ಬೈಕ್ ಸವಾರಿಯಲ್ಲೇ ಹೃದಯಾಘಾತದಿಂದ ಮೃತಪಟ್ಟ ಮುಖ್ಯಶಿಕ್ಷಕ !
ಶಿರ್ವ, ಮಾ.15: ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಮುಖ್ಯ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ಶಂಕರಪುರ ಬರೋಡಾ ಬ್ಯಾಂಕ್ ಸಮೀಪ ನಡೆದಿದೆ.
ಮೃತರನ್ನು ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚೋಮ ನಾಯ್ಕಾ (46) ಎಂದು ಗುರುತಿಸಲಾಗಿದೆ. ಕೇರಳ ರಾಜ್ಯದ ಮಂಜೇಶ್ವರ ತಾಲೂಕು ಕಾಟುಕುಕ್ಕೆ ಮೊಗೇರು ಸಮೀಪದ ನಿವಾಸಿಯಾಗಿರುವ ಇವರು ಕಳೆದ ಎಂಟು ವರ್ಷಗಳಿಂದ ಶಿಕ್ಷಕರಾಗಿ ಹಾಗೂ 4 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರು ತನ್ನ ಬೈಕ್ನಲ್ಲಿ ಶಾಲೆಯಿಂದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುತ್ತಿದ್ದ ಸಂದರ್ದಲ್ಲಿ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಬೈಕ್ ನಿಲ್ಲಿಸಿ ಗಟ್ಟಿಯಾಗಿ ಕಿರುಚಿದಾಗ ಸಮೀಪದ ಅಂಗಡಿಯವರು ಬಂದು ಉಪಚರಿಸಿ ಶಿರ್ವ ಸಮುದಾಯ ಕೇಂದ್ರಕ್ಕೆ ಸಾಗಿಸಿದರು. ಆದರೆ ಅವರು ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರು ಈ ಮೊದಲು ಪೆರ್ಣಂಕಿಲ ಸಮೀಪದ ಪಟ್ಲ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹೆಚ್ಚುವರಿ ಶಿಕ್ಷಕರಾಗಿ ಬಂಟಕಲ್ಲು ಶಾಲೆಗೆ ವರ್ಗಾವಣೆಗೊಂಡಿದ್ದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರ ನಿಧನಕ್ಕೆ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ತಾಪಂ ಸದಸ್ಯೆ ಗೀತಾ ವಾಗ್ಳೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ್ ನಾಯಕ್, ಶಾಲಾ ಸಂಚಾಲಕ ಶಶಿಧರ ವಾಗ್ಲೆ ಸಂತಾಪ ವ್ಯಕ್ತಪಡಿಸಿದ್ದಾರೆ.