ಲೋಕ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಸಿದ್ಧತೆ: 14,94,443 ಮತದಾರರು
1,43,198 ಕಳೆದ ಬಾರಿಗಿಂತ ಹೆಚ್ಚುವರಿ ಮತದಾರರು
ಮಣಿಪಾಲ, ಮಾ.11: ಲೋಕಸಭಾ ಸಮರಕ್ಕೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಸರ್ವ ರೀತಿಯಲ್ಲೂ ಸಜ್ಜಾಗಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಒಟ್ಟು 14,94,443 ಮತದಾರರು ಮತದಾನ ಮಾಡಲು ಅರ್ಹರಾಗಿದ್ದು, ಇದು 2014ರ ಚುನಾವಣೆಯ ವೇಳೆ ಕ್ಷೇತ್ರದಲ್ಲಿದ್ದ ಮತದಾರರಿಗಿಂತ 1,43,198 ಅಧಿಕವಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪತಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಜಿಪಂ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಸಿಂಧು ಬಿ.ರೂಪೇಶ್ ಹಾಗೂ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರೊಂದಿಗೆ ಮಣಿಪಾಲದ ತಮ್ಮ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತದಾನ ಮೊದಲ ಹಂತದಲ್ಲಿ ಅಂದರೆ ಎ.18ರಂದು ನಡೆಯಲಿದೆ. ಚುನಾವಣೆಗಾಗಿ ಮಾ.19ರ ಮಂಗಳವಾರ ಅಧಿಸೂಚನೆ ಹೊರಡಿಸಲಾಗುವುದು, ಅಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ ಗೊಳ್ಳಲಿದ್ದು, ಮಾ. 26ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಮಾ.27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾ.29 ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ ಎಂದವರು ವಿವರಿಸಿದರು.
ಮತದಾನವು ಎ.18ರಂದು 1111 ಮತಗಟ್ಟೆಗಳಲ್ಲಿ ನಡೆಯಲಿದೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಲ್ಲಾ ಎಂಟು ತಾಲೂಕುಗಳ ಮತಗಳ ಎಣಿಕೆ ಮೇ 23ರಂದು ನಡೆಯಲಿದೆ. ಈ ಬಾರಿ ಮತಗಳ ಎಣಿಕೆ ನಗರದ ಸೈಂಟ್ ಸಿಸಿಲೀಸ್ ಪ.ಪೂ.ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಕಾರ್ಕಳ ವಿಧಾನ ಸಭಾ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ತರಿಕೆರೆ ವಿಧಾನಸಭಾ ಕ್ಷೇತ್ರಗಳು ಉಡುಪಿ-ಚಿಕ್ಕಮಗ ಳೂರು ವ್ಯಾಪ್ತಿಗೆ ಬರಲಿವೆ. ಕ್ಷೇತ್ರದಲ್ಲಿ 7,30,288 ಪುರುಷ ಹಾಗೂ 7,64,105 ಮಹಿಳೆಯರು ಹಾಗೂ 50 ತೃತೀಯ ಲಿಂಗ ಮತದಾರರು ಸೇರಿದಂತೆ ಒಟ್ಟು 14,94,443 ಮತದಾರರಿದ್ದಾರೆ ಎಂದು ಅವರು ಹೇಳಿದರು.
ಇವುಗಳಲ್ಲಿ ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 7,68,231 ಮತದಾರಿದ್ದು, ಇದರಲ್ಲಿ ಮಹಿಳೆಯರು 3,99,225, ಪುರುಷ ಮತದಾರರು 3,68,991 ಹಾಗೂ ತೃತೀಯ ಲಿಂಗಿಗಳು 15 ಮಂದಿ ಸೇರಿದ್ದಾರೆ.
