‘ಚುನಾವಣಾ ರಾಜಕೀಯ ಸಭೆಗಳ ಸಂಪೂರ್ಣ ವೀಡಿಯೋ ಚಿತ್ರೀಕರಣ’
ಜಿಲ್ಲಾಧಿಕಾರಿ ಹೆಪ್ಸಿಬಾ ಸೂಚನೆ
ಉಡುಪಿ, ಮಾ.9: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅ್ಯರ್ಥಿ ಗಳ ಪರವಾಗಿ ನಡೆಯುವ ಎಲ್ಲಾ ಸಭೆ ಸಮಾರಂಭಗಳನ್ನು ಸಂಪೂರ್ಣ ವೀಡಿಯೋ ಚಿತ್ರೀಕರಣ ನಡೆಸಿ, ಕಟ್ಟುನಿಟ್ಟಿನ ನಿಗಾ ಇಡುವಂತೆ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪತಿ ಸೂಚಿಸಿದ್ದಾರೆ.
ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ವಿವಿಧ ನೋಡಲ್ ಅಧಿಕಾರಿಗಳು ಮತ್ತು ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡುತಿದ್ದರು.
ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸಭೆ ಸಮಾರಂಭೆಗಳಿಗೆ ಕಡ್ಡಾಯ ವಾಗಿ ಅನುಮತಿ ಪಡೆಯಲೇಬೇಕು. ಚುನಾವಣಾ ಸಭೆ ಆರಂಭಗೊಳ್ಳುವುದಕ್ಕೆ ಒಂದು ಗಂಟೆ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಅಲ್ಲಿಗೆ ಬಂದು ನಿಗಾ ಇಡಬೇಕು. ಸಮಾರಂಭದಲ್ಲಿ ಬಳಸುವ ಕುರ್ಚಿ, ವೇದಿಕೆ, ಧ್ವನಿವರ್ಧಕ, ಶಾಮಿಯಾನ, ವಾಹನಗಳು, ತಿಂಡಿತಿನಿಸು ಸೇರಿದಂತೆ ಪ್ರತಿಯೊಂದು ವೆಚ್ಚ ವನ್ನೂ ಚುನಾವಣಾ ಆಯೋಗ ನಿಗದಿಪಡಿಸಿದ ದರದಂತೆ ಅ್ಯರ್ಥಿ ವೆಚ್ಚದ ಲೆಕ್ಕಕ್ಕೆ ಸೇರಿಸಬೇಕಿದೆ ಎಂದು ಅವರು ತಿಳಿಸಿದರು.
ಅಭ್ಯರ್ಥಿಗಳು ಅಥವಾ ಅವರ ಪರವಾಗಿ ಹಾಕುವ ಯಾವುದೇ ಬ್ಯಾನರ್, ಪ್ಲೆಕ್ಸ್, ಹೋರ್ಡಿಂಗ್ಗಳಿಗೆ ಅನುಮತಿ ಪಡೆಯಲೇಬೇಕು. ಅನುಮತಿ ನೀಡಿದ ಗಾತ್ರಕ್ಕಿಂತ ಪ್ಲೆಕ್ಸ್ ಗಾತ್ರದಲ್ಲಿ ಒಂಚೂರು ವ್ಯತ್ಯಾಸ ಕಂಡುಬಂದರೂ ಪರವಾನಿಗೆ ಉಲ್ಲಂಘನೆ ಎಂದೇ ತಿಳಿದು ಕ್ರಮ ಕೈಗೊಳ್ಳಲಾಗುವುದು. ಸಭೆ ಆರಂಭಕ್ಕೆ ಒಂದು ಗಂಟೆಗಿಂತ ಮೊದಲು ಅಲ್ಲಿ ಪಕ್ಷಗಳ ಧ್ವಜಗಳನ್ನು ಹಾಕುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ನಡೆಯುವ ಯಾವುದೇ ಉತ್ಸವ ಅಥವಾ ಜಯಂತಿ ಕಾರ್ಯಕ್ರಮಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಯಾಗದಂತೆ ಗಮನಹರಿಸಬೇಕು ಎಂದವರು ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ರಾಜಕೀಯ ಸಭೆಗಳ ವೀಡಿಯೋ ಚಿತ್ರೀಕರಣ ನಡೆಸಿದ ಬಳಿಕ ಅವುಗಳನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿಯೇ ಸಂಕಲನ ಮಾಡಬೇಕು. ಯಾವುದೇ ಕಾರಣಕ್ಕೆ ಹೊರಗಡೆ ಖಾಸಗಿ ಸ್ಥಳಗಳಲ್ಲಿ ಇವುಗಳ ಸಂಕಲ ಮಾಡುವಂತಿಲ್ಲ ಎಂದು ಹೇಳಿದರು.
ಏಕಕಾಲಕ್ಕೆ ಒಂದು ನಿಗದಿತ ಸ್ಥಳದಲ್ಲಿ ಅಥವಾ ಆಸುಪಾಸಿನಲ್ಲಿ ಒಂದಕ್ಕಿಂತ ಹೆಚ್ಚಿನ ಸಭೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಎಚ್ಚರಿಕೆ ವಹಿಸು ವಂತೆ ವಿದ್ಯಾಕುಮಾರಿ ಸೂಚಿಸಿದರು. ಸಭೆಯಲ್ಲಿ ಕುಂದಾಪುರ ಉಪವಿಬಾಗಾಧಿಕಾರಿ ಮಧುಕೇಶ್ವರ್, ವಿವಿಧ ಕ್ಷೇತ್ರ ಗಳ ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.