‘ಮುಚ್ಚಿರುವ ಸರಕಾರಿ ಶಾಲೆಗಳನ್ನು ಪುನಾರಂಭಿಸಿ, ಇಲ್ಲವೇ ದತ್ತು ಕೊಡಿ’
ಎಸ್ಸಿಎಸ್ಟಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶಯ್ಯ ಸವಾಲು
ಉಡುಪಿ, ಮಾ. 9: ರಾಜ್ಯದಲ್ಲಿ ಈಗಾಗಲೇ ಮುಚ್ಚಿರುವ 15,680 ಸರಕಾರಿ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪುನಾರಂಭಿಸಬೇಕು. ಇಲ್ಲದಿದ್ದರೆ ಸರಕಾರ ಈ ಶಾಲೆಗಳನ್ನು ನಮಗೆ ದತ್ತು ನೀಡಿದರೆ ನಮ್ಮ ಸಂಘಟನೆ ಅದನ್ನು ನಡೆಸುತ್ತದೆ ಎಂದು ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ವಿ.ಟಿ. ವೆಂಕಟೇಶಯ್ಯ ಸವಾಲು ಹಾಕಿದರು.
ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಉಡುಪಿ ಜಿಲ್ಲಾ ಶಾಖೆಯ ಜಂಟಿ ಆಶ್ರಯದಲ್ಲಿ ಶನಿವಾರ ಆದಿಉಡುಪಿ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಎಸ್ಸಿ,ಎಸ್ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಮತ್ತು ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.
ಸರಕಾರಿ ಶಾಲೆಗಳು ಮುಚ್ಚಿರುವ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳಿ ದ್ದಾರೆ. ಆದರೆ ಅಧಿಕಾರಿಗಳು ಸರಕಾರದ ನಿಯಮವನ್ನು ಪಾಲಿಸದೆ ಕಡಿಮೆ ಮಕ್ಕಳ ಸಂಖ್ಯೆ ಇರುವ ಶಾಲೆಗಳನ್ನು ಏಕಾಏಕಿ ಮುಚ್ಚುತ್ತಿದ್ದಾರೆ. ಶಾಲೆಯನ್ನು ಮುಚ್ಚುವ ಮೊದಲು ಆ ಪ್ರದೇಶದಲ್ಲಿ ಮಕ್ಕಳಿದ್ದಾರೆಯೇ ಎಂಬ ಬಗ್ಗೆ ಸರ್ವೆ ನಡೆಸಿ ವರದಿ ಸಲ್ಲಿಸಬೇಕು. ಆದರೆ ಅಧಿಕಾರಿಗಳು ಆ ಕೆಲಸ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಶಿಕ್ಷಕರ ಕೊರತೆಯನ್ನು ಸರಿದೂಗಿಸಲು ಕಡಿಮೆ ಮಕ್ಕಳು ಇರುವ ಸರಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅವರವರ ಕ್ಷೇತ್ರಗಳಲ್ಲಿ ಮುಚ್ಚಿರುವ ಎರಡು ಶಾಲೆಗಳನ್ನು ಪುನಾರಂಭಿಸಲು ಕ್ರಮಕೈಗೊಳ್ಳು ವಂತೆ ನೋಟೀಸ್ ಜಾರಿ ಮಾಡಬೇಕು. ಅಲ್ಲದೆ ಅದಕ್ಕಾಗಿ ಓರ್ವ ಶಿಕ್ಷಕರನ್ನು ನಿಯೋಜಿಸಿ, ಸಮೀಕ್ಷೆ ನಡೆಸಬೇಕು. ಆಗ ಮುಚ್ಚಿರುವ ಶಾಲೆಗಳನ್ನು ಮತ್ತೆ ಆರಂಭಿಸಲು ಸಾಧ್ಯವಾಗುತ್ತದೆ. ಸರಕಾರ ಮನಸ್ಸು ಮಾಡಿದರೆ ಮುಚ್ಚಿರುವ ಶಾಲೆಗಳ ಪೈಕಿ 5000 ಶಾಲೆಗಳನ್ನು ಪುನಾರಂಭಿಸಬಹುದಾಗಿದೆ ಎಂದರು.
