಮಿಸುವ ವಿಚಾರದಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಕೂಡ ಪೈಪೋಟಿ ನಡೆಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ಹತ್ತಿರ ಬಂದಾಗ ಮುಸ್ಲಿಂ ಸಮುದಾಯವನ್ನು ಕಡೆಗಣಿಸಿ, ಧಾರ್ಮಿಕ ಭಾವನೆಗಳಿಗೆ ಚ್ಯುತಿ ಬರುವಂತಹ ರೀತಿಯಲ್ಲಿ ಮಾತನಾಡುವುದನ್ನು ಸಹಿಸಲು ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಸಾಧ್ಯವಿಲ್ಲ. ಆದುದರಿಂದ ಕಾಂಗ್ರೆಸ್ ಪಕ್ಷದ ನಾಯಕರು ಬಾಬರಿ ಮಸ್ಜಿದ್ ಪುನಃ ನಿರ್ಮಾಣದ ಬಗ್ಗೆ ಮತ್ತು ಜಾತ್ಯತೀತ ನಿಲುವಿನ ವಿಚಾರದಲ್ಲಿ ಸ್ಪಷ್ಟಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.