ಸಾರ್ವಜನಿಕ ಸ್ಥಳಗಳಲ್ಲಿನ 10,187 ಬ್ಯಾನರ್, ಬಂಟಿಗ್ಸ್ ತೆರವು: ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಮಾ.14: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೊಂಡಾಗಿನಿಂದ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿದ್ದ 10,187 ಬ್ಯಾನರ್, ಪೋಸ್ಟರ್, ಬಂಟಿಂಗ್ಸ್, ಗೋಡೆ ಬರಹಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿದ್ದ 10 ಗೋಡೆ ಬರಹಗಳು, 1901 ಪೋಸ್ಟರ್ಗಳು, 4376 ಬ್ಯಾನರ್ ಹಾಗೂ ಇತರ 3900 ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ ಎಂದವರು ಹೇಳಿದರು. ಉಳಿದಂತೆ ಖಾಸಗಿ ಸ್ಥಳಗಳಲ್ಲಿ 156 ಪೋಸ್ಟರ್ಗಳು, 65 ಬ್ಯಾನರ್ಗಳು ಹಾಗೂ ಇತರ 487 ಸೇರಿದಂತೆ ಒಟ್ಟು 708 ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಾಗಿದೆ ಎಂದವರು ತಿಳಿಸಿದರು.
ರಾಜಕೀಯ ಪಕ್ಷ, ಅಭ್ಯರ್ಥಿಗಳಿಗೆ ಸೂಚನೆ
ರಾಜಕೀಯ ಪಕ್ಷ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ನಡೆಸುವ ಸಭೆ, ಮೆರವಣಿಗೆ ಮತ್ತು ಧ್ವನಿ ವರ್ಧಕಗಳ ಕುರಿತು ಸ್ಥಳೀಯ ಪೊಲೀಸರಿಂದ ಲಿಖಿತ ಅನುಮತಿಯನ್ನು ಪಡೆದು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಉಪಯೋಗಿಸಬಹುದಾಗಿದೆ. ಇದರ ಜತೆಗೆ ಉಪಯೋಗಿಸುವ ಕಟ್ಟಡ, ಮೈದಾನದ ಬಗ್ಗೆಯೂ ಸಂಬಂಧಪಟ್ಟವರಿಂದ ಅನುಮತಿ ಪಡೆಯುವುು ಕಡ್ಡಾಯ ಎಂದವರು ಹೇಳಿದರು.
ಧಾರ್ಮಿಕ ಇಲಾಖೆಗೆ ಸೇರಿದ ಕಟ್ಟಡ ಅಥವಾ ಮೈದಾನಗಳನ್ನು ಚುನಾವಣಾಪ್ರಚಾರಕ್ಕೆ ಬಳಸುವಂತಿಲ್ಲ. ಎ.16ರಂದು ಬೆಳಗ್ಗೆ 7 ಗಂಟೆಯಿಂದ ಧ್ವನಿ ವರ್ದಕಗಳ ಬಳಕೆ ಮತ್ತು ಚನಾವಣಾ ಪ್ರಚಾರಕ್ಕೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಚುನಾವಣಾ ಪ್ರಚಾರಕ್ಕಾಗಿ ಬಳಸುವ ಮೈದಾನದ ಬಗ್ಗೆ ಅನುಮತಿಯನ್ನು ಸಂಬಂಧಪಟ್ಟ ಸ್ಥಳೀಯಾಡಳಿತದ ಮುಖ್ಯಸ್ಥರಿಂದ ಪಡೆಯತಕ್ಕದ್ದು. ರಾಜಕೀಯೇತರ ಸಭೆ, ಸಮಾರಂಭಗಳಿಗೆ ಯಾವುದೇ ನಿಯಂತ್ರ ಇಲ್ಲವಾದರೂ, ಸಹಾಯಕ ಚುನಾವಣಾ ಅಧಿಕಾರಿಯಿಂದ ಳಿಕತ ಅನುಮತಿಯನ್ನು ಪಡೆಯಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಚುನಾವಣಾ ಪ್ರಚಾರಕ್ಕಾಗಿ ಬಳಸುವ ವಾಹನಗಳ ಕುರಿತು ಚುನಾವಣಾಧಿಕಾರಿಯಿಂದ ಲಿಖಿತ ಅನುಮತಿ ಪಡೆದು ಅದನ್ನು ವಾಹನದಲ್ಲಿ ಪ್ರದರ್ಶಿಸಿ ಸದ್ರಿ ವಾಹನಗಳನ್ನು ಬಳಸಬಹುದಾಗಿದೆ ಎಂದು ಅವರು ವಿವರ ನೀಡಿದರು.
