‘ಕಲೆ, ನಾಟಕ, ಸಂಸ್ಕೃತಿಯ ಹೆಸರಿನಲ್ಲಿ ಕೋಟ್ಯಾಂತರ ರೂ. ಲೂಟಿ’
ರಂಗಕರ್ಮಿ ನಾಗರಾಜಮೂರ್ತಿಗೆ ನಾಟ್ಕ ಸಂಮಾನ ಪ್ರದಾನ
ಮುದ್ರಾಡಿ (ಹೆಬ್ರಿ), ಮಾ.14: ದೇಶದ ನಾಟಕ ಸಂಸ್ಕೃತಿ ಸಚಿವಾಲಯದಿಂದ 132 ರೆಪರ್ಟರಿಗಳು ಕಲೆ-ನಾಟಕ-ಸಂಸ್ಕೃತಿಯ ಹೆಸರಲ್ಲಿ ಪ್ರತಿವರ್ಷ ಕೋಟ್ಯಾಂತರ ರೂ.ಗಳನ್ನು ಲೂಟಿ ಮಾಡುತ್ತಿವೆ. ಇಷ್ಟೂ ಸಂಸ್ಥೆಗಳು ಪುಸ್ತಕದಲ್ಲಿ ಮಾತ್ರ ಅಸ್ವಿತ್ವದಲ್ಲಿದ್ದು, ಸರಕಾರದ ಹಣವನ್ನು ಲೂಟಿ ಮಾಡಲು ಹುಟ್ಟಿಕೊಂಡ ಸಂಸ್ಥೆಗಳು ಎಂದು ಖ್ಯಾತ ನಟ, ರಂಗ ನಿರ್ದೇಶಕ ಕೆ.ವಿ.ನಾಗರಾಜಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ 9 ದಿನಗಳ ಕಾಲ ನಡೆದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವದಲ್ಲಿ ಬುಧವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ನೀಡಲಾದ ಮುದ್ರಾಡಿ ನಾಟ್ಕ ಸಂಮಾನ-2019 ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಕರ್ನಾಟಕದಲ್ಲೂ ನಾಟಕ, ರಂಗಭೂಮಿಗೆ ನೀಡುವ ಅನುದಾನಗಳು ಉಳ್ಳವರ ಪಾಲಾಗುತ್ತಿದೆ.ನಿಜವಾಗಿ ರಂಗಸೇವೆ, ನಾಟಕಗಳನ್ನು ಮಾಡುವವರಿಗೆ ಯಾವುದೇ ಅನುದಾನಗಳು ಸಿಗುತ್ತಿಲ್ಲ. ರಾಜ್ಯ ಮಟ್ಟದ ಅಧಿಕಾರಿಗಳಿಗೆ ಕಮೀಷನ್ ನೀಡಿ ಅನುದಾನ ಪಡೆಯುವ ವ್ಯವಸ್ಥೆ ನಮ್ಮ ಮುಂದೆ ಇದೆ. ರಾಜ್ಯದ ಪ್ರಭಾವಿ ನಾಯಕರಾದ ಸಚಿವ ಡಿ.ಕೆ.ಶಿವಕುಮಾರ್ ಇದನ್ನೆಲ್ಲ ತಿಳಿಯುವ ಮನಸ್ಸು ಮಾಡಬೇಕು ಎಂದು ನಾಗರಾಜಮೂರ್ತಿ ಮನವಿ ಮಾಡಿದರು.
ಸರಕಾರದ ರಂಗಮಂದಿರಗಳು ಉಪಯೋಗಕ್ಕೆ ಬಾರದೇ ಗೋಡಾನು ಗಳಾಗಿವೆ. ರಂಗಾಯಣದ ಕಲಾವಿದರನ್ನು ಸರಕಾರಿ ನೌಕರರಂತೆ ನಡೆಸಿಕೊಳ್ಳಲಾ ಗುತ್ತಿದೆ. ಅವರಲ್ಲಿ ಕಲೆಯಿದೆ, ಕಲಾವಿದರನ್ನು ಸಾಮೂಹಿಕವಾಗಿ ಬಳಸಿಕೊಳ್ಳಿ ಎಂದು ಸರಕಾರಕ್ಕೆ ಮನವಿ ಮಾಡಿದ ಅವರು ಆ ಮೂಲಕ ಜೀವಂತ ಕಲೆ ಯಾದ ನಾಟಕವನ್ನು ಸರಕಾರ ಉಳಿಸಬೇಕಿದೆ ಎಂದರು.
