ಪೊಳಲಿ ಶ್ರೀರಾಜರಾಜೇಶ್ವರಿ-ಪರಿವಾರ ದೇವರು-ದೈವ, ಧ್ವಜಸ್ತಂಭ ಪ್ರತಿಷ್ಠೆ
ಬಂಟ್ವಾಳ: ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಹಲವು ವಿಧಿವಿಧಾನಗಳು ಪೂರ್ಣಗೊಂಡಿದ್ದು, ಇನ್ನೂ ಹಲವು ವಿದಿವಿಧಾನಗಳು ನಡೆಯಲಿದೆ.
ಮಾ.10ರಂದು 7.23ರಿಂದ 8.23ರವರೆಗಿನ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀದುರ್ಗಾಪರಮೇಶ್ವರಿ, ಶ್ರೀರಾಜರಾಜೇಶ್ವರಿ, ಶ್ರೀಸುಬ್ರಹ್ಮಣ್ಯ, ಶ್ರೀಗಣಪತಿ, ಶ್ರೀಭದ್ರಕಾಳಿ ದೇವರುಗಳ ಪ್ರತಿಷ್ಠೆ-ಜೀವಕಲಶಾಭಿಷೇಕವನ್ನು ವಿಧಿವತ್ತಾಗಿ ನಡೆಸಲಾಯಿತು. ದೇವಸ್ಥಾನ ನವೀಕರಣಗೊಳ್ಳುವ ಮುನ್ನ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವರುಗಳನ್ನು ಇದೀಗ ಮೂಲ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದಕ್ಕೂ ಮುನ್ನ ಪ್ರಾತಃಕಾಲ 4ರಿಂದ ಪುಣ್ಯಾಹ, ಗಣ ಹೋಮ, ಪ್ರಾಸಾದ ಪ್ರತಿಷ್ಠೆ ನಡೆಸಲಾಯಿತು.
ಬೆಳಗ್ಗೆ 10.40ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಸ್ತಂಭ ಪ್ರತಿಷ್ಠೆ, ಧ್ವಜಕಲಶಾಭಿಷೇಕ, ಕ್ಷೇತ್ರಪಾಲಸಹಿತ ದೈವಗಳ ಪ್ರತಿಷ್ಠೆ, ಅಂಕುರಪೂಜೆ, ಮಹಾಪೂಜೆ ನಡೆಸಲಾಯಿತು. ದೇವರ ಗರ್ಭಗುಡಿಯ ಮುಗುಳಿ ಏರಿಸುವ ಕ್ರಮವನ್ನು ವಿದಿವತ್ತಾಗಿ ನಡೆಸಲಾಗಿದೆ.
ಧ್ವಜಸ್ತಂಭ ಪ್ರತಿಷ್ಠೆ: ನವೀಕೃತ ದೇವಸ್ಥಾನದ ಬಿಲ್ಲವ ಸಮಾಜದವರು ಸಮರ್ಪಿಸಿದ ನೂತನ ಧ್ವಜಸ್ಥಂಭದ ಪ್ರತಿಷ್ಠಾಪನೆ ಈ ವೇಳೆ ನಡೆಸಲಾಯಿತು. ಚಿನ್ನದ ಲೇಪಿತ ನವಿಲಿನ ಮೂರ್ತಿಯನ್ನು ಕೊಡಿಮರದ ತುದಿಯಲ್ಲಿ ಪ್ರತಿಷ್ಠಾಪಿಸಿ ನವಿಲು ಧ್ವಜ ಏರಿಸಲಾಯಿತು. ಮಧ್ಯಾಹ್ನ ಪಾಕಶಾಲೆಯಲ್ಲಿ ಪಲ್ಲಪೂಜೆ ನೆರವೇರಿಸಲಾಯಿತು. ಸಂಜೆ 5ರಿಂದ ದುರ್ಗಾಪೂಜೆ, ಇಂದ್ರಾದಿ ದಿಕ್ಪಾಲ ಪ್ರತಿಷ್ಠೆ, ಮಾತೃಕಾಪೀಠ ಹಾಗು ನೀರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರಪೂಜೆ, ಮಹಾಬಲಿಪೀಠಾದಿವಾಸ, ಕ್ಷೇತ್ರಪಾಲಾದಿ ದೈವಗಳಿಗೆ ಕಲಶಾವಾಸ ಅವಾಸ ಹೋಮ, ಮಹಾಪೂಜೆ ನಡೆಸಲಾಯಿತು.