‘ಪಾಕ ಶಾಸ್ತ್ರದ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳುಂಟು’
ಮಣಿಪಾಲ, ಮಾ.14: ದೇಶದ ಆಹಾರ ಮತ್ತು ಹೊಟೇಲ್ ಉದ್ಯಮಕ್ಕೆ ಒಳ್ಳೆಯ ಭವಿಷ್ಯವಿದೆ. ಕಳೆದ ಒಂದೆರಡು ದಶಕಗಳಿಂದೀಚೆಗೆ ಜನಗಳು ದೇಶ-ವಿದೇಶಗಳಿಗೆ ಪ್ರವಾಸಕ್ಕೆ ತೆರಳುವುದು ಹೆಚ್ಚಾಗಿರುವಂತೆ ತಿನ್ನುವ ಆಹಾರದ ಕುರಿತಂತೆ ಹೆಚ್ಚೆಚ್ಚು ಆಸಕ್ತಿಯೂ ಮೂಡುತ್ತಿದೆ. ಇದು ಪಾಕ ಕಲೆಯ ಅಭಿವೃದ್ಧಿಗೆ ಸಹಾಯಕವಾಗಿದೆ ಎಂದು ಮುಂಬೈಯ ಓ ಪೆಡ್ರೊದಲ್ಲಿ ಮುಖ್ಯ ಬಾಣಸಿಗ (ಚೆಫ್) ಆಗಿರುವ ಹುಸೈನ್ ಶಹಝಾದ್ ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲದ ವೆಲ್ಕಮ್ ಗ್ರಾಜ್ಯುವೆಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿ ಸ್ಟ್ರೇಶನ್ (ವಾಗ್ಷಾ)ನ ಪಾಕಶಾಸ್ತ್ರ ವಿಭಾಗವು ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಬಾಣಸಿಗರ ಸಮಾವೇಶ-2019ರಲ್ಲಿ ಇಂದು ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡುತಿದ್ದರು.
ದೇಶದ ವಿವಿದೆಡೆಗಳಲ್ಲಿ ಪ್ರಸಿದ್ಧ ಬಾಣಸಿಗರಾಗಿ ಜನಪ್ರಿಯತೆಯನ್ನು ಪಡೆದಿರುವ ಪ್ರಮುಖ ಚೆಫ್ಗಳು ಸಮಾವೇಶದಲ್ಲಿ ಭಾಗವಹಿಸಿದ್ದು, ವಾಗ್ಷಾದ ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ಪಾಕಶಾಸ್ತ್ರಕ್ಕಿರುವ ಭವಿಷ್ಯ, ಅದನ್ನು ಹೇಗೆ ಸಮಕಾಲೀನಗೊಳಿ ಸಬಹುದು ಎಂಬ ಕುರಿತೂ ಅವರು ವಿದ್ಯಾರ್ಥಿಗಳೊಂದಿಗೆ ಮಾಹಿತಿಗಳನ್ನು ಹಂಚಿಕೊಂಡರು.
ಚೆಫ್ ಸಮಾವೇಶವನ್ನು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಅವರು ಉದ್ಘಾಟಿಸಿದರು. ಸಮಾವೇಶದಲ್ಲಿ ದಿ ಮುಂಬಯಿ ಕ್ಯಾಂಟೀನ್ನ ಚೆಫ್ ಥಾಮಸ್ ಝಕಾರಿಯಾಸ್, ಚೆಫ್ ಎಲಿಜಬೆತ್ ಯಾರ್ಕೆ, ಮುಂಬಯಿ ವಿವಿಯ ಪಾಕಶಾಸ್ತ್ರ ವಿಭಾಗದ ಡಾ.ಕುರುಷ್ ಎಫ್ . ದಲಾಲ್, ಚೆಫ್ ಪ್ರತೀಕ್ ಸಾಧು, ಮುಂಬಯಿ ಇನ್ಸೀಸನ್ನಲ್ಲಿ ಸೀಫುಡ್ ತಜ್ಞರಾಗಿರುವ ಡಾ.ಚೈತನ್ಯ ಕೃಷ್ಣ, ಪೇಸ್ಟ್ರಿ ಚೆಫ್ನ ಗಿರೀಶ್ ನಾಯಕ್, ಸೌಮ್ಯ ಗುಪ್ತ ಹಾಗೂ ಕಿರಿನಾ ಅಗರ್ವಾಲ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಸಭೆಯಲ್ಲಿ ಮಾತನಾಡಿದರು.