ಸತ್ಯ ಮತ್ತು ಸಂವಿಧಾನದ ಉಳಿವಿಗಾಗಿ ಈ ಚುನಾವಣೆ: ಸಿದ್ದರಾಮಯ್ಯ
ಉಡುಪಿಯಲ್ಲಿ ಪರಿವರ್ತನಾ ಸಮಾವೇಶ
ಉಡುಪಿ, ಮಾ.10: ಸತ್ಯ ಮತ್ತು ಅಪಾಯದಲ್ಲಿರುವ ಸಂವಿಧಾನದ ಉಳಿವಿಗಾಗಿ ಈ ಬಾರಿಯ ಚುನಾವಣೆ ನಡೆಯುತ್ತಿದೆ. ಆದುದರಿಂದ ಜನತೆ ಕಳೆದ ಬಾರಿಯಂತೆ ಸುಳ್ಳು ಭರವಸೆಗಳಿಗೆ ಬಲಿಯಾಗದೇ ಎಚ್ಚರಿಕೆಯಿಂದ ಮತ ಚಲಾಯಿಸಬೇಕಾಗಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ನಗರದ ಕಲ್ಸಂಕದಲ್ಲಿರುವ ರಾಯಲ್ ಗಾರ್ಡನ್ಸ್ನಲ್ಲಿ ಇಂದು ನಡೆದ ಪರಿವರ್ತನಾ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಸರಕಾರವೊಂದು ದೇಶ ಕಟ್ಟುವ, ಸಮಾಜ ಕಟ್ಟುವ ಕೆಲಸ ಮಾಡಬೇಕು, ಒಡೆಯುವ ಕೆಲಸ ಮಾಡಬಾರದು. ಆದರೆ ನರೇಂದ್ರ ಮೋದಿ ನೇತೃತ್ವದ ಸಮಿತಿ ಕಳೆದ 55 ತಿಂಗಳಲ್ಲಿ ಮಾಡಿದ್ದೇನು. ದೇಶದ ಜನತೆಯ ಒಂದೇ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯ ಅವರಿಗಿದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಾನು ನನ್ನ ಐದು ವರ್ಷಗಳ ಮುಖ್ಯಮಂತ್ರಿ ಅವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆಗಳನ್ನು ಈಡೇರಿಸಿದ್ದೇನೆ. ಈ ಬಗ್ಗೆ ಯಾವುದೇ ವೇದಿಕೆಯಲ್ಲಿ ನಾನು ಬಿಜೆಪಿಯೊಂದಿಗೆ ಬೇಕಿದ್ದರೆ ಚರ್ಚೆಗೆ ಸಿದ್ಧವಿದ್ದೇನೆ. ಮೋದಿ ತನ್ನ ಸರಕಾರದ ಸಾಧನೆಯ ಕುರಿತು ಬಹಿರಂಗ ಚರ್ಚೆಗೆ ಸಿದ್ಧರಿದ್ದಾರಾ ಎಂದೂ ಅವರು ಕೇಳಿದರು.