ವೋಟರ್ ಹೆಲ್ಪ್ಲೈನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹಳಷ್ಟು ಮಂದಿ 1025ರಷ್ಟು ಮಾಹಿತಿ ಕೇಳಿ ಅಭಿಪ್ರಾಯಗಳು ಬಂದಿವೆ. ಸಾರ್ವಜನಿಕರು ಸಿವಿಜಿಲ್ ಆ್ಯಪ್ ಮೂಲಕ ಚುನಾವಣಾ ನೀತಿ ಸಂಹಿತೆಗೆ ಉಲ್ಲಂಘಿಸಿ ಫೋಟೋ ಹಾಗೂ ವೀಡಿಯೋ ಸಹಿತ ದೂರುಗಳನ್ನು ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಡಿಸಿಪಿ ಹನುಮಂತರಾಯ ಉಪಸ್ಥಿತರಿದ್ದರು.
ಮಾ.16ರವರೆಗೆ ಮತದಾರರ ನೋಂದಣಿಗೆ ಅವಕಾಶ
ಚುನಾವಣಾ ಆಯೋಗದ ನಿರ್ದೇಶನದಂತೆ 1-1-2019ಕ್ಕೆ 18 ವರ್ಷ ತುಂಬುವ ಹಾಗೂ ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸದೇ ಇರುವ ಸಾರ್ವಜನಿಕರು ತಮ್ಮ ಹೆಸರನ್ನು ಮಾ. 16ರವರೆಗೆ ನೋಂದಾಯಿಸಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಉಚಿತ ದೂರವಾಣಿ ಸಂಖ್ಯೆ 1950ಯ ಸಹಾಯಕ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಾ. 19-26: ನಾಮಪತ್ರ ಸಲ್ಲಿಕೆ
ಮಾ. 19ರಿಂದ 26ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಬೆಳಗ್ಗೆ 11ರಿಂದ 3 ಗಂಟೆಯವರೆಗೆ ನಾಮಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯ 3ನೆ ಮಹಡಿಯಲ್ಲಿರುವ ಕೋರ್ಟ್ ಹಾಲ್ನಲ್ಲಿ ಅಭ್ಯರ್ಥಿ ಅಥವಾ ಸೂಚಕರು (ಒಟ್ಟು ಐದು ಮಂದಿ ಮೀರದಂತೆ) ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ಅಪರ ಜಿಲ್ಲಾಧಿಕಾರಿಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಆಭರಣ, ನಗದು ಸಾಗಿಸುವ ಸಂದರ್ಭ ಇರಲಿ ದಾಖಲೆ !
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಕೂಡಾ ಚಿನ್ನಾಭರಣ ಹಾಗೂ ನಗದನ್ನು ಸಾಗಿಸುವ ಸಂದರ್ಭ ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಯಕ್ಷಗಾನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಅಥವಾ ಧಾರ್ಮಿಕ ಕೇಂದ್ರಗಳಲ್ಲಿ ಕಾರ್ಯಕ್ರಮಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲವಾದರೂ, ಸೂಕ್ತ ಮಾಹಿತಿಯನ್ನು ನೀಡಿ ಮುಚ್ಚಳಿಕೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯ. ಅಲ್ಲಿ ಯಾವುದೇ ರೀತಿಯ ರಾಜಕೀಯ ಸಂಬಂಧಿ ಚಟುವಟಿಕೆಗಳು ನಡೆಯುವು ದಿಲ್ಲ ಎಂಬುದನ್ನು ಖಾತರಿಪಡಿಸುವುದಕ್ಕಾಗಿ ಹಾಗೂ ಇಂತಹ ಕಾರ್ಯಕ್ರಮಗಳ ಬಗ್ಗೆ ದೂರು ಬಂದಾಗ ಪರಿಶೀಲನೆಗೆ ಇದು ಸಹಕಾರಿಯಾಗುತ್ತದೆ ಎನ್ನುವ ರೀತಿಯಲ್ಲಿ ಈ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿ ಹೇಳಿದರು.
325 ಲೀಟರ್ ಮದ್ಯ ವಶ
ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು 325 ಅಕ್ರಮ ಮದ್ಯ ಹಾಗೂ ಒಂದು ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಸಿವಿಜಿಲ್ ಆ್ಯಪ್ನಡಿ 5 ದೂರುಗಳು ದಾಖಲಾಗಿದ್ದು, ಅಬಕಾರಿ ಕಾಯ್ದೆಯಡಿ 52 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.