ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಜಾರಿ: ಪುಷ್ಪಾ ಅಮರನಾಥ್
ಬೆಂಗಳೂರು, ಮಾ.13: ರಾಜಕೀಯ ವಲಯದಲ್ಲಿ ಮಹಿಳೆಯರಿಗೆ ಪೂರ್ಣ ಪ್ರಮಾಣದಲ್ಲಿ ಮೀಸಲಾತಿ ದೊರೆಯಬೇಕಾದರೆ, ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕೆಂದು ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿಳಿಸಿದರು.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಯೋಜನೆಗಳು ಹಿಂದುಳಿದವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಎಲ್ಲ ಜಾತಿಯ ಬಡವರಿಗೆ ಆಸರೆಯಾಗಿದೆ. ಅದೇ ರೀತಿಯಲ್ಲಿ ಮನೋಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಯುಪಿಎ ಕಾರ್ಯಕ್ರಮಗಳು ಜನಮನ್ನಣೆ ಗಳಿಸಿದ್ದವು. ಹೀಗಾಗಿ ಈ ಬಾರಿ ಜನತೆ ಕಾಂಗ್ರೆಸ್ ಪರವಾಗಿ ಒಲವು ತೋರಲಿದ್ದಾರೆ ಎಂದು ಅವರು ತಿಳಿಸಿದರು.
ಮೋದಿ ಸರಕಾರದ ಯಾವ ಯೋಜನೆಗಳೂ ಬಡ ಜನರ ಪರವಾಗಿಲ್ಲ. ಕಳೆದ ಐದು ವರ್ಷಗಳಲ್ಲಿ ಒಳ್ಳೆಯ ದಿನಗಳು ಬಡಜನರ ಪಾಲಿಗೆ ಬಂದಿಲ್ಲ. ಬದಲಾಗಿ, ಕಾರ್ಪೊರೇಟ್ ವಲಯದ ಕೋಟ್ಯಾಧೀಶರಿಗೆ ಒಳ್ಳೆಯ ದಿನ ಬಂದಿದೆ. ನೋಟು ಅಮಾನ್ಯೀಕರಣದಿಂದಾಗಿ ದೇಶದಾದ್ಯಂತ 150 ಜನರು ಕ್ಯೂನಲ್ಲಿ ನಿಂತು ಸತ್ತರು. ಇಡೀ ದೇಶದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ ಎಂದು ಅವರು ಕಿಡಿಕಾರಿದು.
ಕಾಂಗ್ರೆಸ್ ಎನ್ನುವುದು ಕೇವಲ ರಾಜಕೀಯ ಪಕ್ಷ ಮಾತ್ರವಲ್ಲ. ಇದು ಒಂದು ಜನಾಂದೋಲನ. ಈ ಪಕ್ಷ ಜನಸಾಮಾನ್ಯರಿಂದ ಬೆಳೆದ ಪಕ್ಷವಾಗಿದ್ದು, ಕೇಡರ್ ಬೇಸ್ಡ್ ಪಕ್ಷವಲ್ಲ. ದೇಶದ ಸ್ವಾತಂತ್ರದ ಬಳಿಕ ಸುಮಾರು 70 ವರ್ಷ ದೇಶವನ್ನು ಆಳ್ವಿಕೆ ನಡೆಸಿ ದೇಶದ ಅಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆಗಳು, ಕಾಂಗ್ರೆಸ್ ಸರಕಾದ ಸಾಧನೆಗಳು ಹಾಗೂ ಹಾಲಿ ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡುವ ದಿಸೆಯಲ್ಲಿ ಪಕ್ಷದ ಕಾರ್ಯಕರ್ತರು ಸಜ್ಜುಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವೆ ಜಯಮಾಲಾ, ಶಾಸಕಿ ಸೌಮ್ಯಾ ರೆಡ್ಡಿ, ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಕಾಂಗ್ರೆಸ್ ನಾಯಕಿಯರಾದ ಮಾರ್ಗರೇಟ್ ಆಳ್ವಾ, ರಾಣಿ ಸತೀಶ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.