ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ವಿಜಿಲೆನ್ಸ್ ಅಧಿಕಾರಿಗಳಿಂದ ದಾಳಿ
ಮಂಗಳೂರು, ಮಾ. 9: ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಶುಕ್ರವಾರ ದಾಳಿ ನಡೆಸಿದ ಬೆಂಗಳೂರು ಕೇಂದ್ರ ಕಚೇರಿ ವಿಜಿಲೆನ್ಸ್ ಅಧಿಕಾರಿಗಳ ತಂಡ, ಹಾಸನ ವಿಭಾಗದ ಕಡತಗಳನ್ನು ವಶಪಡಿಸಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಸನ ಕೆಎಸ್ಆರ್ಟಿಸಿ ವಿಭಾಗದ ಕಡತಗಳನ್ನು ತರಿಸಿಕೊಂಡು ವಿಲೇವಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.
ಕೆಎಸ್ಆರ್ಟಿಸಿ ವಿಜಿಲೆನ್ಸ್ ಹಾಗೂ ಭದ್ರತಾ ವಿಭಾಗದ ಮುಖ್ಯ ಅಧಿಕಾರಿ ಲಿಂಗರಾಜು ನಿರ್ದೇಶನದಲ್ಲಿ ಅಧಿಕಾರಿ ಲಕ್ಷ್ಮಣ್ ಹಾಗೂ ಮೈಸೂರು ವಿಭಾಗದ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಶುಕ್ರವಾರ ಅಪರಾಹ್ನ ಮಂಗಳೂರಿನ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಹಾಸನ ವಿಭಾಗಕ್ಕೆ ಸೇರಿದ ಕೆಲವು ಕಡತಗಳನ್ನು ವಿಭಾಗೀಯ ಅಧಿಕಾರಿಯ ಕಚೇರಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತಾಧಿಕಾರಿಗಳ ಮೂಲ ತಿಳಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಈ ಹಂತದಲ್ಲಿ ಯಾವುದೇ ಹೆಚ್ಚಿನ ಮಾಹಿತಿ ನೀಡಲು ಉನ್ನತಾಧಿಕಾರಿಗಳು ನಿರಾಕರಿಸಿದ್ದಾರೆ.
ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ ಕುಮಾರ್ ಅವರು ಹಾಸನದಿಂದ ಮಂಗಳೂರಿಗೆ ವರ್ಗಾವಣೆಗೊಂಡು ಆಗಮಿಸಿದ್ದರು. ಹಾಸನ ವಿಭಾಗಕ್ಕೆ ಬೇರೆ ನೇಮಕ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿನ ಕಡತಗಳನ್ನು ಇಲ್ಲಿ ವಿಲೇವಾರಿ ಮಾಡುತ್ತಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಉನ್ನತಾಧಿಕಾರಿಗಳ ಮೂಲಗಳು ತಿಳಿಸಿವೆ.