ಶ್ರೀನಿವಾಸ ಜೋಕಟ್ಟೆ ಅವರ ‘ಮಂಗಳೂರು ಪತ್ರ’ ಕೃತಿ ಬಿಡುಗಡೆ
ಮಂಗಳೂರು, ಮಾ.13: ಪತ್ರಕರ್ತ, ಸಾಹಿತಿ ಶ್ರೀನಿವಾಸ ಜೋಕಟ್ಟೆ ಅವರ 32ನೆ ಕೃತಿ ‘ಮಂಗಳೂರು ಪತ್ರ’ದ ಬಿಡುಗಡೆ ಕಾರ್ಯಕ್ರಮವು ನಗರದ ಖಾಸಗಿ ಹೊಟೇಲಿನಲ್ಲಿ ಬುಧವಾರ ನಡೆಯಿತು.
ಹಿರಿಯ ಲೇಖಕಿ ಚಂದ್ರಕಲಾ ನಂದಾವರ ಕೃತಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಮುಂಬೈಯ ಬ್ಗೆ ನಮಗಿದ್ದ ಭಯಾನಕ ಕಲ್ಪನೆಯನ್ನು ನನ್ನ ಶಿಷ್ಯ ಶ್ರೀನಿವಾಸ ಜೋಕಟ್ಟೆ ತನ್ನ ವಿಶಿಷ್ಟ ಶೈಲಿಯ ಲೇಖನಿಯ ಮೂಲಕ ದೂರ ಮಾಡಿದ್ದರು. ಅವರ ಬರಹಗಳು ಸಮಾಜಮುಖಿಯಾಗಿದ್ದು, ಜೀವನ ಪ್ರೀತಿಯಿಂದ ಕೂಡಿರುತ್ತದೆ. ಇಂತಹ ಶಿಷ್ಯನನ್ನು ಪಡೆದಿರುವ ನನಗೆ ತುಂಬಾ ಹೆಮ್ಮೆ ಇದೆ. ಆಶಾವಾದದ ಹಣತೆಯಂತೆ ಗೋಚರಿಸುವ ಶ್ರೀನಿವಾಸ ಈ ಕ್ಷೇತ್ರದಲ್ಲಿ ಮತ್ತಷ್ಟು ಮಿಂಚಲಿ ಎಂದು ಆಶಿಸಿದರು.
ಕೃತಿಯನ್ನು ಪರಿಚಯಿಸಿದ ಲೇಖಕಿ ಡಾ.ನಾಗವೇಣಿ ಮಂಚಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ತಿರುಗಾಡುವ ಶ್ರೀನಿವಾಸ ಜೋಕಟ್ಟೆ ಪ್ರವಾಸ ಸಾಹಿತ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ವರದಿಯೊಂದಿಗೆ ನೀಡುವ ವಿವರಣೆಯಲ್ಲಿ ಪ್ರೀತಿ ತುಂಬಿದೆ, ಸೌಂದರ್ಯ ಅಡಗಿವೆ. ವರದಿಗೆ ಪ್ರತಿಕ್ರಿಯಿಸುವ ಮತ್ತು ಪ್ರಶ್ನಿಸುವ ಗುಣ ಈ ಅಂಕಣ ಸಂಕಲನದ ಉದ್ದಕ್ಕೂ ಕಾಣಬಹುದಾಗಿದೆ. ಸರಳ ಮತ್ತು ನೇರವಾಗಿ ಬರೆಯಬಲ್ಲ ಶ್ರೀನಿವಾಸ ಜೋಕಟ್ಟೆ ಅಪರಾಧ ಜಗತ್ತಿನ ಬಗ್ಗೆ ಬರೆಯುವಾಗಲೂ ವೈಭವೀಕರಣ ಮಾಡದಿರುವುದು ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಮಂಗಳೂರಿನಲ್ಲಿದ್ದುಕೊಂಡು ಮುಂಬೈಯ ‘ಕರ್ನಾಟಕ ಮಲ್ಲ’ ಪತ್ರಿಕೆಗೆ ಬರೆದ ಅವರ ಲೇಖನಗಳಲ್ಲಿ ಬಹುತೇಕ ಲೇಖನಗಳು ಅಭಿವೃದ್ಧಿ ಕುರಿತಾದ ಅಧ್ಯಯನಕ್ಕೆ ಯೋಗ್ಯವಾದುದು. ಪಿಎಚ್ಡಿ ವಿದ್ಯಾರ್ಥಿಗಳು ಆಕರ ಗ್ರಂಥವಾಗಿಯೂ ಈ ಕೃತಿಯನ್ನು ಬಳಸಬಹುದಾಗಿದೆ. ಮಂಗಳೂರಿನ ಆರ್ಥಿಕ ಪಲ್ಲಟ ಮತ್ತು ಸಾಮಾಜಿಕ ಹೋರಾಟದ ಚಿತ್ರಣ ಈ ಕೃತಿಯಲ್ಲಿ ಅಡಕವಾಗಿದೆ ಎಂದು ನಾಗವೇಣಿ ಮಂಚಿ ನುಡಿದರು.
ಪತ್ರಕರ್ತ ಯು.ಕೆ.ಕುಮಾರನಾಥ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿದರು. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀನಿವಾಸ ಜೋಕಟ್ಟೆ 2000ನೆ ಇಸವಿಯಿಂದ 2004ರವರೆಗೆ ಮುಂಬೈಯ ‘ಕರ್ನಾಟಕ ಮಲ್ಲ’ ಪತ್ರಿಕೆಗೆ ತಾನು ಮಂಗಳೂರಿನಿಂದ ಬರೆದ 250ಕ್ಕೂ ಅಧಿಕ ಲೇಖನಗಳ ಪೈಕಿ ಆಯ್ದ 52 ಲೇಖನಗಳು ‘ಮಂಗಳೂರು ಪತ್ರ’ದಲ್ಲಿದೆ. ಈ ಸಂದರ್ಭ ಬೇರೆ ಬೇರೆ ರೀತಿಯಲಲಿ ನೆರವು ನೀಡಿದ ಮಿತ್ರರ ಸಮ್ಮುಖ ಈ ಕೃತಿಯನ್ನು ಬಿಡುಗಡೆಗೊಳಿಸಿದ ತೃಪ್ತಿ ನನಗಿದೆ ಮತ್ತು ಆವಾಗ ಪತ್ರಿಕೆಗಳಿಗೆ ಬರೆದುಕೊಂಡೇ ಬದುಕಿದ ಖುಷಿಯೂ ಇದೆ’ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ. ವಾಮನ ನಂದಾವರ, ಹರಿಯಪ್ಪ ಪೇಜಾವರ, ಪತ್ರಕರ್ತರಾದ ಆನಂದ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಆರ್. ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ರೇಶ್ಮಾ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.