ಯುಪಿಎ ಸರಕಾರದ ಅವಧಿಯಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ದೇಶದ ರೈತರ 72,000 ಕೋಟಿ ರೂ.ಗಳ ಸಾಲಮನ್ನಾ ಮಾಡಿದ್ದರು. ನಾನೂ ರಾಜ್ಯದಲ್ಲಿ 22,250 ರೈತರ 8165 ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದೇನೆ. ನರೇಂದ್ರ ಮೋದಿ ತನ್ನ ಐದು ವರ್ಷಗಳ ಅವಧಿಯಲ್ಲಿ ಒಬ್ಬನೇ ಒಬ್ಬನ ಒಂದು ರೂ. ಸಾಲವನ್ನು ಮನ್ನಾ ಮಾಡಿಲ್ಲ. ಮೋದಿ ಅವರು ‘ಅಚ್ಛೇ ದಿನ್’ ಘೋಷಣೆ ಲಾಭವಾಗಿರುವುದು ಅದಾನಿ, ಅಂಬಾನಿ, ನೀರವ್ ಮೋದಿ, ಚಾಸ್ಕಿ, ಮಲ್ಯರಿಗೆ ಹೊರತು ದೇಶದ ರೈತರಿಗಲ್ಲ, ದಲಿತರಿಗಲ್ಲ ಹಾಗೂ ಬಡವರಿಗಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
2014ರಲ್ಲಿ ನರೇಂದ್ರ ಮೋದಿ ಅವರಂತೆ ದೇಶದ ಜನರಲ್ಲಿ ಭ್ರಮಾಲೋಕ ವೊಂದನ್ನು ನಿರ್ಮಾಣ ಮಾಡಿದವರು ಯಾರೂ ಇರಲಿಲ್ಲ. ಅವರು ನೀಡಿದಂಥ ಆಕರ್ಷಕ ಭರವಸೆಗಳನ್ನು ಯಾರೂ ನೀಡಿರಲಿಲ್ಲ. ತಾನು ಪ್ರಧಾನಿಯಲ್ಲ, ನಿಮ್ಮ ಚೌಕಿದಾರ್ (ಕಾವಲುಗಾರ) ಆಗಿರುತ್ತೇನೆ ಎಂದಿದ್ದರು. ಆದರೆ ಐದು ವರ್ಷಗಳ ಬಳಿಕ ‘ಚೌಕಿದಾರ್ ಚೋರ್ ಹೇ’, ‘ಚೌಕಿದಾರ್ ಹೀ ಭಾಗೀದಾರ್ ಹೇ’ ಎಂದು ಜನರೇ ಆಡಿಕೊಳ್ಳುವಂತಾಗಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ದೇಶವನ್ನು ಸಮರ್ಥವಾಗಿ ಆಳಲು ಬರೇ 56 ಇಂಚಿನ ಎದೆ ಸಾಕಾಗುವುದಿಲ್ಲ. ದೇಶದ ರೈತರು, ದಲಿತರು, ಬಡವರ ಬಗ್ಗೆ ಕಾಳಜಿಯುಳ್ಳ ಎದೆಯವರು ಬೇಕಾಗುತ್ತದೆ. ನಮ್ಮಲ್ಲಿ ಪೈಲ್ವಾನ್ರಿಗೂ ಅದಕ್ಕಿಂತ ದೊಡ್ಡ ಎದೆ ಇರುತ್ತದೆ ಎಂದು ಅವರು ನುಡಿದರು.
ಮೋದಿ ಇತ್ತೀಚೆಗೆ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಭಾಷಣ ಮಾಡಿದ್ದರು. ಅವರು ಎಲ್ಲಿಯಾದರೂ ತಾನು ಐದು ವರ್ಷಗಳ ಹಿಂದೆ ಕೊಟ್ಟ ಭರವಸೆಯ ಕುರಿತಂತೆ, ಈ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಕಾರ ಎತ್ತಿಲ್ಲ. ಯಾಕೆಂದರೆ ಅವರು ಕೊಟ್ಟ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ ಮೋದಿ ತನ್ನ ಐದು ವರ್ಷಗಳ ಅವಧಿಯಲ್ಲಿ 10 ಕೋಟಿ ಮಂದಿಗೆ ಉದ್ಯೋಗ ನೀಡಬೇಕಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರಕಾರವೇ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಸೃಷ್ಚಿಯಾಗಿರುವುದು 27 ಲಕ್ಷ ಉದ್ಯೋಗ ಮಾತ್ರ. ಆದುದರಿಂದ ಯುವಕರು ಈ ಬಗ್ಗೆ ಚೆನ್ನಾಗಿ ಯೋಚಿಸಿ ತಮ್ಮ ಮತವನ್ನು ಚಲಾಯಿಸಬೇಕಾಗಿದೆ. ತಮ್ಮ ಹಿತಾಸಕ್ತಿಯನ್ನು ರಕ್ಷಿಸಲು ಮೋದಿಯಿಂದ ಸಾಧ್ಯವಿಲ್ಲ, ಕೇವಲ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರಿಂದ ಮಾತ್ರ ಸಾಧ್ಯ ಎಂಬುದನ್ನು ತಿಳಿದುಕೊಂಡು ಮತ ಚಲಾಯಿಸಬೇಕಾಗಿದೆ ಎಂದರು.
ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನ ಮಂತ್ರಿ, ಸ್ವತಂತ್ರ ಭಾರತದಲ್ಲಿ ಇದುವರೆಗೆ ಬಂದಿಲ್ಲ. ಇಂದು ಬಡವರು, ರೈತರು, ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಕಷ್ಟಸುಖಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ. ಒಂದು ರೀತಿಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಬದಲಾವಣೆ ಗಾಗಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದವರು ಮನವಿ ಮಾಡಿದರು.
ಕಾಂಗ್ರೆಸ್ ಬಂದರೆ ಮಹಿಳಾ ಮೀಸಲಾತಿ ಬಿಲ್ ಜಾರಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅತ್ಯಂತ ಸರಳ ಸ್ವಭಾವದ ವ್ಯಕ್ತಿ. ಬಡವರು, ಮಹಿಳೆಯರು, ರೈತರ ಬಗ್ಗೆ ಅವರಲ್ಲಿ ಪ್ರಾಮಾಣಿಕ ಕಳಕಳಿ ಇದೆ. ನಿನ್ನೆ ಹಾವೇರಿಯಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಅಧಿಕಾರಕ್ಕೆ ಬಂದರೆ ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಬಿಲ್ನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ.
ಅದೇ ರೀತಿ ರೈತರ ಸಾಲ ಮನ್ನಾ ಮಾಡುವುದಾಗಿಯೂ ಅವರು ಘೋಷಿಸಿದ್ದಾರೆ ಎಂದ ಸಿದ್ದರಾಮಯ್ಯ, ಈಗಾಗಲೇ ಘೋಷಣೆಯಾಗಿರುವ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಬಹುಮತ ಪಡೆಯುವುದು ಹಾಗೂ ರಾಹುಲ್ ಗಾಂಧಿ ಪ್ರದಾನಿಯಾಗುವುದು ಗ್ಯಾರಂಟಿ ಎಂದರು.
ಇನ್ನು ರಾಜ್ಯದಲ್ಲಿ ಚುನಾವಣೆಗೆ ಕೇವಲ 35 ದಿನಗಳು ಮಾತ್ರ ಬಾಕಿ ಇವೆ. ಪಕ್ಷದ ಕಾರ್ಯಕರ್ತರು ಇನ್ನು ವಿಶ್ರಾಂತಿ ಪಡೆಯದೇ ಮನೆ ಮನೆಗೆ ತೆರಳಿ ಜನರ ಮನ ಒಲಿಸಿ, ಕಾಂಗ್ರೆಸ್ ಗೆಲುವಿಗೆ ಶ್ರಮಿಸುವಂತೆ ಅವರು ಕರೆ ನೀಡಿದರು.
ಶೋಭಾ, ಏನು ಮಾಡಿದೆ ತಾಯೀ...
ತಮ್ಮ ಭಾಷಣದಲ್ಲಿ ಉಡುಪಿ-ಚಿಕ್ಕಮಗಳೂರಿನ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರ ಐದು ವರ್ಷಗಳ ಸಾಧನೆಯನ್ನು ಲೇವಡಿ ಮಾಡಿ, ಪ್ರತಿಪಕ್ಷ ಬಿಡಿ, ಅವರದೇ ಪಕ್ಷದ ಕಾರ್ಯಕರ್ತರು ‘ಗೋ ಬ್ಯಾಕ್ ಶೋಭಾ’ ಅಭಿಯಾನ ಆರಂಭಿಸುವಂತಾಗಿದೆ ಎಂದರು.‘ಶೋಭಾ, ಕ್ಷೇತ್ರಕ್ಕೆ ಏನು ಮಾಡಿದೆ ತಾಯೀ..... ಎಂದು ಪ್ರಶ್ನಿಸಿದ ಅವರು, ಕ್ಷೇತ್ರದಲ್ಲಿ ಅವರ ಸಾಧನೆ ಸೊನ್ನೆ. ಬಿಜೆಪಿ ಪಕ್ಷದವರೇ ಇದನ್ನು ಹೇಳುತಿದ್ದಾರೆ ಎಂದರು.