ಲೋಕಸಭಾ ಚುನಾವಣೆ ಹಿನ್ನಲೆ: ಕೋವಿಗಳನ್ನು ತಂದೊಪ್ಪಿಸಲು ಸೂಚನೆ
ಉಪ್ಪಿನಂಗಡಿ: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರವಾನಿಗೆಯಡಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಠೇವಣಿಯಿಡಲು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು, ಅದರಂತೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಸ್ತ್ರಾಸ್ತ ಪರವಾನಿಗೆದಾರರು ಕೋವಿ, ಪಿಸ್ತೂಲ್ ಸೇರಿದಂತೆ ತಮ್ಮ ಪರವಾನಿಗೆಯಡಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಠೇವಣಿಯಿಟ್ಟು ರಶೀದಿ ಪಡೆದುಕೊಳ್ಳಬೇಕೆಂದು ಉಪ್ಪಿನಂಗಡಿ ಪೊಲೀಸ್ ಠಾಣಾ ಪ್ರಕಟನೆ ತಿಳಿಸಿದೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಸ್ತ್ರಾಸ್ತ ಪರವಾನಿಗೆದಾರರು ಪರವಾನಿಗೆ ಹೊಂದಿರುವ ಉಪ್ಪಿನಂಗಡಿಯ ಅಧಿಕೃತ ಕೋವಿ, ಮದ್ದುಗುಂಡು ವ್ಯಾಪಾರಿ ಜಗದೀಶ್ ಶೆಟ್ಟಿ ಅವರ ಬಳಿ ಬೆಳೆ ರಕ್ಷಣೆ, ಆತ್ಮರಕ್ಷಣೆಗಾಗಿ ಪರವಾನಿಗೆಯಡಿ ಪಡೆದ ಶಸ್ತ್ರಾಸ್ತ್ರಗಳನ್ನು ತಂದೊಪ್ಪಿಸಿ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ರಶೀದಿ ಪಡೆದುಕೊಳ್ಳಬೇಕು. ಅಮಾನತಿನ ಅವಧಿ ಮುಗಿದ ಬಳಿಕ ಠೇವಣಿಯಿಟ್ಟ ಸೊತ್ತುಗಳನ್ನು ಪಡೆದುಕೊಂಡು ಹೋಗಬೇಕು. ಲೋಕಸಭಾ ಚುನಾವಣಾ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ದ.ಕ. ಜಿಲ್ಲೆಯ ಎಲ್ಲಾ ಪರವಾನಿಗೆದಾರರು ಪರವಾನಿಗೆಯಡಿ ಪಡೆದ ಶಸ್ತ್ರಾಸ್ತ್ರಗಳನ್ನು ಠೇವಣಿಯಿಡಲು ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸರು ತಿಳಿಸಿದ್ದಾರೆ.