ಬೆಳಕಿನ ಮೀನುಗಾರಿಕೆ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ: ಮಲ್ಪೆ ಮೀನುಗಾರರರಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
ಉಡುಪಿ, ಮಾ.13: ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮತ್ತು ರಾಜ್ಯ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಅವೈಜ್ಞಾನಿಕ ಬೆಳಕು ಮೀನುಗಾರಿಕೆ ನಡೆಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮಲ್ಪೆ ಆಳ ಸಮುದ್ರ ಮೀನುಗಾರರ ಸಂಘ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.
ಸಂಘದ ಪದಾಧಿಕಾರಿಗಳು ಈ ಕುರಿತು ಮನವಿಯನ್ನು ಬುಧವಾರ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಮನವಿ ಸಲ್ಲಿಸಿದರು. ಎಲ್ಲ ಆದೇಶ ಗಳನ್ನು ದಿಕ್ಕರಿಸಿ ಇತರ ಮೀನುಗಾರರ ಮೇಲೆ ಹಲ್ಲೆ ಮಾಡಿ, ಸಮಸ್ತ ಮೀನುಗಾರರ ಅವನತಿಗೆ ಕಾರಣವಾದ ಅವೈಜ್ಞಾನಿಕ ಬೆಳಕು ಮೀನುಗಾರಿಕೆಯನ್ನು ಉಡುಪಿ ಜಿಲ್ಲೆಯ ಪರ್ಸಿನ್ ಮೀನುಗಾರರು ಅಕ್ರಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದರಿಂದ ಇತರ ಮೀನುಗಾರರು ಮತ್ಸಕ್ಷಾಮದಿಂದ ಬಳಲುತ್ತಿದ್ದು, ಭವಿಷ್ಯದ ಬಗ್ಗೆ ಭಯಭೀತರಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಕಿಶೋರ್ ಡಿ.ಅಮೀನ್ ತಿಳಿಸಿದರು.
ಇದನ್ನು ವಿರೋಧಿಸಿ ಕಳೆದ 15 ದಿನಗಳಿಂದ ಸುಮಾರು 1000 ಆಳ ಸಮುದ್ರ ಬೋಟುಗಳು ಸಮುದ್ರಕ್ಕೆ ಇಳಿಯದೆ ಮಲ್ಪೆ ಬಂದರಿನಲ್ಲಿ ಮುಷ್ಕರ ನಡೆಸುತ್ತಿವೆ. ಈ ಬೋಟುಗಳನ್ನು ನಂಬಿರುವ ಸುಮಾರು 8000 ಕ್ಕೂ ಅಧಿಕ ಮೀನುಗಾರರು ಹಾಗೂ ಅವರ ಕುಟುಂಬಸ್ಥರು ಅತಂತ್ರರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಬೆಳಕಿನ ಮೀನುಗಾರಿಕೆ ವಿರುದ್ಧ ಈ ಹಿಂದೆ ಮೂರು ಬಾರಿ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಮೀನುಗಾರಿಕೆ ಇಲಾಖಾ ಧಿಕಾರಿಗಳು, ಕರಾವಳಿ ಕಾವಲು ಪಡೆ ಇವುಗಳ ವಿರುದ್ಧ ಯಾವುದೇ ಕ್ರಮ ಜರಗಿಸುತ್ತಿಲ್ಲ. ಆದುದರಿಂದ ಸಮಸ್ತ ಮೀನುಗಾರರ ದೃಷ್ಠಿಯಿಂದ ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹಾಜರಿದ್ದರು. ಆಳ ಸಮುದ್ರ ಮೀನುಗಾರರ ಸಂಘದ ಪದಾಧಿಕಾರಿಗಳಾದ ದಯಾನಂದ ಕುಂದರ್, ಆನಂದ ಅಮೀನ್, ರವಿರಾಜ್ ಸುವರ್ಮ, ರಾಮ ಅಮೀನ್, ಭುವನೇಶ್ವರ ಕೋಟ್ಯಾನ್, ಮಿಥುನ್ ಕರ್ಕೇರ, ವಿಠಲ ಕರ್ಕೇರ, ಶಂಕರ್ ಸಾಲ್ಯಾನ್, ಹರೀಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಮೂರು ದಿನಗಳಲ್ಲಿ ಕ್ರಮ: ಡಿಸಿ
ಕಾನೂನು ಉಲ್ಲಂಘಿಸಿ ಮೀನುಗಾರಿಕೆ ನಡೆಸುವ ಬೋಟುಗಳ ವಿರುದ್ಧ ಮೂರು ದಿನಗಳಲ್ಲಿ ಕ್ರಮ ಜರಗಿಸಲಾಗುವುದು. ಈ ಬಗ್ಗೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಹಾಗೂ ಕರಾವಳಿ ಕಾವಲು ಪಡೆಯ ಅಧಿಕಾರಿ ಗಳಿಗೆ ಅಂತಿಮ ಗಡುವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾರ್ಡಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸರಕಾರ ಹಾಗೂ ಹೈಕೋರ್ಟ್ ಆದೇಶ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದ ಬೋಟುಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಇಲಾಖೆಗೆ ಸೂಚನೆ ನೀಡಲಾಗಿದೆ. ನಾಲ್ಕು ದಿನಗಳ ಹಿಂದೆಯಷ್ಟೆ ಇದರ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಮುಂದೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಭರವಸೆ ನೀಡಿದರು.