ಸಮಾಜದಲ್ಲಿ ಮಡಿವಂತಿಕೆ, ಜಾತಿ-ನೀತಿಗಳನ್ನು ಮೀರಿದ ಬೆಳವಣಿಗೆಯೇ ಶ್ರೇಷ್ಠ : ಜಬ್ಬಾರ್ ಸುಮೋ
ಪುತ್ತೂರು: ವಿಶೇಷವಾದ ಪ್ರತಿಭೆಗಳಿಗೆ ಕಲೆಯ ಪಟ್ಟ ಲಭಿಸುತ್ತಿದ್ದರೂ, ಇದಕ್ಕಿಂತ ಬದುಕಿನ ಕಲೆ ಬಹಳ ಮುಖ್ಯ. ಸಮಾಜದಲ್ಲಿ ಮಡಿವಂತಿಕೆ,ಜಾತಿ-ನೀತಿಗಳನ್ನು ಮೀರಿದ ಬೆಳವಣಿಗೆಯೇ ಶ್ರೇಷ್ಠ ಎಂದು ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಜಬ್ಬಾರ್ ಸಮೋ ಅಭಿಪ್ರಾಯಪಟ್ಟರು.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಂಘ ಮತ್ತು ಯಕ್ಷಕಲಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆದ `ಅಂಗದ ಸಂಧಾನ' ಯಕ್ಷಗಾನ ತಾಳಮದ್ದಳೆ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಲಿತ ಕಲಾ ಸಮೂಹದಲ್ಲಿ ವೀರಭಾಷೆ, ವೀರಭಾವ ಮತ್ತು ವೀರಶೈಲಿಯನ್ನೊಳಗೊಂಡ ಯಕ್ಷಗಾನವು ಗಂಡು ಕಲೆಯೆಂಬ ಹೆಗ್ಗಳಿಕೆ ಪಡೆದಿದೆ. ದೇಶ,ಭಾಷೆ ಮೀರಿ ಬೆಳೆಯುತ್ತಿರುವ ಯಕ್ಷಗಾನ ಒಂದು ವಿಸ್ತಾರವಾದ ಕಲೆ ಎಂದು ಅವರು ಹೇಳಿದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಆ್ಯಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ಯಾವುದೇ ಕಲೆಯಾಗಿರಲಿ, ಎಲ್ಲಿ ಹೋದರೂ ಅದಕ್ಕೆ ಮುನ್ನಣೆ ಇದೆ. ಪ್ರಾದೇಶಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ಕಲಾರಾಧನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಿಯೋ ನೊರೊನ್ಹಾ ಅವರು ಮಾತನಾಡಿ,ಗತ್ತು, ಗಾಂಭೀರ್ಯ, ಶ್ರುತಿ, ತಾಳ, ಲಯ, ನೃತ್ಯ ಹೀಗೆ ಹತ್ತು ಹಲವು ಸಂಸ್ಕಾರಗಳ ಮೇಳೈಸುವಿಕೆಯೇ ಯಕ್ಷಗಾನ ಎಂದರು.
ಯಕ್ಷಗಾನ ಕಲಾಕೇಂದ್ರದ ಸಂಯೋಜಕ ಪ್ರಶಾಂತ್ ರೈ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿಜಯಕುಮಾರ್ ಮೊಳೆಯಾರ್ ವಂದಿಸಿದರು. ರಂಗ ಕಲಾ ಸಂಘದ ಸಹ ನಿರ್ದೇಶಕಿ ರಾಜೇಶ್ವರಿ ಎಂ.ನಿರೂಪಿಸಿದರು.
ಬಳಿಕ ನಡೆದ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ ಉಪನ್ಯಾಸಕ ಪ್ರಶಾಂತ್ ರೈ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ನಿತೇಶ್ಕುಮಾರ್, ಮದ್ದಳೆ ವಾದಕರಾಗಿ ಚಂದ್ರಶೇಖರ್ ಗುರುವಾಯನಕೆರೆ, ಅಂಗದನ ಪಾತ್ರದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ, ಪ್ರಹಸ್ತನ ಪಾತ್ರದಲ್ಲಿ ಬಬ್ಬಾರ್ ಸಮೋ ಅವರು ಕಲಾಸಕ್ತರ ಗಮನ ಸೆಳೆದರು.