ಮಾ.23ಕ್ಕೆ ಪ್ರೊ. ಅಮೃತ ಸೋಮೇಶ್ವರರಿಗೆ ಗೋವಿಂದ ಪೈ ಪ್ರಶಸ್ತಿ ಪ್ರದಾನ
ಮಂಗಳೂರಿನ ಸ್ವಗೃಹದಲ್ಲಿ ಕಾರ್ಯಕ್ರಮ
ಉಡುಪಿ, ಮಾ.14: ಪ್ರತಿಷ್ಠಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಯನ್ನು ಇದೇ ಮಾ.23ರ ಶನಿವಾರ ಸಾಹಿತಿ, ಜಾನಪದ ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರರಿಗೆ, ಅವರ ಸೋಮೇಶ್ವರದ ನಿವಾಸದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ನ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಪ್ರದಾನ ಮಾಡುವರು.
ಮಣಿಪಾಲ ಗ್ಲೋಬಲ್ನ ಮುಖ್ಯಸ್ಥ ಟಿ.ವಿ.ಮೋಹನದಾಸ್ ಪೈ, ತಮ್ಮ ತಾಯಿ ವಿಮಲಾ ಪೈ ಅವರ ಹೆಸರಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಪ್ರಾಯೋಜಿಸಿರುವ ಈ ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.
ಪ್ರೊ. ಸೋಮೇಶ್ವರರ ಸ್ವಗೃಹದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಾಹೆ ಪ್ರೊ ಚಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್ ಅಲ್ಲದೇ ಕುಲಪತಿ ಡಾ. ವಿನೋದ ಭಟ್, ಮಣಿಪಾಲ ಅಕಾಡೆಮಿ ಅಫ್ ಜನರಲ್ ಎಜ್ಯುಕೇಶನ್ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್, ಮಾಹೆ ಕುಲಸಚಿವಡಾ. ನಾರಾಯಣ ಸಭಾಹಿತ್, ವಿದ್ವಾಂಸರಾದ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ, ಡಾ.ಬಿ.ಎ ವಿವೇಕ ರೈ, ಡಾ.ಪಾದೇಕಲ್ಲು ವಿಷ್ಣು ಭಟ್ಟ್ಟ ಮುಂತಾದ ಗಣ್ಯರು ಉಪಸ್ಥಿತರಿರುವರು ಎಂದು ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದುವರೆಗೆ ಪ್ರೊ. ಶ್ರೀನಿವಾಸ ರಿತ್ತಿ, ಪ್ರೊ. ಕೆ.ಎಸ್.ನಿಸಾರ್ ಅಹಮದ್, ಡಾ.ಬಿ.ಸುರೇಂದ್ರ ರಾವ್, ಪ್ರೊ.ಕೆ.ವಿ ತಿರುಮಲೇಶ್ ಪ್ರತಿಷ್ಠಿತ ಈ ಪ್ರಶಸ್ತಿಗೆ ಬಾಜನರಾಗಿದ್ದಾರೆ.