ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ: ದಿನೇಶ್ ಗುಂಡೂರಾವ್
ಉಡುಪಿ, ಮಾ.10: ಕಳೆದ ಐದು ವರ್ಷಗಳ ತನ್ನ ಆಡಳಿತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾನೊಬ್ಬ ಮಹಾನ್ ಸುಳ್ಳುಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹೀಗಾಗಿ ಐದು ವರ್ಷಗಳ ತನ್ನ ಸರಕಾರದ ಸಾಧನೆಯ ಕುರಿತು ಯಾವುದೇ ಚರ್ಚೆಯನ್ನು ಅವರು ತಡೆಯುತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ನಗರದ ಕಲ್ಸಂಕದಲ್ಲಿರುವ ರಾಯಲ್ ಗಾರ್ಡನ್ಸ್ನಲ್ಲಿ ಇಂದು ನಡೆದ ಪರಿವರ್ತನಾ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಐದು ವರ್ಷಗಳ ಹಿಂದೆ ತಾನು ನೀಡಿದ ಯಾವುದೇ ಭರವಸೆಯನ್ನು ಈಡೇರಿಸದೇ ಅವರು ಇಡೀ ದೇಶದ ಜನತೆಯನ್ನು ನಿರಾಶಗೊಳಿಸಿದ್ದಾರೆ. ಐದು ವರ್ಷಗಳ ಹಿಂದೆ ಅವರ ಭರವಸೆಗಳನ್ನು ನಂಬಿ ಮತ ನೀಡಿದ ಮತದಾರರು ಸಂಫೂರ್ಣ ಭ್ರಮನಿರಸಗೊಂಡಿದ್ದಾರೆ ಎಂದವರು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಮಾತನಾಡಿ, ದೇಶದ ಮಹಿಳೆ ಕುರಿತಂತೆ ಚಿಂತನೆಯನ್ನೇ ಮೋದಿ ನೇತೃತ್ವದ ಎನ್ಡಿಎ ಸರಕಾರ ನಡೆಸಿಲ್ಲ. ಅವರ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಘೋಷಣೆ ಕೇವಲ ಬಾಯಿ ಮಾತಿನಲ್ಲೇ ಉಳಿದುಬಿಟ್ಟಿದೆ ಎಂದರು.
ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ದೇಶಕ್ಕೆ ಅತ್ಯುತ್ತಮ ವಾದ ಸಂವಿಧಾನವನ್ನು ಕೊಟ್ಟು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ್ದು ಈ ದೇಶವನ್ನಾಳಿದ ಕಾಂಗ್ರೆಸ್ ಸರಕಾರ. ಪ್ರತಿ ಐದು ವರ್ಷಗಳಿಗೊಮ್ಮೆ ಹೊಸ ಸರಕಾರವನ್ನು ಆಯ್ಕೆ ಮಾಡುವ ಹಕ್ಕನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿದ್ದು ಕಾಂಗ್ರೆಸ್ ಸರಕಾರ. 70 ವರ್ಷಗಳಿಂದ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ತನ್ನ ಸರಕಾರದ ಸಾಧನೆಯ ಕುರಿತು ಮಾತನಾಡದೇ ಮೋದಿ ಪದೇ ಪದೇ ಪ್ರಶ್ನಿಸುತಿದ್ದಾರೆ. ನಮ್ಮ ಸಾಧನೆ ಕುರಿತು ಹೇಳಲು ವರ್ಷದ 365 ದಿನಗಳೂ ಸಾಲದು ಎಂದರು.
ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಅವರೂ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಸಚಿವ ಯು.ಟಿ.ಖಾದರ್, ಕಾಂಗ್ರೆಸ್ ನಾಯಕರಾದ ಐವನ್ ಡಿಸೋಜ, ಜಿ.ಎ.ಬಾವ, ಆರತಿ ಕೃಷ್ಣನ್, ಪುಷ್ಪಾ ಅಮರನಾಥ್, ಡಾ.ವಿಜಯಕುಮಾರ್, ರಾಜು ಗೌಡ, ಹರೀಶ್ಕುಮಾರ್, ಗೋಪಾಲ ಭಂಡಾರಿ, ಗೋಪಾಲ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅತಿಥಿಗಳನ್ನು ಸ್ವಾಗತಿಸಿದರೆ, ಎಂ.ಎ.ಗಫೂರ್ ಕಾರ್ಯಕ್ರಮ ನಿರ್ವಹಿಸಿದರು.