ಮದ್ಯ ಸೇವಿಸಿ ಸಂಘರ್ಷಕ್ಕಿಳಿದ ಯುವಕರು: ಎರಡು ಗುಂಪುಗಳ ನಡುವೆ ಮಾರಾಮಾರಿ
ಮಂಗಳೂರು, ಮಾ.9: ನಗರದ ಬಲ್ಮಠ ಜಂಕ್ಷನಲ್ಲಿರುವ ಪಬ್ವೊಂದರ ಎದುರು ಶುಕ್ರವಾರ ತಡರಾತ್ರಿ ಯುವಕರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಮದ್ಯ ಸೇವಿಸುವ ವೇಳೆ ಸಂಘರ್ಷಕ್ಕಿಳಿದಿದ್ದ ಹಲವರು ಹೊಡೆದಾಡಿಕೊಂಡಿದ್ದಾರೆ.
ಶುಕ್ರವಾರ ರಾತ್ರಿ ನೂರಾರು ಸಂಖ್ಯೆಯಲ್ಲಿ ಯುವಕ, ಯುವತಿಯರು ಪಬ್ನಲ್ಲಿ ಮದ್ಯ ಸೇವಿಸುತ್ತಿದ್ದರು. ಆಗ ಎರಡು ಗುಂಪಿನ ಯುವಕರ ನಡುವೆ ಘರ್ಷಣೆ ಆರಂಭವಾಗಿದೆ. ಪನ ಸಿಬ್ಬಂದಿ ಎರಡೂ ಗುಂಪಿನವರನ್ನು ಹೊರ ಕಳುಹಿಸಿದ್ದಾರೆ. ಹೊರಕ್ಕೆ ಬಂದು ಹೊಡೆದಾಡಿಕೊಂಡಿದ್ದಾರೆ. ಭಯಗೊಂಡ ಯುವತಿಯರು ದಿಕ್ಕಾಪಾಲಾಗಿ ಓಡಿದ್ದಾರೆ. ಹೆಲ್ಮೆಟ್ ನಿಂದ ಕೆಲವರ ಮೇಲೆ ಹಲ್ಲೆ ಮಾಡಿದ್ದರೆ, ಇನ್ನು ಕೆಲವರನ್ನು ರಸ್ತೆಯಲ್ಲಿ ಕೆಡವಿ ತುಳಿಯಲಾಗಿದೆ.
ಕೆಲವರು ಸ್ಥಳದಿಂದ ಓಡಿಹೋದರೆ, ಹಲವರು ಜಗಳ ಮುಂದುವರಿಸಿದ್ದರು. ನೂರಾರು ಜನರು ಬಲ್ಮಠ ಜಂಕ್ಷನ್ನಲ್ಲಿ ಜಮಾಯಿಸಿದ್ದರಿಂದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಸಿಪಿಗಳಾದ ಸುಧೀ ಹೆಗ್ಡೆ, ಮದಗಾಂವ್ಕ ನೇತೃತ್ವದಲ್ಲಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಗುಂಪನ್ನು ಚದುರಿಸಿದರು.
‘ಯುವಕರ ಎರಡು ಗುಂಪಿನ ನಡುವೆ ಘರ್ಷಣೆ ಆರಂಭವಾಗಿತ್ತು. ಅವರನ್ನು ಹೊರಕ್ಕೆ ಕಳುಹಿಸಿದ್ದೆವು. ಅಷ್ಟರಲ್ಲಿ ಒಂದು ಗುಂಪಿನ ಯುವಕರು ಮೊಬೈಲ್ ಮೂಲಕ ಸಂಪರ್ಕಿಸಿ ಹೊರಗಿನಿಂದ ಕೆಲವರನ್ನು ಕರೆಸಿದ್ದರು. ಅವರು ಬಂದು ಮತ್ತೊಂದು ಗುಂಪಿನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಸಿಬ್ಬಂದಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿರುವ ಎಲ್ಲ ಸಿಸಿಟಿವಿ ಕ್ಯಾಮೆರಾಗಳಲ್ಲಿನ ರೆಕಾರ್ಡಿಂಗ್ ವಶಕ್ಕೆ ಪಡೆದು ತನಿಖೆ ನಡೆಸುವಂತೆ ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಪೊಲೀಸರಿಗೆ ಸೂಚಿಸಿದ್ದಾರೆ.
ಗುಂಪು ಘರ್ಷಣೆ ಸಂಬಂಧ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.