ಕೆ. ಜಯಪ್ರಕಾಶ್ ಹೆಗ್ಡೆ ಸ್ಪರ್ಧೆಗೆ ಟಿಕೇಟ್: ಉಡುಪಿ ಕೃಷ್ಣನ ಮೊರೆ ಹೋದ ಅಭಿಮಾನಿಗಳು
ಉಡುಪಿ, ಮಾ.14: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೇಟ್ ನೀಡುವಂತೆ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಇದೀಗ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣರ ಮೊರೆ ಹೋಗಿದ್ದಾರೆ.
ಕ್ಷೇತ್ರದ ಬಹುಸಂಖ್ಯಾತ ಕಾರ್ಯಕರ್ತರು ಹಾಗೂ ಜನಾಭಿಪ್ರಾಯದಂತೆ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಈ ಬಾರಿಯ ಬಿಜೆಪಿ ಅಭ್ಯರ್ಥಿಯಾಗಿ ಮಾಡಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವಂತೆ ಅನುಗ್ರಹಿಸುವಂತೆ ಆಗ್ರಹಿಸಿ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಮಠದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣನಿಗೆ ಗುರುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ರಥಬೀದಿಯಲ್ಲಿರುವ ಶ್ರೀಅನಂತೇಶ್ವರ, ಚಂದ್ರಮೌಳೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀಕೃಷ್ಣ ದೇವಸ್ಥಾನಕ್ಕೆ ತೆರಳಿದ ಕಾರ್ಯಕರ್ತರು ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ರಾಘವೇಂದ್ರ ಕಿಣಿ, ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹೆಸರು ಇನ್ನು ಘೋಷಣೆಯಾಗಿಲ್ಲ. ಸಂಸದೀಯ ಮಂಡಳಿ ಸಭೆ ಸೇರಿ ಮಾ. 16ರಂದು ನಡೆದು ಅಲ್ಲಿ ಹೆಸರು ಘೋಷಣೆಯಾಗವ ಸಾಧ್ಯತೆ ಇದೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ವ್ಯಕ್ತಿಗತವಾಗಿ ಜನಾಭಿಪ್ರಾಯವಿರುವ, ಜನರಿಗೆ ಸದಾ ಸಿಗುವ ಹಾಗೂ ಬೆರೆಯುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆನ್ನುವ ದೃಷ್ಟಿಯಲ್ಲಿ ಅಸಂಖ್ಯಾತ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ ಎಂದರು.
ನಮಗೆ ಪಕ್ಷದ ಹಿರಿಯರು ಹಾಗೂ ರಾಷ್ಟ್ರ ನಾಯಕರಲ್ಲಿ ವಿಶ್ವಾಸವಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಜನಾಭಿಪ್ರಾಯ ಹಾಗೂ ಮತದಾರರ ಮನಸ್ಸು ಗೆಲ್ಲುವ ಅಭ್ಯರ್ಥಿಯನ್ನು ಕೊಟ್ಟು ಬಿಜೆಪಿಯ ವಿಜಯದ ನಾಗಲೋಟ ಮುಂದುವರಿಯುವಂತೆ ನೋಡಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಅವರ ಕೆಲಸದ ಬಗ್ಗೆ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಇಲ್ಲಿ ಸ್ಥಳೀಯರಿಗೆ ಸ್ಥಾನ ನೀಡಬೇಕು. ಸದಾ ಜನರೊಂದಿಗೆ ಬೆರೆಯುವ ನಾಯಕರು ಬೇಕೆನ್ನುವ ಆ ಶಯವಿದೆ. ಶೋಭಾ ರಾಜ್ಯ ನಾಯಕರು. ಅವರಿಗೆ ರಾಜ್ಯದಲ್ಲಿ ಓಡಾಟ ಮಾಡಬೇಕಾಗುತ್ತದೆ. ಇದು ಕಾರ್ಯಕರ್ತರ ಆಗ್ರಹ, ಬಿಟ್ಟರೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಕಿಣಿ ಸ್ಪಷ್ಟ ಪಡಿಸಿದರು. ನೂರಕ್ಕೆ ನೂರು ಕಾರ್ಯಕರ್ತರ ಮತ್ತು ಜನಾಭಿಪ್ರಾಯದ ನಾಯಕರನ್ನು ಬಿಜೆಪಿ ಆಯ್ಕೆ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದರು.
ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷದಿಂದ ಸಮೀಕ್ಷೆ ನಡೆದಿದೆ. ಸಮೀಕ್ಷೆ ಆಧಾರದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದರೆ ನಮಗೆ ಬೇಸರವಿಲ್ಲ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ಆಯ್ಕೆಯಾಗುವವರೆಗೆ ಹೋರಾಟ ನಡೆಯುವುದು ಸಾಮಾನ್ಯ ಎಂದ ಅವರು, ಅಂತರಿಕ ಸರ್ವೇ ಕೇಂದ್ರ ನಾಯಕರಲ್ಲಿದೆ. ಹೆಗ್ಡೆ ಬೇಕೆಂಬ ಬೇಡಿಕೆ ನೂರಾರು ಕಾರ್ಯಕರ್ತರದ್ದು ಎಂದರು.
ಚೇರ್ಕಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಮಾತನಾಡಿ, ಉಡುಪಿಚಿಕ್ಕಮಗ ಳೂರು ಕ್ಷೇತ್ರದಲ್ಲಿ ಸಂಸದೆ ಶೋಭಾ ಅವರಿಗೆ ಟಿಕೆಟ್ ನೀಡಬಾರದೆಂದು ನಾವು ಹೇಳಲ್ಲ. ಬಿಜೆಪಿ ಕಾರ್ಯಕರ್ತರ ಪಕ್ಷ. ಸಾವಿರಾರು ಸಂಖ್ಯೆಯ ಕಾರ್ಯಕರ್ತ ರಿಗೆ ಹೆಗ್ಡೆ ಪರ ಒಲವಿದ್ದು, ಹೈಕಮಾಂಡ್ ಈ ಬಾರಿ ಎಂಪಿ ಟಿಕೆಟ್ ಹೆಗ್ಡೆಗೆ ನೀಡಬೇಕು. ಪಕ್ಷ ಕೂಡಾ ಕಾರ್ಯಕರ್ತರ ಮಾತಿಗೆ ಬೆಲೆ ಕೊಡುತ್ತದೆ ಎಂಬ ವಿಶ್ವಾಸವಿದೆ ಎಂದರು.
ನಗರಸಭಾ ಸದಸ್ಯೆ ಗೀತಾ ಡಿ. ಶೇಟ್, ಬಾಲಕೃಷ್ಣ ಶೆಟ್ಟಿ, ಅಶೋಕ್ ನಾಯ್ಕಿ, ಯೋಗೀಶ್ ಸಾಲಿಯಾನ್, ಗಿರೀಶ್ ಕುಂದಾಪುರ, ಗೋಪಾಲ ಬಂಗೇರ, ಬಿಲ್ಲಾಡಿ ಗ್ರಾಪಂ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಹಿರಿಯರಾದ ಚಂದ್ರಶೇಖರ್ ಶೆಟ್ಟಿ ಕೆ.ಎನ್., ಜಯರಾಮ ಶೆಟ್ಟಿ, ಭುಜಂಗ ಗುರಿಕಾರ, ರಾಜರಾಮ ಶೆಟ್ಟಿ ಉಪಸ್ಥಿತರಿದ್ದರು.