ಉಡುಪಿ ಸರ್ವಜನೋತ್ಸದ ಪ್ರಚಾರಾರ್ಥ ಸ್ಟಿಕ್ಕರ್ ಬಿಡುಗಡೆ
ಉಡುಪಿ, ಮಾ.11: ಸಹಬಾಳ್ವೆ ಉಡುಪಿ ಜಿಲ್ಲೆ ಇದರ ವತಿಯಿಂದ ಮಾ.17 ರಂದು ಉಡುಪಿ ರೋಯಲ್ ಗಾರ್ಡನ್ನಲ್ಲಿ ಹಮ್ಮಿಕೊಳ್ಳಲಾದ ಸರ್ವ ಜನೋತ್ಸವದ ಸಮಾವೇಶದ ಪ್ರಚಾರಾರ್ಥವಾಗಿ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮವು ಸೋಮವಾರ ತೆಂಕಪೇಟೆಯ ಸೀತಾರ ಕಾಂಪ್ಲೆಕ್ಸ್ನಲ್ಲಿರುವ ಸಹಬಾಳ್ವೆ ಕಚೇರಿಯಲ್ಲಿ ನಡೆಯಿತು.
ಸ್ಟಿಕ್ಕರ್ ಬಿಡುಗಡೆಗೊಳಿಸಿದ ಹಿರಿಯ ಚಿಂತಕ ಜಿ. ರಾಜಶೇಖರ್ ಮಾತನಾಡಿ, ಭಾರತದಲ್ಲಿ ಹದಗೆಟ್ಟ ಸಾಮಾಜಿಕ ಪರಿಸ್ಥಿತಿಯನ್ನು ಒಂದು ಸರಿಯಾದ ಹಳಿಗೆ ತರುವ ಸಣ್ಣ ಪ್ರಯತ್ನ ಇದಾಗಿದೆ. ಇಂದು ದೇಶದ ಪರಿಸ್ಥಿತಿ ತೀರಾ ಹಾಳಾಗಿದೆ. ಇದಕ್ಕೆ ಕಾರಣಕರ್ತರಾದ ಶಕ್ತಿಗಳ ಕುರಿತು ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು. ದೇಶದಲ್ಲಿ ಶಾಂತಿ, ಸಹಬಾಳ್ವೆ, ಸಂವಿಧಾನ, ಪ್ರಜಾ ಪ್ರಭುತ್ವವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಉಡುಪಿ ನಗರಸಭೆ ಸದಸ್ಯ ರಮೇಶ್ ಕಾಂಚನ್ ಪ್ರಚಾರಕ್ಕೆ ಚಾಲನೆ ನೀಡಿದರು.
ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿರಿಲ್ ಮಥಾಯಸ್, ಮಾಜಿ ತಾಪಂ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ, ರೋಶನಿ ಒಲಿವೇರಾ, ಕೆಪಿಸಿಸಿ ಸಂಯೋಜಕ ಮಾರ್ಕ್ಸ್, ಪದಾಧಿಕಾರಿಗಳಾದ ಇದ್ರೀಸ್ ಹೂಡೆ, ಅಬ್ದುಲ್ ಅಝೀಝ್, ಮ್ಯಾಕ್ಸಿಂ ಡಿಸೋಜ, ಖಲೀಲ್ ಕೆರಾಡಿ ಮೊದಲಾದವರು ಉಪಸ್ಥಿತರಿದ್ದರು.