ಮರಕ್ಕೆ ಕಾರು ಢಿಕ್ಕಿ: ಓರ್ವ ಮೃತ್ಯು
ಹಿರಿಯಡ್ಕ, ಮಾ.12: ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಪೆರ್ಡೂರು ಸಮೀಪದ ಪಕ್ಕಾಲು ಎಂಬಲ್ಲಿ ಮಂಗಳವಾರ ಸಂಜೆ ವೇಳೆ ನಡೆದಿದೆ.
ಮೃತರನ್ನು ಬೆಳ್ತಂಗಡಿಯ ಪ್ರಶಾಂತ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ರಾಜೇಶ್, ಪ್ರಸಾದ್ ಎಂಬವರು ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ ಕೋಟ್ನಕಟ್ಟೆ ಸಮೀಪದ ಮುದ್ದೂರು ಫ್ಯಾಕ್ಟರಿಯೊಂದರ ಉದ್ಯೋಗಿಯಾಗಿದ್ದಾರೆ.
ಹಿರಿಯಡ್ಕದಿಂದ ಪೆರ್ಡೂರು ಕಡೆ ಹೋಗುತ್ತಿದ್ದ ಮಾರುತಿ ಝೆನ್ ಕಾರು, ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆ ಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಚಾಲಕ ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story