ಮಾರೂರು ಮನೆಯಲ್ಲಿ ಸ್ಫೋಟ, ಅಪಾರ ಹಾನಿ
ಮೂಡುಬಿದಿರೆ: ಮಾರೂರು ಗಾಂದೊಟ್ಯದಲ್ಲಿ ಕೊಂಬು ವಾದಕ ಪ್ರಕಾಶ್ ದೇವಾಡಿಗ ಅವರ ಮನೆಯ ಆವರಣದಲ್ಲಿ ಶನಿವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಮನೆಗೆ ತೀವ್ರ ಹಾನಿಯಾಗಿದೆ. ಈ ದುರ್ಘಟನೆಯ ವೇಳೆಗೆ ಮನೆಯಲ್ಲಿ ನಾಲ್ಕು ಮಂದಿ ಇದ್ದರು ಎನ್ನಲಾಗಿದ್ದರೂ ಅದೃಷ್ಠವಶಾತ್ ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಸ್ಫೋಟದ ಸದ್ದಿಗೆ ಬೆದರಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಕಾಶ್ ಅವರು ಮೂಡುಬಿದಿರೆ ಹೊರವಲಯದಲ್ಲಿ ನಡೆದಿದ್ದ ಜಾತ್ರೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಲು ಹೊರಟಿದ್ದು ತನ್ನ ಬೈಕ್ ಚಾಲು ಮಾಡಿದ್ದು ಅದರಲ್ಲಿರಿಸಿದ್ದ ಜಾತ್ರೆಯ ವೇಳೆಗೆ ಸಿಡಿಸುವ ಕದೋನಿಗೆ ಬಳಸುವ ಸ್ಫೋಟಕ ಸಿಡಿದಿದೆ. ಅದು ಮನೆಯ ಒಂದು ಭಾಗದ ಮಣ್ಣಿನ ಗೋಡೆಗೆ ಸಂಪೂರ್ಣ ಹಾನಿ ಮಾಡಿದ್ದು ಪ್ರಕಾಶ್ ಸಹಿತ ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಮೂಡುಬಿದಿರೆ ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರೂ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸ್ಥಳಕ್ಕೆ ಭೇಟಿ ನೀಡಿ ತಮ್ಮ ವೈಯಕ್ತಿಕ ಆರ್ಥಿಕ ನೆರವನ್ನು ಪ್ರಕಟಿಸಿದ್ದಾರೆ. ಸ್ಥಳೀಯರ ಸಹಕಾರಿಂದ ಮನೆ ರಿಪೇರಿ ಮಾಡಿಸುವ ಬಗ್ಗೆಯೂ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.