ಇನ್ನು ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 7,26,213 ಮತದಾರರಿದ್ದಾರೆ. ಇವರಲ್ಲಿ 3,64,880 ಮಹಿಳಾ ಮತದಾರರಾದರೆ 3,61,792 ಮಂದಿ ಪುರುಷ ಮತದಾರರು, 35 ಮಂದಿ ತೃತೀಯ ಲಿಂಗಿಗಳು ಇವರಲ್ಲಿ ಸೇರಿದ್ದಾರೆ. ಎರಡೂ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿರುವುದು ಈ ಕ್ಷೇತ್ರದ ವೈಶಿಷ್ಟ್ಯವಾಗಿದೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಟ್ಟು 1727 ಮಂದಿ ವಿಕಲಚೇತನ ಮತದಾರರಿದ್ದಾರೆ. ಕುಂದಾಪುರದಲ್ಲಿ 1605 (781 ಪುರುಷ, 824 ಮಹಿಳೆ), ಉಡುಪಿ 1516 (869, 647), ಕಾಪು 1257 (740, 517), ಕಾರ್ಕಳ 1439 (853, 586), ಶೃಂಗೇರಿ 1239(708, 531), ಮೂಡಿಗೆರೆ 734 (440, 294), ಚಿಕ್ಕಮಗಳೂರು 1371 (873, 498), ತರೀಕೆರೆ 1371 (873, 498) ಒಟ್ಟು 1727 (1064, 663) ಮತದಾರರು.
ಈ ಮತದಾರರಿಗೆ ವೀಲ್ಚೆಯರ್ ಹಾಗೂ ಬಯಸಿದರೆ ವಾಹನ ವ್ಯವಸ್ಥೆಯನ್ನು ಚುನಾವಣಾ ಆಯೋಗದ ಸೂಚನೆಯಂತೆ ಮಾಡಲಾಗುವುದು. ಈ ಬಾರಿ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚದ ಮಿತಿಯನ್ನು 70 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಕಳೆದ ಬಾರಿ ಈ ಮೊತ್ತ 40 ಲಕ್ಷ ರೂ. ಆಗಿತ್ತು.
ನಮೂನೆ-26 ತಿದ್ದುಪಡಿ: ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸುವ ಅಫಿಡವಿತ್ ನಮೂನೆ-26 ತಿದ್ದುಪಡಿಗೊಂಡಿದ್ದು, ತಿದ್ದುಪಡಿಗೊಂಡ ನಮೂನೆಯಲ್ಲೇ ಕಡ್ಡಾಯವಾಗಿ ಅಫಿಡವಿಟ್ನ್ನು ಅಭ್ಯರ್ಥಿಗಳು ಸಲ್ಲಿಸ ಬೇಕಾಗಿದೆ.
ಅಭ್ಯರ್ಥಿಗಳುನಾಮಪತ್ರದೊಂದಿಗೆಸಲ್ಲಿಸುವಅಫಿಡವಿತ್ನಮೂನೆ-26ತಿದ್ದುಪಡಿಗೊಂಡಿದ್ದು,ತಿದ್ದುಪಡಿಗೊಂಡನಮೂನೆಯಲ್ಲೇಕಡ್ಡಾಯವಾಗಿಅಫಿಡವಿಟ್ನ್ನುಅ್ಯರ್ಥಿಗಳು ಸಲ್ಲಿಸ ಬೇಕಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮಾ.10ರಿಂದಲೇ ರಾಜ್ಯಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಉಡುಪಿ ಜಿಲ್ಲೆಯ ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಭಾಸ್ಕರ್ ಬಿ. ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಅಲ್ಲದೇ ಲೋಕಸಭಾ ಕ್ಷೇತ್ರದಲ್ಲಿ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 1837 ಮತಗಟ್ಟೆಗಳನ್ನು ತೆರೆಯಲಾಗುವುದು. ಇವುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 865 ಮತಗಟ್ಚೆಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 972 ಮತಗಟ್ಟೆ ಗಳಿರುತ್ತವೆ ಎಂದು ಹೆಪ್ಸಿಬಾ ರಾಣಿ ತಿಳಿಸಿದರು.
ಕ್ಷೇತ್ರವಾರು ಮತಗಟ್ಟೆಗಳ ಸಂಖ್ಯೆ ಹೀಗಿದೆ. ಕುಂದಾಪುರ 222, ಉಡುಪಿ 226, ಕಾಪು 208, ಕಾರ್ಕಳ 209, ಶೃಂಗೇರಿ 256, ಮೂಡಿಗೆರೆ 231, ಚಿಕ್ಕಮಗಳೂರು 257 ಹಾಗೂ ತರೀಕೆರೆ 228ಮತಗಟ್ಟೆಗಳು. ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಮೇಲುಸ್ತುವಾರಿಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರು ನೋಡಿಕೊಳ್ಳುತ್ತಾರೆ ಎಂದರು.
ಲೋಕಸಭಾ ಕ್ಷೇತ್ರದಾದ್ಯಂತ ವಿಧಾನಸಭಾ ಕ್ಷೇತ್ರವಾರು ಯಾವುದೇ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲು ವಿವಿಧ ತಂಡಗಳನ್ನು ರಚಿಸಲಾಗಿದೆ ಈ ತಂಡಗಳು ಈಗಾಗಲೇ ಕಾರ್ಯ ಪ್ರವೃತ್ತವಾಗಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ 24 ಗಂಟೆಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿರುವ ಎಲ್ಲಾ ಪ್ರಕಾರದ ಪ್ರಚಾರ ವಸ್ತುಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಾರ್ವಜನಿಕರೂ ತಮ್ಮ ಮನೆಗಳ ಮುಂದೆ ಯಾವುದೇ ರಾಜಕೀಯ ಪಕ್ಷದ ಬ್ಯಾನರ್ ಅಳವಡಿಸಿದ್ದರೆ ಅವುಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.
50ಸಾವಿರಕ್ಕಿಂತ ಅಧಿಕ ನಗದು ಒಯ್ಯುವಂತಿಲ್ಲ: ಇನ್ನು ಮುಂದೆ ಸಮರ್ಪಕ ದಾಖಲೆಗಳಿಲ್ಲದೇ 50,000 ರೂ.ಗಳಿಗಿಂತ ಅಧಿಕ ನಗದು ಕೊಂಡೊ ಯ್ಯುವಂತಿಲ್ಲ. ಸರಕಾರಿ ವಾಹನಗಳು, ಸಿಬ್ಬಂದಿ ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಲಾಗುವುದು. ಇನ್ನು ಮುಂದೆ ಪ್ರವಾಸಿ ಮಂದಿರ ಜಿಲ್ಲಾ ಚುನಾವಣಾ ಧಿಕಾರಿಗಳ ಅಧೀನದಲ್ಲಿರುತ್ತದೆ ಎಂದು ಕೊರ್ಲಪತಿ ತಿಳಿಸಿದರು.
ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರಚಾರ, ಸಭೆ ಸಮಾರಂಭಗಳಿಗೆ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಇನ್ನು ಮುಂದೆ ಯಾವುದೇ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಧ್ವನಿವರ್ದಕದ ಅನುಮತಿಯನ್ನು ಪೊಲೀಸ್ ಇಲಾಖೆಯಿಂದ ಪಡೆಯ ಬೇಕಾಗುತ್ತದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಇನ್ನು ಮುಂದೆ ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಧ್ವನಿವರ್ದಕವನ್ನು ಬಳಸಬಹುದಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕದ ಬಳಕೆಗೆ ಅವಕಾಶವಿಲ್ಲ. ಯಕ್ಷಗಾನದಂಥ ಕಾರ್ಯಕ್ರಮಗಳಿಗೂ ಇವು ಅನ್ವಯವಾಗುವುದು. ಆದರೆ ಅವರು ಸಂಬಂಧಿತ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿದೆ ಎಂದರು.
ಪ್ರತಿಯೊಬ್ಬ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳು ಮಾಡುವ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣಿಡಲಾಗುವುದು. ಇದರ ಮೇಲೆ ನಿಗಾವಹಿಸಲು ಪ್ರತ್ಯೇಕ ಸಮಿತಿ ಹಾಗೂ ವೀಕ್ಷಕರನ್ನು ನೇಮಿಸಲಾಗಿದೆ. ಯಾವುದೇ ಅಕ್ರಮ ಎಸಗಿದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.