ನಟ ನಾಗರಾಜಮೂರ್ತಿಗೆ ನಾಟ್ಕ ಸಂಮಾನ
ಹೆಬ್ರಿ, ಮಾ.12: ಮುದ್ರಾಡಿಯ ನಾಟ್ಕದೂರಿನಲ್ಲಿ ಮುದ್ರಾಡಿ ನಮ ತುಳುವೆರ್ ಕಲಾಸಂಘಟನೆ-ನಾಟ್ಕ ಮುದ್ರಾಡಿ ವತಿಯಿಂದ ಕಳೆದೊಂದು ವಾರದಿಂದ ನಡೆದಿರುವ 9ನೇ ವರ್ಷದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ ಬುಧವಾರ ಮುಕ್ತಾಯಗೊಳ್ಳಲಿದ್ದು, ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಹಿರಿಯ ನಟ ಹಾಗೂ ಸಂಘಟಕ ಕೆ.ವಿ.ನಾಗರಾಜಮೂರ್ತಿ ಅವರಿಗೆ 2019ನೇ ಸಾಲಿನ ನಾಟ್ಕ ಸಂಮಾನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿ ಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.
ಕೆ.ವಿ.ನಾಗರಾಜಮೂರ್ತಿ ಕಳೆದ 40 ವರ್ಷಗಳಿಂದ ರಂಗಭೂಮಿಯಲ್ಲಿ ನಾಟಕಕಾರ, ನಟ, ಸಂಘಟಕರಾಗಿ ವಿಶೇಷವಾಗಿ ಕಾಲೇಜು ರಂಗಭೂಮಿಯಲ್ಲಿ ಅಪಾರ ಸೇವೆಯನ್ನ ಸಲ್ಲಿಸಿ, ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಉತ್ಸವಗಳ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಮುದ್ರಾಡಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪ ಭಾಷಣವನ್ನು ಕವಿ, ನಾಟಕಕಾರರಾದ ಹೊಸದಲ್ಲಿ ಜವಾಹರಲಾಲ್ ನೆಹರು ವಿವಿಯ ಪ್ರಾಧ್ಯಾಪಕ ಡಾ.ಎಚ್.ಎಸ್. ಶಿವಪ್ರಕಾಶ್ ನೀಡಲಿದ್ದಾರೆ. ಆಗಮಿಸುವರು ಎಂದು ಸಂಸ್ಥೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.
ಇದಕ್ಕೆ ಮುನ್ನ ನಾಳೆ ಸಂಜೆ 5 ಕ್ಕೆ ಜನಪದ ಕಲಾ ತಂಡಗಳ ಮೆರವಣಿಗೆ ಮುದ್ರಾಡಿಯ ಗಣಪತಿ ದೇವಸ್ಥಾನದಿಂದ ನಾಟ್ಕದೂರಿನ ತನಕ ನಡೆಯಲಿದೆ. ಸಮಾರೋಪದ ಬಳಿಕ ಕೆ.ಜಿ.ಮಹಾಬಲೇಶ್ವರ್ ನಿರ್ದೇಶನದಲ್ಲಿ ರಂಗಾಯಣ ಮೈಸೂರು ತಂಡದಿಂದ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸುಕುಮಾರ್ ಮೋಹನ್ ತಿಳಿಸಿದ್ದಾರೆ.