ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ದೂರು
ಮಂಗಳೂರು, ಮಾ. 14: ‘ರಾತ್ರಿ 3 ಗಂಟೆಗೆ ಶತ್ರು ದೇಶಕ್ಕೆ ನುಗ್ಗಿ ಹೊಡೆಯುವಂತೆ ಆದೇಶ ನೀಡುವವರಿಗೆ ಮತ ಹಾಕಬೇಕೇ ಹೊರತು, ರಾತ್ರಿ 3 ಗಂಟೆಗೆ ಉಗ್ರರಿಗಾಗಿ ಸುಪ್ರೀಂ ಕೋರ್ಟ್ನ ಬಾಗಿಲು ತೆರೆಸುವವರಿಗಲ್ಲಾ... ಮೋದಿ-ಮತ್ತೊಮ್ಮೆ’ ಎಂದು ಟ್ವೀಟ್ ಮಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದೆ.
ಡಿಸಿಸಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮತ್ತು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅವರನ್ನು ಒಳಗೊಂಡ ನಿಯೋಗವು ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ಕೆಲವು ದಿನಗಳಿಂದ ಬಿಜೆಪಿ ಕಾರ್ಯಕರ್ತರು ದೇಶದ ಸೈನಿಕರ ಹೆಸರನ್ನು ಬಳಕೆ ಮಾಡಿ ಮತಯಾಚನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಂಸದರು ಈ ರೀತಿ ಟ್ವೀಟ್ ಮಾಡುವ ಮೂಲಕ ಭಾರತ ಸೇನೆಯ ಹೆಸರಲ್ಲಿ ಮತಯಾಚನೆ ಮಾಡಿ ಮತ್ತೊಮ್ಮೆ ಮೋದಿ ಎಂದು ಟ್ವೀಟ್ ಮಾಡಿರುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ಸಂಸದರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದೆ.
ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಆರಿಫ್ ಬಾವ, ಜಿಲ್ಲಾ ವಕ್ತಾರ ಖಾಲಿದ್ ಉಜಿರೆ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಪಿಯೂಸ್ ಮೊಂತೆರೋ, ಅಬ್ದುಲ್ ಸಲೀಂ ಮತ್ತಿತರರು ಉಪಸ್ಥಿತರಿದ್ದರು.