380 ಚೀಲ ಅಕ್ರಮ ಸಾಗಾಟದ ಅಕ್ಕಿ ವಶ: ಆರೋಪಿಯ ಬಂಧನ
ಉಡುಪಿ ಡಿಸಿಐಬಿ ಪೊಲೀಸರ ಕಾರ್ಯಾಚರಣೆ
ಉಡುಪಿ, ಮಾ.14: ಯಾವುದೇ ಪರವಾನಿಗೆ ಇಲ್ಲದೇ, ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸುತಿದ್ದ 380 ಚೀಲಗಳಲ್ಲಿದ್ದ ಸುಮಾರು 10 ಟನ್ ಅಕ್ಕಿಯನ್ನು ಹಿರಿಯಡ್ಕ ಪೇಟೆಯ ಬಳಿ ಬುಧವಾರ ರಾತ್ರಿ ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ಉಡುಪಿ ಡಿಸಿಐಬಿ ಘಟಕದ ಪೊಲೀಸರು ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಉಡುಪಿ ಡಿಸಿಐಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಕಿರಣ್ ಸಿ. ಅವರು ದೊರೆತ ಖಚಿತ ಮಾಹಿತಿಯಂತೆ ತಮ್ಮ ಸಿಬ್ಬಂದಿಯೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಉಡುಪಿ ತಹಶೀಲ್ದಾರರ ಮೂಲಕ ಸ್ಥಳಕ್ಕೆ ಉಡುಪಿ ಆಹಾರ ನಿರೀಕ್ಷಕರು, ಆಹಾರ ಶಿರಸ್ತೇದಾರರು ಹಾಗೂ ಕಂದಾಯ ನಿರೀಕ್ಷಕರನ್ನು ಕರೆಸಲಾಯಿತು. ಅಕ್ರಮವಾಗಿ ಅಕ್ಕಿ ಸಾಗಿಸುತಿದ್ದ ಲಾರಿಯನ್ನು ಆಹಾರ ನಿರೀಕ್ಷಕರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಅಲ್ಲಿ ಸಿಕ್ಕಿದ ಮಾಹಿತಿಯಂತೆ ಪೆರ್ಡೂರು ರಥಬೀದಿ ಬಳಿಯ ರಾಜೇಶ್ ನಾಯಕ್ ಎಂಬವರ ಗೋದಾಮಿಗೆ ದಾಳಿ ನಡೆಸಿದಾಗ, ಅಲ್ಲಿ ಸುಮಾರು 130 ಚೀಲ ಅಕ್ಕಿ, ‘ಎಫ್ಸಿಐ ಪಂಜಾಬ್’ ಎಂದು ಬರೆದಿದ್ದ ಸುಮಾರು 400 ಖಾಲಿ ಗೋಣಿ ಚೀಲಗಳು, ತೂಕ ಮಾಡುವ ಯಂತ್ರ, ಚೀಲ ಹೊಲಿಯುವ ಯಂತ್ರಗಳು ಕಂಡುಬಂದವು.
ಬಿಪಿಎಲ್ ಫಲಾನುಭವಿಗಳಿಗೆ ಸರಕಾರ ನೀಡುತಿದ್ದ ಪಡಿತರ ಅಕ್ಕಿಯನ್ನು ಇಲ್ಲಿಂದ ಅಕ್ರಮವಾಗಿ ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಈ ಸಂಬಂಧ ಲಾರಿ ಚಾಲಕ ಕೇರಳ ಕಲ್ಲಿಕೋಟೆಯ ಸಿ.ಪಿ.ಶಫೀಕ್ ಎಂಬಾತನ್ನು ಬಂಧಿಸಿದ್ದಾರೆ.
ಗೋದಾಮಿನ ಹೊರಗೆ ಕೆಎ 20ಸಿ ಸಿ6410 ನಂಬರಿನ ಬೊಲೆರೋ ಪಿಕಪ್ ಗಾಡಿ ನಿಂತಿದ್ದು, ಅದರಲ್ಲೂ ಸುಮಾರು 50 ಚೀಲಗಳಲ್ಲಿ ಅಕ್ಕಿ ತುಂಬಿಸಿ ನಿಲ್ಲಿಸಿದ್ದನ್ನು ಸಹ ಮಹಜರು ನಡೆಸಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಪ್ರಕರಣದ ಪ್ರಮುಖ ಆರೋಪಿಯಾದ ರಾಜೇಶ್ ನಾಯಕ್ ಪರಾರಿ ಯಾಗಿದ್ದಾನೆ. ಲಾರಿ ಚಾಲಕ ಕಲ್ಲಿಕೋಟೆ ಇಲೆತ್ತೂರಿನ ಸಿ.ಪಿ.ಶಫೀಕ್ (36) ಎಂಬವನನ್ನು ಬಂಧಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಆರ್.ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿಯ ಎಎಸ್ಪಿ ರವಿಚಂದ್ರ, ಸಿಬ್ಬಂದಿ ಗಳಾದ ಸುರೇಶ್, ಸಂತೋಷ್ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ರಾಜ್ಕುಮಾರ್, ದಯಾನಂದ ಪ್ರಭು, ಶಿವಾನಂದ ಭಾಗವಹಿಸಿದ್ದರು.