ಸಮಾವೇಶವನ್ನು ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ ಮಾತನಾಡಿ, ಶಿಕ್ಷಕರಿಂದ ಸಮುದಾಯ ಅಭಿವೃದ್ಧಿ ಹಾಗೂ ಸಮಾಜದ ಬದಲಾವಣೆ ಸಾಧ್ಯ. ಅರ್ಧದಲ್ಲೇ ಶಾಲೆ ಬಿಟ್ಟ ಮಕ್ಕಳು ಹಾಗೂ ಸರಿಯಾಗಿ ಶಾಲೆ ಹಾಜರಾಗದ ಮಕ್ಕಳ ಸಮಸ್ಯೆಯನ್ನು ಸರಿಪಡಿಸಿದರೆ ಮುಂದಿನ ಜನಾಂಗ ಉತ್ತಮವಾಗಿರುತ್ತದೆ ಎಂದರು.
ಶಾಲೆಗೆ ಗೈರು ಹಾಜರಾಗುವ ಮಕ್ಕಳ ಬಗ್ಗೆ ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಿ ಮಗುವನ್ನು ಪ್ರೀತಿಸಬೇಕು. ಪ್ರೀತಿಸಿದರೆ ಮಾತ್ರ ಮಕ್ಕಳು ನಮಗೆ ಬೆಲೆ ಕೊಡುತ್ತಾರೆ. ಮಕ್ಕಳನ್ನು ಪ್ರೀತಿಸುವ ಮೂಲಕ ಅವರು ಶಾಲೆಗೆ ಬರುವಂತೆ ಮಾಡಬಹುದಾಗಿದೆ. ಪೋಷಕರ ಮನವೊಲಿಸುವ ಕೆಲಸವನ್ನು ಮಾಡಬೇಕು. ಶಿಕ್ಷಕರು ಒಂದು ಮಗುವನ್ನು ಬದಲಾಯಿಸಿದರೆ ಸಮಾಜದಲ್ಲಿ ಒಂದಂಶವನ್ನು ಬದಲಾಯಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಮಣೂರು ವಹಿಸಿದ್ದರು. ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಹಾಕಪ್ಪ ಆರ್.ಲಮಾಣಿ, ಮಂಗಳೂರು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಲೋಕೇಶ್ ಸಿ., ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ.ನಾಯ್ಕಾ, ಸಂಘದ ರಾಜ್ಯ ಉಪಾಧ್ಯಕ್ಷೆ ಸುಮಿತ್ರಾ ದುರ್ಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಕೆ.ಕುಮಾರ್, ದ.ಕ. ಜಿಲ್ಲಾಧ್ಯಕ್ಷ ಆಂಜನೇಯ ಸ್ವಾಮಿ ಹೊಸಮನಿ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಸಂಘದ ಬೈಂದೂರು ತಾಲೂಕು ಅಧ್ಯಕ್ಷ ವೆಂಕ ಉಪ್ಪಾರ್, ಕುಂದಾಪುರ ಅಧ್ಯಕ್ಷ ನರಸಿಂಹ ನಾಯ್ಕ, ಬ್ರಹ್ಮಾವರ ಅಧ್ಯಕ್ಷ ವರದರಾಜ್ ಬಿ., ಉಡುಪಿ ಅಧ್ಯಕ್ಷ ಸದಾನಂದ ಕೆ.ಎಸ್., ಕಾರ್ಕಳ ಅಧ್ಯಕ್ಷ ವಿಜಯ ಕುಮಾರ್, ಧನರಾಜ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಗೌವರಾಧ್ಯಕ್ಷ ಸುಂದರ ಎ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಿ.ಬಿ. ಸ್ವಾಗತಿಸಿದರು. ಸಹಕಾರ್ಯದರ್ಶಿ ಎಂ.ಫಕೀರಪ್ಪ ಕಾರ್ಯಕ್ರಮ ನಿರೂಪಿಸಿದರು.