ಬೈಂದೂರು: ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಿದ್ದ ಕೇರಳದ ವ್ಯಕ್ತಿಯ ರಕ್ಷಣೆ
ಬೈಂದೂರು, ಮಾ. 9: ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕಿಡಿಗೇಡಿಗಳು ಕೇರಳ ಮೂಲದ ವ್ಯಕ್ತಿಯೊಬ್ಬರ ಕಾಲಿಗೆ ಸರಪಳಿ ಬಿಗಿದು ಮರಕ್ಕೆ ಕಟ್ಟಿ ಹಾಕಿ ಬೀಗ ಜಡಿದಿರುವ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿದ ಪರಿಸರದ ಸ್ಥಳೀಯರು ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಲ್ಪಟ್ಟ ಕೇರಳದ ಕೊಯಿಕ್ಕೋಡು ಜಿಲ್ಲೆಯ ನಾದಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸಯ್ಯದ್ ಕೊಯ ಯಾನೆ ಚೆರಿಯ ಕೋಯ (50) ಎಂಬವರನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಎರಡು ಮೂರು ದಿನಗಳಿಂದ ಪರಿಸರದಲ್ಲಿ ತಿರುಗಾಡುತ್ತಿದ್ದ ಚೆರಿಯ ಕೋಯ ಅವರನ್ನು ಕಿಡಿಗೇಡಿಗಳು ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಮರವೊಂದಕ್ಕೆ ಕಟ್ಟಿ ಹಾಕಿದ್ದರು. ಇದನ್ನು ನೋಡಿದ ವಾಹನ ಸವಾರರು ಬೈಂದೂರು ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ವ್ಯಕ್ತಿಯ ಕಾಲಿನ ಸರಪಳಿ ಬಿಡಿಸಲು ಪ್ರಯತ್ನಿಸಿದರು.
ಅದು ಸಾಧ್ಯವಾಗದಿದ್ದಾಗ ಬಳಿಕ ಮರವನ್ನು ಮುರಿದು ಸರಪಳಿ ಸಮೇತ ಚೆರಿಯ ಕೋಯ ಅವರನ್ನು ಸಮೀಪದ ವೆಲ್ಡಿಂಗ್ ಶಾಪ್ಗೆ ಕರೆತರಲಾಯಿತು. ಬಳಿಕ ಅವರ ಕಾಲಿನ ಸರಪಳಿಯನ್ನು ತೆಗೆಸಲಾಯಿತು. ನಂತರ ಕೋಯ ಅವರ ವಿವರ ತಿಳಿದುಬಂದಿದ್ದು, ಕೇರಳದ ಪತ್ರಕರ್ತರ ಮೂಲಕ ಅವರ ಮನೆಯವರನ್ನು ಬೈಂದೂರು ಪೊಲೀಸರು ಸಂಪರ್ಕಿಸಿದ್ದಾರೆ.
ಇದೀಗ ಕೋಯ ಅವರನ್ನು ಶುಚಿಗೊಳಿಸಿ ಠಾಣೆಯಲ್ಲಿರಿಸಲಾಗಿದ್ದು, ಯಾವುದೇ ಸಮಸ್ಯೆ ಆಗಿಲ್ಲ. ಅವರ ಮನೆಯವರು ಕೇರಳದಿಂದ ಹೊರಟಿದ್ದು, ನಾಳೆ ಬೈಂದೂರು ತಲುಪಿ ಕೋಯ ಅವರನ್ನು ಕರೆದುಕೊಂಡು ಹೋಗಲಿದ್ದಾರೆ ಎಂದು ಬೈಂದೂರು ಪೊಲೀಸರು ತಿಳಿಸಿದ್ದಾರೆ.