‘ಭಜರಂಗಿ ಭಜರಂಗಿ’ ಹಾಡಿಗೆ ಕಡಿವಾಣ ಹಾಕಲು ಆಗ್ರಹ: ಅಪರ ಜಿಲ್ಲಾಧಿಕಾರಿಗೆ ಸಿಎಫ್ಐ ಮನವಿ
ಮಂಗಳೂರು, ಮಾ.12: ದ.ಕ. ಜಿಲ್ಲೆಯ ಕಾಲೇಜುಗಳಲ್ಲಿ ‘ಭಜರಂಗಿ ಭಜರಂಗಿ...’ ಎಂಬ ಪ್ರಚೋದನಕಾರಿ ಹಾಡಿಗೆ ಕಡಿವಾಣ ಹೇರಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದ.ಕ. ಜಿಲ್ಲಾ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಹಲವು ವಿದ್ಯಾಸಂಸ್ಥೆಗಳಲ್ಲಿ ಇತ್ತೀಚೆಗೆ ವಾರ್ಷಿಕೋತ್ಸವ, ಕ್ರೀಡೋತ್ಸವ, ಟ್ಯಾಲೆಂಟ್ಸ್ ಡೇ ಮುಂತಾದ ಕಾರ್ಯಕ್ರಮಗಳ ಹೆಸರಿನಲ್ಲಿ ಕೋಮು ಪ್ರಚೋದನಕಾರಿ ‘ಭಜರಂಗಿ ಭಜರಂಗಿ...’ ಹಾಡುಗಳಿಗೆ ಕುಣಿಯುವುದು ಅಲ್ಲದೆ, ಇಂತಹ ಕಾರ್ಯಕ್ರಮಗಳಲ್ಲಿ ಕೇಸರಿ ಧ್ವಜ ಮತ್ತು ಬಂಟಿಂಗ್ಸ್ಗಳಿಂದ ಅಲಂಕರಿಸುತ್ತಿರುವುದು ಹೆಚ್ಚುತ್ತಿದೆ ಎಂದು ಮನವಿ ದೂರಿದರು.
ಜಿಲ್ಲೆಯ ಬೆಟ್ಟಂಪಾಡಿ ಸರಕಾರಿ ಕಾಲೇಜು ಪುತ್ತೂರು, ಸಿದ್ದಕಟ್ಟೆ ಸರಕಾರಿ ಕಾಲೇಜು ಹಾಗೂ ಕಳೆದ ವರ್ಷ ವಿವೇಕಾನಂದ ಕಾನೂನು ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಮುಂತಾದ ಕಡೆಗಳಲ್ಲಿ ಇಂತಹ ಘಟನೆಗಳು ಕಂಡುಬಂದಿವೆ ಎಂದು ಮನವಿಯಲ್ಲಿ ವಿವರಿಸಿದರು.
ಖಾಸಗಿ ಮತ್ತು ಸರಕಾರಿ ವಿದ್ಯಾಸಂಸ್ಥೆಗಳಲ್ಲಿ ಎಲ್ಲ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳಿರುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಉದ್ದೇಶಪೂರ್ವಕವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದು ಇತರ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂಸ್ಥೆಗಳು ಕಾರ್ಯಕ್ರಮವನ್ನು ನಡೆಸುವುದಾದರೆ ಮುಂಚಿತವಾಗಿ ಎಲ್ಲ ಕಾರ್ಯಕ್ರಮಗಳ ರಿಹರ್ಸಲ್ಗಳನ್ನು ವೀಕ್ಷಿಸಬೇಕು. ಆದರೆ ಇಲ್ಲಿ ಹೇಗೆ ಅನುಮತಿ ನೀಡಿದರೆಂಬುವುದು ಪ್ರಶ್ನಾರ್ಹ. ಈ ಬಗ್ಗೆ ಸಂಸ್ಥೆಯಲ್ಲಿ ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಜಿಲ್ಲೆಯ ಕೋಮು ಸೌಹಾರ್ದ ಕಾಪಾಡುವ ಉದ್ದೇಶದಿಂದ ಇಂತಹ ಪ್ರಚೋದನಕಾರಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿತು.
ನಿಯೋಗದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಮುಹಮ್ಮದ್ ಸಾದಿಕ್, ಕಾರ್ಯದರ್ಶಿ ನಿಝಾಂ ಹಾಗೂ ತಾಲೂಕು ಅಧ್ಯಕ್ಷ ಸಿರಾಜ್ ಉಪಸ್ಥಿತರಿದ್ದರು.