ದ.ಕ ಲೋಕಸಭಾ ಕ್ಷೇತ್ರ: ಜೆಡಿಎಸ್ನಿಂದ ನಾಲ್ವರು ಆಕಾಂಕ್ಷಿಗಳ ಪಟ್ಟಿ ಹೈಕಮಾಂಡ್ಗೆ ರವಾನೆ
ಮಂಗಳೂರು, ಮಾ.11: ದ.ಕ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ನಿಂದ ನಾಲ್ವರು ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಿಕೊಡಲಾಗಿದೆ ಎಂದು ದ.ಕ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ಹೇಳಿದರು.
ನಗರದ ಖಾಸಗಿ ಹೊಟೇಲಿನಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೈಕಮಾಂಡ್ನ ಕೋರಿಕೆಯಂತೆ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ ಫಾರೂಕ್, ಭೋಜೇಗೌಡ, ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಅವರ ಹೆಸರನ್ನು ಕಳುಹಿಸಿಕೊಡಲಾಗಿದೆ. ಈ ಸಂಬಂಧ ಪಕ್ಷದ ಜಿಲ್ಲಾ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅಂತಿಮ ತೀರ್ಮಾನ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ವಿಶ್ವನಾಥ್ ಅವರು ಮಾಡಲಿದ್ದಾರೆ ಎಂದರು.
ಒಂದು ವೇಳೆ ಹೈಕಮಾಂಡ್ ಈ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟರೆ ಜೊತೆಗೂಡಿ ಪ್ರಚಾರಕ್ಕೆ ಹೋಗಲಾಗುವುದು. ಅಲ್ಲದೆ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುವುದು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಆದ್ಯತೆಯಾಗಿದೆ ಎಂದು ಎಂ.ಬಿ. ಸದಾಶಿವ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯಲ್ಲಿ ಪಕ್ಷದ ಬಲ ಕಡಿಮೆಯಿದೆ. ಆದರೆ, ಮೈತ್ರಿ ಸರಕಾರ ಬಂದ ಬಳಿಕ ಜೆಡಿಎಸ್ ಪಕ್ಷದತ್ತ ಕಾರ್ಯಕರ್ತರ ಒಲವು ಹರಿದಿದೆ. ಹಾಗಾಗಿ ತಾಲೂಕು ಮತ್ತು ವಾರ್ಡ್ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಕ್ರಮ ಜರುಗಿಸಲಾಗಿದೆ. ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ವೈ.ಎಸ್. ದತ್ತ ಅವರ ಸೂಚನೆಯಂತೆ ಪಕ್ಷದ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಪಕ್ಷದ ಹಿರಿಯ ನಾಯಕರ ಸಮ್ಮುಖ ಶೀಘ್ರ ಜಿಲ್ಲಾ ಮಟ್ಟದ ಸಮಾವೇಶ ನಡೆಸಲಿದ್ದೇವೆ ಎಂದು ವಿಟ್ಲ ಮುಹಮ್ಮದ್ ಕುಂಞಿ ನುಡಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದಾಗ ಜಿಲ್ಲೆಯಲ್ಲಿ ಮೈತ್ರಿ ಸರಕಾರದಿಂದ ಯಾವುದೇ ಯೋಜನೆ ಅನುಷ್ಠಾನಗೊಂಡಿಲ್ಲ ಎಂದಿದ್ದಾರೆ. ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ಶಾಸಕರ ಪಾತ್ರವೂ ಇದೆ. ಹಾಗಾಗಿ ಅವರದೇ ಪಕ್ಷದ ಶಾಸಕರ ವೈಫಲ್ಯ ವನ್ನು ಅವರು ಒಪ್ಪಿಕೊಂಡಂತಾಗಿದೆ ಎಂದು ಎಂ.ಬಿ.ಸದಾಶಿವ ಹೇಳಿದರು.
ಬಿಜೆಪಿಗರು ಎಚ್ಡಿಡಿ ಕುಟುಂಬದ ರಾಜಕಾರಣದ ಮಾತನಾಡುತ್ತಿದ್ದಾರೆ. ಸ್ವತ: ಬಿಜೆಪಿಯ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ರಾಜನಾಥ ಸಿಂಗ್, ಕಲ್ಯಾಣ ಸಿಂಗ್ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ ಎಂದು ಎಂ.ಬಿ.ಸದಾಶಿವ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸುಶೀಲ್ ನೊರೊನ್ಹಾ, ಅಕ್ಷಿತ್ ಸುವರ್ಣ, ರಮೀಝಾ ನಾಸರ್, ನಾಸರ್ ಯಾದ್ಗಾರ್ ಉಪಸ್ಥಿತರಿದ್ದರು.