ಉಡುಪಿ: ಮರಳಿನ ಸಮಸ್ಯೆ ವಿರೋಧಿಸಿ ಜಯ ಕರ್ನಾಟಕದಿಂದ ಚುನಾವಣಾ ಬಹಿಷ್ಕಾರದ ಘೋಷಣೆ
ಉಡುಪಿ, ಮಾ.12: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉಡುಪಿ ಜಿಲ್ಲೆಯ ಮರಳಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಜಯ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿಯು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಘೋಷಣೆ ಮಾಡಿದೆ.
ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಜಯ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಮಾತನಾಡಿದ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಸಾಲಿಗ್ರಾಮ, ಉಡುಪಿ ಜಿಲ್ಲೆಯ ಮರಳಿನ ಸಮಸ್ಯೆ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಿಲ್ಲ. ಮರಳಿನ ಸಮಸ್ಯೆಯಿಂದ ಕೂಲಿ ಕಾರ್ಮಿಕರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ಬಡವರು ಮನೆ ಕಟ್ಟಲು ಸಾಲ ಪಡೆದುಕೊಂಡಿದ್ದರೂ ಮನೆ ನಿರ್ಮಿಸಲು ಮರಳು ಇಲ್ಲದೆ ಸಂಕಷ್ಟ ಪಡುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉಡುಪಿ ಜಿಲ್ಲೆಗೆ ವಿವಿಧ ರೀತಿಯಲ್ಲಿ ನಿರಂತರ ಅನ್ಯಾಯ ಮಾಡುತ್ತಿವೆ. ನಾವು ಯಾವ ಕಾರಣಕ್ಕೆ ಇವರಿಗೆ ಮತ ಹಾಕಬೇಕು. ರಾಜಕಾರಣಿಗಳು ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಮತ ಕೇಳಲು ಬರುತ್ತಾರೆ. ಮರಳಿನ ಸಮಸ್ಯೆ ಬಗೆಹರಿಸುವಲ್ಲಿ ಎರಡೂ ಸರಕಾರಗಳು ಹಾಗೂ ಜಿಲ್ಲೆಯ ಸಂಸದರು, ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ. ಆದುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಗುವುದು. ಅಲ್ಲದೆ ಸಂಘಟನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಬಗ್ಗೆ ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಧರಣಿಯಲ್ಲಿ ಜಯ ಕರ್ನಾಟಕ ಗೌರವಾಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್, ಕಾರ್ಯಾಧ್ಯಕ್ಷ ಶರತ್ ಶೆಟ್ಟಿ ಕುಂದಾಪುರ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಹೋರಾಟ ಸಮಿತಿ ಅಧ್ಯಕ್ಷ ಕರುಣಾಕರ ಪೂಜಾರಿ, ಪದಾಧಿಕಾರಿ ಗಳಾದ ಗಣೇಶ್ ರಾಜ್ ಸರಳಬೆಟ್ಟು, ಅಣ್ಣಪ್ಪ ಕುಲಾಲ್ ಹೆಬ್ರಿ, ಹರೀಶ್ ಶೆಟ್ಟಿ ಉಚ್ಚಿಲ, ಮಹೇಶ್ ಕೋಟ್ಯಾನ್ ಉಪ್ಪೂರು, ಸುಧಾಕರ ರಾವ್ ಬಾರಕೂರು, ರತ್ನಾಕರ ಮೊಗವೀರ ಹಾವಂಜೆ, ವಿವೇಕ್ ಕಲ್ಮಾಡಿ, ಮಹೇಶ್ ಮಣಿಪಾಲ, ಶ್ರೀನಿವಾಸ ಶೆಟ್ಟಿ ತೋನ್ಸೆ ಉಪಸ್ಥಿತರಿದ್ದರು.
ಶೋಭಾ ಚುನಾವಣೆ ಸ್ಪರ್ಧಿಸಿದರೆ ವಿರೋಧ
ಐದು ವರ್ಷಗಳ ಕಾಲ ಉಡುಪಿ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ಬಾರಿ ಅವರೇ ಚುನಾವಣೆ ಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅವರಿಗೆ ನಾವು ಯಾವುದೇ ರೀತಿಯ ಬೆಂಬಲ ನೀಡುವುದಿಲ್ಲ. ಅವರು ನಮ್ಮ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ್ದಾರೆ. ಏಳು ಜನ ಮೀನುಗಾರರು ನಾಪತ್ತೆ, ಕೋಟ ಕೊಲೆ ಪ್ರಕರಣ, ಮರಳಿನ ಸಮಸ್ಯೆಗಳಿಗೆ ಶೋಭಾ ಕರಂದ್ಲಾಜೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಿಲ್ಲ. ಇವರು ಸಮಸ್ಯೆಗಳನ್ನು ಜಾಸ್ತಿ ಮಾಡಿದ್ದರೆ ವಿನಃ ಯಾವುದೇ ಸಮಸ್ಯೆಗಳನ್ನು ಪರಿಹರಿಸಿಲ್ಲ. ಇದು ಕ್ಷೇತ್ರವನ್ನು ನಿರ್ಲಕ್ಷಿಸಿರುವ ಸಂಸದೆ ವಿರುದ್ಧ ನಮ್ಮ ಹೋರಾಟವೇ ಹೊರತು ಯಾವುದೇ ಪಕ್ಷದ ವಿರುದ್ಧ ಅಲ್ಲ ಎಂದು ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಸಾಲಿಗ್ರಾಮ ತಿಳಿಸಿದರು.