ದಾಸ ಸಾಹಿತ್ಯ ಅವಮಾನಿಸಿದ ಮಂಗಳೂರು ವಿವಿ: ಪಠ್ಯ ಹಿಂಪಡೆಯಲು ಒತ್ತಾಯ
ಮಂಗಳೂರು, ಮಾ.11: ದೇಶದ ಭಕ್ತಿ ಸಾಹಿತ್ಯದಲ್ಲೇ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟ ದಾಸ ಸಾಹಿತ್ಯವನ್ನು ಮಂಗಳೂರು ವಿಶ್ವವಿದ್ಯಾಲಯದ ‘ಸಾಹಿತ್ಯ ಸೊಡರು’ ಎಂಬ ಪಠ್ಯ ಪುಸ್ತಕ ಕೀಳಾಗಿ ಚಿತ್ರಿಸಿದ್ದು, ಪಠ್ಯವನ್ನು ಹಿಂಪಡೆಯುವಂತೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕ ಒತ್ತಾಯಿಸಿದೆ.
ಇದು ವಿದ್ಯಾರ್ಥಿಗಳ ಕಲಿಕಾ ಅಭಿರುಚಿಯನ್ನು ಹಾಳು ಮಾಡುವ ರೀತಿಯಲ್ಲಿದೆ. ಹಲವು ಸುಳ್ಳು ಹಾಗು ಆಧಾರರಹಿತ ಹೇಳಿಕೆಗಳು ಈ ಪಠ್ಯದಲ್ಲಿದ್ದು, ಇದು ಪಠ್ಯಪುಸ್ತಕ ರಚನೆಯ ತತ್ವಕ್ಕೆ ವಿರುದ್ಧವಾಗಿದೆ. ಸಾವಿರಾರು ಕೀರ್ತನೆಗಳನ್ನು ರಚಿಸಿ ಪ್ರಾತಃಸ್ಮರಣೀಯರಾದ ಕನಕ, ಪುರಂದರರ ಬಗ್ಗೆ ಕೀಳು ಅಭಿರುಚಿಯ ವಿವರಣೆಗಳನ್ನು ನೀಡಲಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಿಳಿಸಿದೆ.
ಈ ಪಠ್ಯ ವಿದ್ಯಾರ್ಥಿ ಸಮುದಾಯಕ್ಕೆ ತಪ್ಪು ಮಾಹಿತಿ ನೀಡುತ್ತಿದೆ. ಇಂತಹ ಪಠ್ಯವನ್ನು ಕೂಡಲೇ ಹಿಂಪಡೆಯಬೇಕು ಮತ್ತು ಸಂಪಾದಕ ಮಂಡಳಿಯ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ. ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.