ಶ್ರೀಕೃಷ್ಣ ಮಠದ ಗರ್ಭಗುಡಿ ಛಾವಣಿ ಬಿಚ್ಚುವ ಕೆಲಸಕ್ಕೆ ಚಾಲನೆ
ಉಡುಪಿ, ಮಾ.13: ಶ್ರೀಕೃಷ್ಣಮಠದ ಗರ್ಭಗುಡಿಯ ಮೇಲ್ಚಾವಣಿಗೆ ಬಂಗಾರದ ತಗಡು ಹೊದಿಸುವ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥರ ಮಹತ್ವಾಕಾಂಕ್ಷಿ ಯೋಜನೆಗೆ ಬುಧವಾರ ಅಧಿಕೃತ ಚಾಲನೆ ದೊರೆತಿದೆ.
ದೇವರ ಪ್ರಾಂಗಣದ ಮೇಲ್ಚಾವಣಿಗೆ ಸುವರ್ಣಾಚ್ಚಾದನ ಮಾಡುವ ‘ಸುವರ್ಣ ಗೋಪುರ’ ಯೋಜನೆಯ ಅನುಷ್ಟಾನಕ್ಕಾಗಿ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥರು, ಪರ್ಯಾಯ ಪಲಿಮಾರು ಶ್ರೀಗಳು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಹಾಗೂ ಅದಮಾರು ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥರ ಉಪಸ್ಥಿತಿಯಲ್ಲಿ ಗರ್ಭಗುಡಿ ಮಾಡಿನ ತುದಿಯಲ್ಲಿರುವ ಮೂರು ಕಲಶಗಳನ್ನು ಶಾಸ್ತ್ರೋಕ್ತವಾಗಿ ಮಠದ ವೃಷಭದಿಂದ ಎಳೆದು ಕೆಳಗೆ ಇಳಿಸಲಾಯಿತು.
ಇದಕ್ಕೆ ಮೊದಲು ಅಷ್ಟಮಠಗಳ ಸ್ವಾಮೀಜಿಗಳು ಹಾಗೂ ಊರಿನ ಗಣ್ಯರ ಸಮ್ಮುಖದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಾಡನ್ನು ಬಿಚ್ಚಲು ಅನುಮತಿಯನ್ನು ಪಡೆಯಲಾಯಿತು. ಸಾಮೂಹಿಕ ಪ್ರಾರ್ಥನೆ, ಮುಷ್ಠಿ ದ್ರವ್ಯ ಸಮರ್ಪಣೆಯೂ ನಡೆಯಿತು. ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರ್ಯಾಯ ಪಲಿಮಾರುಶ್ರೀಗಳು, ಗರ್ಭಗುಡಿಯ ಮಾಡಿಗೆ ಚಿನ್ನದ ಹೊದಿಕೆ ಹಾಸುವ ಕಾರ್ಯಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಇದಕ್ಕಾಗಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿದಾನಗಳನ್ನು, ವಿವಿಧ ಹೋಮಹವನಗಳನ್ನು ನಡೆಸಲಾಗಿದೆ. ಜೀರ್ಣಗೊಂಡ ಮರಗಳನ್ನು ಬದಲಿಸಿ, ತಾಮ್ರದತಗಡಿನ ಮೇಲೆ ಚಿನ್ನದ ಲೇಪನವಿರುವ ಬೆಳ್ಳಿಯ ತಗಡನ್ನು ಹೊದಿಸಲಾಗುತ್ತದೆ ಎಂದರು.
ದರ್ಶನಕ್ಕೆ ತಡೆ ಇಲ್ಲ: ಗರ್ಭಗುಡಿಯ ಕೆಲಸ ನಡೆದರೂ ಪ್ರತಿದಿನ ದೇವರ ದರ್ಶನ, ದೈನಂದಿನ ಪೂಜೆ ಹಾಗೂ ಉತ್ಸವಗಳಿಗೆ ಯಾವುದೇ ತೊಂದರೆಯಾ ಗುವುದಿಲ್ಲ, ಎಲ್ಲಾ ಸೇವೆಗಳು ಆಭಾದಿತವಾಗಿ, ಯಥಾಪ್ರಕಾರ ನಡೆಯಲಿದೆ. ಸಮಯಗಳಲ್ಲಿ ಮಾತ್ರ ಸ್ವಲ್ಪ ಬದಲಾವಣೆಗಳಿರಬಹುದು. ಪ್ರತಿದಿನ ಬೆಳಗ್ಗೆ 11 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿದೆ. ಸಂಜೆ 5ರಿಂದ ರಾತ್ರಿ 9:30ರ ರಾತ್ರಿ ಪೂಜೆಯವರೆಗೆ ಮತ್ತೆ ದೇವರ ದರ್ಶನಕ್ಕೆ ಅವಕಾಶ ಇದೆ.
ಇದರ ಬಳಿಕ ಮಾಡಿನ ಕೆಲಸ ರಾತ್ರಿ ನಡೆಯಲಿದೆ. ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಸಹ ಮಾಡಿನ ಕೆಲಸ ನಡೆಯುತ್ತಿದೆ. ಕನಕನ ಕಿಂಡಿಯಿಂದ ಯಾವತ್ತೂ ದರ್ಶನಕ್ಕೆ ಅವಕಾಶವಿದೆ. ಗರ್ಭಗುಡಿಯ ಮಾಡಿಗೆ ಸುವರ್ಣ ಹೊದಿಸುವ ಕಾರ್ಯ ಎರಡೂವರೆ ತಿಂಗಳಲ್ಲಿ ಸಂಪೂರ್ಣಗೊಳ್ಳುವ ವಿಶ್ವಾಸವಿದೆ. ಮೇ ಕೊನೆ-ಜೂನ್ ಆರಂಭದಲ್ಲಿ ಕಲಶೋತ್ಸವ ಹಾಗೂ ಕುಂಭಾಭಿಷೇಕವನ್ನು ಹಮ್ಮಿಕೊಳ್ಳಲಾಗುವುದು ಎಂದು ಪಲಿಮಾರುಶ್ರೀಗಳು ತಿಳಿಸಿದರು.
ಇಂದಿನ ಧಾರ್ಮಿಕ ವಿಧಿವಿದಾನಗಳು ವಿದ್ವಾಂಸರಾದ ಚಿತ್ರಾಪುರ ಗೋಪಾಲಕೃಷ್ಣ ಆಚಾರ್, ಹೆರ್ಗ ವೇದವ್ಯಾಸ ಭಟ್, ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್, ರಾಮಮೂರ್ತಿ ಭಟ್ ಇವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪ್ರದೀಪ್ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ, ಕಟೀಲಿನ ಹರಿನಾರಾಯಣದಾಸ ಅಸ್ರಣ್ಣ, ಪ್ರೊ.ಎಂ.ಬಿ.ಪುರಾಣಿಕ್, ದಿವಾಕರ ಶೆಟ್ಟಿ, ಬಾಲಾಜಿ ರಾಘವೇಂದ್ರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.