ದನಕಳವು ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು, ಮಾ.10: ದನಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಕೇರಳದ ಮಂಜೇಶ್ವರ ಪೈವಳಿಕೆ ಗ್ರಾಮದ ಪಳ್ಳಮ್ ಸೈಟ್ ನಿವಾಸಿ ಅಬ್ದುಲ್ ಸಲಾಂ ಯಾನೆ ತುಡ್ವ ಸಲಾಂನನ್ನು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹದಳ ಬಂಧಿಸಿದೆ.
2018 ಮಾರ್ಚ್ ತಿಂಗಳಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾರಾಂ ಭಟ್ ಅವರಿಗೆ ಸೇರಿದ ಕೈರಂಗಳ ಪುಣ್ಯಕೋಟಿ ಗೋ ಆಶ್ರಮದಿಂದ ದನ ಕಳವು ಮಾಡಿದ್ದ ಎಂದು ಆರೋಪವನ್ನು ಎದುರಿಸುತ್ತಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ಕು ಆರೋಪಿಗಳನ್ನು ರೌಡಿ ನಿಗ್ರಹ ದಳ ಸಿಬ್ಬಂದಿ ಬಂಧಿಸಿದ್ದಾರೆ. ಅಬ್ದುಲ್ ಸಲಾಂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೂರು ದನ ಕಳವು ಪ್ರಕರಣ ಮತ್ತು ಕೊಣಾಜೆ ಠಾಣೆಯ ಎರಡು ಪ್ರಕರಣಗಳು ಹಾಗೂ ವಿಟ್ಲ ಠಾಣೆಯ ಒಂದು ಪ್ರಕರಣಗಳಲ್ಲಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಎಸಿಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳದ ಸಿಬ್ಬಂದಿ ಗ್ರಾಮ ಚಾವಡಿ ಎಂಬಲ್ಲಿ ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಎಸಿಪಿ ರಾಮರಾವ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.