ಸಂಶೋಧನಾತ್ಮಕ ನಾಟಕ, ಜಾತೀಯ ಅಸಮಾನತೆಗೆ ನಾಟಕ ರೂಪ ಕೊಟ್ಟ ಚೈತನ್ಯ ಶಕ್ತಿ ಡಾ.ಎಚ್.ಎಸ್.ಶಿವಪ್ರಕಾಶ್ ಮುದ್ರಾಡಿಯಂತಹ ಹಾಡಿಗೆ ಬರುತ್ತಿರುವುದು ಮಣ್ಣಿನ ಭಾಗ್ಯ. ಒಂದು ಕಡೆ ನಕ್ಸಲರು, ಇನ್ನೊಂದು ಕಡೆ ಪೌರಾಣಿಕ ನಾಟಕಗಳತ್ತ ಮುಖ ಮಾಡದ ಮಂದಿಯ ನಡುವೆಯೂ ಶ್ರೀರಾಮಾಯಣ ದರ್ಶನಂ ನಾಟಕ ನೋಡಲು ಇಲ್ಲಿ ಇಷ್ಟೊಂದು ಜನ ಸೇರಿರುುದು ಒಳ್ಳೆಯ ಬೆಳವಣಿಗೆ ಎಂದರು.
ದಿಲ್ಲಿ ಜೆಎನ್ಯುನ ಪ್ರಾದ್ಯಾಪಕ, ಕವಿ ಹಾಗೂ ನಾಟಕಕಾರ ಡಾ.ಎಚ್. ಎಸ್.ಶಿವಪ್ರಕಾಶ್ ಅವರು ಮಾತನಾಡಿ, ಇಂದು ದೇಶದಲ್ಲಿ ರಂಗಭೂಮಿ ಮತ್ತು ರಂಗ ಸಂಸ್ಕೃತಿ ಉಳಿದಿದ್ದರೆ ಅದು ಮುದ್ರಾಡಿಯಂತಹ ಗ್ರಾಮೀಣ ಪ್ರದೇಶದ ರಂಗಸಂಸ್ಥೆಗಳಿಂದ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಕೆ.ವಿ. ನಾಗರಾಜಮೂರ್ತಿ ಅವರಿಗೆ ಮುದ್ರಾಡಿ ನಾಟ್ಕ ಸಂವಾನ ಪ್ರಶಸ್ತಿ ಪ್ರದಾನ ಮಾಡಿದರು.
ನಮತುಳುವೆರ್ ಕಲಾ ಸಂಘಟನೆ ಸಂಸ್ಥಾಪಕ ಧರ್ಮಯೋಗಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಹೆಬ್ರಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ, ತಂಜಾವೂರಿನ ಉಮಾಶಂಕರ್, ಮಂಗಳೂರಿನ ಉದ್ಯಮಿ ಡಾ.ಆರೂರು ಪ್ರಸಾದ ರಾವ್, ನಮತುಳುವೆರ್ ಕಲಾ ಸಂಘಟನೆ ಅಧ್ಯಕ್ಷ ಸುಕುಮಾರ್ ಮೋಹನ್, ಸಂಘಟನಾ ಕಾರ್ಯದರ್ಶಿ ಜಗದೀಶ ಜಾಲ, ವಾಣಿ ಸುಕುಮಾರ್, ಸುಗಂಧಿ ಉಮೇಶ ಕಲ್ಮಾಡಿ ಉಪಸ್ಥಿತರಿದ್ದರು. ಸುಕುಮಾರ್ ಮೋಹನ್ ಸ್ವಾಗತಿಸಿ, ಜಗದೀಶ ಜಾಲ ನಿರೂಪಿಸಿದರು.
ಮೆರವಣಿಗೆ: ಸಮಾರೋಪ ಸಮಾರಂಭಕ್ಕೆ ಮುನ್ನ ನಾಡಿನ ವಿವಿಧ ಜನಪದ ಕಲಾ ಪ್ರಕಾರಗಳ ಆಕರ್ಷಕ ಮೆರವಣಿಗೆ ಮುದ್ರಾಡಿ ಗಣಪತಿ ದೇವಸ್ಥಾನ ದಿಂದ ನಾಟ್ಕದೂರು ಆದಿಶಕ್ತಿ ದೇವಸ್ಥಾನದವರೆಗೆ ನಡೆಯಿತು. ರಂಗ ಸಂಘಟಕ, ನಟ, ನಿರ್ದೇಶಕ ಬೆಂಗಳೂರಿನ ಕೆ.ವಿ.ನಾಗರಾಜಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು.