ಯುಪಿಸಿಎಲ್ ವಿರುದ್ಧ ಹಸಿರು ಪೀಠ ತೀರ್ಪಿನ ಮುಖ್ಯಾಂಶಗಳು: ರಾಜಾರಾಂ ತಲ್ಲೂರು
ಉಡುಪಿ, ಮಾ. 15: ಜಿಲ್ಲೆಯಲ್ಲಿ ಪರಿಸರ ಹಾಗೂ ಜನರ ಬದುಕಿನೊಂದಿಗೆ ಚೆಲ್ಲಾಟ ವಾಡುತಿದ್ದ ಅದಾನಿ ಮಾಲಕತ್ವದ ಉಡುಪಿ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಯುಪಿಸಿಎಲ್) ವಿರುದ್ಧ ನಂದಿಕೂರಿನ ಜನಜಾಗೃತಿ ಸಮಿತಿ ನಡೆಸುತ್ತಿರುವ ಸುದೀರ್ಘ ಹೋರಾಟಕ್ಕೆ ಕೊನೆಗೂ ರಾಷ್ಟ್ರೀಯ ಹಸಿರು ಪೀಠದಿಂದ ಮಹತ್ವದ ಜಯ ದೊರಕಿದೆ ಎಂದು ತೀರ್ಪಿನ ಮುಖ್ಯಾಂಶದ ಬಗ್ಗೆ ರಾಜಾರಾಂ ತಲ್ಲೂರು ಬರೆದಿದ್ದಾರೆ.
ಗುರುವಾರ ನೀಡಿದ ತನ್ನ ತೀರ್ಪಿನಲ್ಲಿ ಎನ್ಜಿಟಿ ಹಲವು ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿ ತೀರ್ಪನ್ನು ನೀಡಿದೆ. ಹೊಸದಿಲ್ಲಿಯ ಎನ್ಜಿಟಿಯ ಪ್ರಧಾನ ಪೀಠ ನೀಡಿದ ತೀರ್ಪಿನ ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗಿದೆ.
ಯೋಜನೆ ಆರಂಭದಿಂದಲೂ ನಿಯಮಗಳ ಉಲ್ಲಂಘನೆ ಮಾಡುತ್ತಾ ಬಂದಿದ್ದು, ಗ್ರಾಮಸ್ಥರು, ಅರ್ಜಿದಾರರ ಕಳವಳಗಳಿಗೆ ಸರಕಾರ ಸೇರಿದಂತೆ ಯಾರೂ ಗಮನ ನೀಡಿಲ್ಲ. ಹಲವಾರು ದೂರುಗಳು ದಾಖಲಾಗಿರುವುದೇ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ ಮತ್ತು 20-03-1997ರಂದು ಯಾವುದೇ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದೆ ಯೋಜನೆಗೆ ಪರಿಸರ ಅನುಮತಿ ನೀಡಲಾಗಿದೆ.
ಯೋಜನೆಗೆ 16-04-2002ರಂದು ಪರಿಸರ ಅನುಮತಿ ವಿಸ್ತರಣೆ ನೀಡಲಾಯಿತಾದರೂ 05-10-2004ರಂದು ಕೆಲಸ ಮತ್ತು ಆರಂಭ ಆಗಿರದಿದ್ದುದರಿಂದ ಸರ್ಕಾರ ಅದನ್ನು ಹಿಂದೆಗೆದುಕೊಂಡಿತ್ತು. ಬಳಿಕ ಆಕ್ಷೇಪಾರ್ಹ ರೀತಿಯಲ್ಲಿ 31-01-2005ರಂದು ಪತ್ರವೊಂದರ ಮೂಲಕ ಈ ಹಿಂದೆಗೆತವನ್ನು ರದ್ದು ಮಾಡಲಾಯಿತು. ಇದಾದ ಮೇಲೆ ಯೋಜನೆಯನ್ನು ಎರಡು ಬಾರಿ ಕಂಪನಿಯ ಕೋರಿಕೆಯ ಮೇರೆಗೆ ವಿಸ್ತರಿಸಲಾಯಿತು. ಆದರೆ ಈ ವಿಸ್ತರಣೆಗಳಿಗೆ ಸಾರ್ವಜನಿಕ ಅಹವಾಲು ಕೋರಿಕೆ ಸಹಿತ ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ನಿಯಮಗಳನ್ನೆಲ್ಲ ಮೀರಲಾಯಿತು.
ಯುಪಿಸಿಎಲ್ ಮಂದಿ ನೀಡಿದ ಮಾಹಿತಿಗಳನ್ನಷ್ಟೇ ಆಧರಿಸಿದ್ದಾಗಿದ್ದು, ಹಿಂದಿನ ಪರಿಸರ ಅನುಮತಿಗಳಲ್ಲಿ ಮತ್ತು ವಿಸ್ತರಣೆ ಅನುಮತಿಗಳಲ್ಲಿ ಮಾಡಲಾಗಿರುವ ನಿಯಮಗಳನ್ನು ಅನುಸರಿಸದಿರುವ ತಪ್ಪುಗಳನ್ನು ಮರೆಮಾಚಲು ನೀಡಿದಂತಿದೆ.
ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಪರಿಣತರು 2012ರಲ್ಲಿ ನಡೆಸಿದ ಅಧ್ಯಯನದಲ್ಲಿ ನೀರು, ಮಣ್ಣು, ಗಾಳಿ, ಜೈವಿಕ ಪರಿಸರಕ್ಕೆ ಗಮನಾರ್ಹ ಹಾನಿ ಆಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಪ್ಲಾಂಟ್ನ ತಂಪುಕಾರಕ ಟವರ್ ಗಳು ಹೊರಸೂಸುವ ಉಪ್ಪುಸಹಿತ ತೇವಾಂಶ ಕಾರಣವಾಗಿದ್ದು, ಅದು ಎರಡು ಕಿ.ಮೀ ತನಕ ಹಬ್ಬುತ್ತದೆ ಎಂಬುದೂ ಸಾಬೀತಾಗಿದೆ. ವಿವಿಧ ಮಾಲಿನ್ಯಗಳ ಕಾರಣದಿಂದಾಗಿ ಯುಪಿಸಿಎಲ್ ಪ್ಲಾಂಟ್ನ ಎರಡು ಕಿ.ಮೀ ಪರಿಧಿಯಲ್ಲಿ ಯೋಜನೆಯ ನಿರ್ಲಕ್ಷದ ಕಾರಣದಿಂದಾಗಿ ವ್ಯಾಪಕ ಹಾನಿ ಆಗಿರುವುದು ಸಾಬೀತಾಗಿದೆ.
ಇರುವ ಯೋಜನೆಯಲ್ಲೇ ಇಷ್ಟೊಂದು ಪರಿಸರ ಸಮಸ್ಯೆಗಳಿರುವಾಗ ಅದನ್ನು ಅದರ ದುಪ್ಪಟ್ಟು ಗಾತ್ರಕ್ಕೆ ವಿಸ್ತರಿಸುವ ತೀರ್ಮಾನ ಪರಿಸರಕ್ಕೆ ಹಾನಿ ಕಾರಕ ಆಗುವುದರಲ್ಲಿ ಸಂಶಯ ಇಲ್ಲ. ಈ ವಿಚಾರವನ್ನು ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ನೋಡಬೇಕಿದೆ.
ಈ ಇಡಿಯ ಪ್ರಕರಣದಲ್ಲಿ ಕೇಂದ್ರ ಪರಿಸರ ಇಲಾಖೆಯ ಪಾತ್ರ ನಿಷ್ಪಕ್ಷಪಾತವಾಗಿಲ್ಲದಿರುವ ಕುರಿತು ನ್ಯಾಯಮಂಡಳಿ ಆಕ್ರೋಶ ವ್ಯಕ್ತ ಪಡಿಸುತ್ತದೆ.
ಯುಪಿಸಿಎಲ್ ಯೋಜನೆಯ ಒಂದನೇ ಹಂತ ಈಗ ಪೂರ್ಣ ಗೊಂಡಿದ್ದು, ವಿದ್ಯುತ್ ಉತ್ಪಾದನೆ ಆಗುತ್ತಿದೆ. ‘ಆಗಿ ಹೋದದ್ದಕ್ಕೆ ಚಿಂತಿಸಿ ಫಲವಿಲ್ಲ’ ಎಂಬ ಸ್ಥಿತಿಯನ್ನು ನ್ಯಾಯಾಲಯ ಒಪ್ಪದು. ಆದರೂ ಈಗ ಅಂತಹದೊಂದು ಸ್ಥಿತಿ ಎದುರಾಗಿದೆ. ಹಾಗಾದರೆ ನ್ಯಾಯಮಂಡಳಿ ಅಸಹಾಯಕವೇ ಎಂಬ ಪ್ರಶ್ನೆ ಎದ್ದಿದೆ.
ನಾವು ಈಗಾಗಲೇ ಈ ತನಕದ ಎಲ್ಲ ಪರಿಸರ ಅನುಮತಿಗಳು ಅಕ್ರಮ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಹಾಗಾಗಿ, ಈ ಯೋಜನೆಯನ್ನು ರದ್ಧುಪಡಿಸಿ ಪರಿಸರವನ್ನು ಮೊದಲಿಂತೆ ಏರ್ಪಡಿಸಿ ಎಂದು ಹೇಳಬೇಕಾಗುತ್ತದೆ. ಆದರೆ ಈಗಾಗಲೇ ಆಗಿರುವ ವಿಳಂಬ, ಆಗಿಹೋಗಿರುವ ಸಂಗತಿಗಳ ಹಿನ್ನೆಲೆಯಲ್ಲಿ ಯೋಜನೆ ರದ್ಧುಪಡಿಸುವ ಆದೇಶದಿಂದ ಸಾರ್ವಜನಿಕರ ಹಿತಾಸಕ್ತಿ ರಕ್ಷಣೆ ಆಗದು. ಹಾಗಾಗಿ, ಈಗಾಗಲೇ ಆಗಿರುವ ಹಾನಿಯನ್ನು ಸರಿಪಡಿಸುವ ಮತ್ತು ಪ್ಲಾಂಟ್ನ್ನು ಪರಿಸರ ನಿಯಮಗಳಿಗೆ ಅನುಸಾರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ಅನುವು ಮಾಡಿಕೊಡುವ ಕ್ರಮಗಳನ್ನು ಸೂಚಿಸಬೇಕಾಗಿದೆ.
ಹೀಗಾಗಿ ಹಸಿರು ನ್ಯಾಯಪೀಠ ಕಾಯಿದೆ 2010ರ ‘ಮಾಲಿನ್ಯ ಮಾಡಿದವರು ಪಾವತಿಸಬೇಕು’ ನಿಯಮದಡಿ ಉಡುಪಿ ಪವರ್ ಕಾರ್ಪೋರೇಷನ್ ಲಿಮಿಟೆಡ್ಗೆ ಪರಿಸರ ಪರಿಹಾರ ದಂಡ ನೀಡಬೇಕೆಂದು ಸೂಚಿಸುತ್ತಿದ್ದೇವೆ. ಪರಿಣತರ ಸಮಿತಿ ( ಹಿರಿಯ ವಿಜ್ಞಾನಿ ಸಿಪಿಸಿಬಿ, ಹಿರಿಯ ಪ್ರತಿನಿಧಿ ಐಐಟಿ, ಚೆನ್ನೈ, ಹಿರಿಯ ವಿಜ್ಞಾನಿ, ಐಐಟಿ, ಬೆಂಗಳೂರು) ಮೂರು ತಿಂಗಳ ಒಳಗೆ ಪರಿಸರಕ್ಕಾಗಿರುವ ಹಾನಿಯನ್ನು ಅಂದಾಜಿಸಬೇಕು.
ಅವರ ವರದಿ ಬರುವ ತನಕ ಮುಂಗಡವಾಗಿ ಯುಪಿಸಿಎಲ್ ಕಂಪನಿ, 5 ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ಒಂದು ತಿಂಗಳೊಳಗೆ ಸಿಪಿಸಿಬಿಗೆ ನೀಡಬೇಕು. ಈ ಮೊತ್ತವನ್ನು ಸಿಪಿಸಿಬಿ ಪರಿಸರ ಹಾನಿಗಳ ನಿವಾರಣೆ, ಜನರ ಸಂಕಷ್ಟಗಳ ನಿವಾರಣೆಗೆ ಬಳಸಬೇಕು. ಈ ಹಣ ಅವರ ಸಿಎಸ್ಆರ್ ಹೊಣೆಗಾರಿಕೆಗೆ ಹೊರತಾದುದಾಗಿರುತ್ತದೆ.
1-08-2017ರಂದು ನೀಡಿದ ಯುಪಿಸಿಎಲ್ ಪ್ಲಾಂಟ್ ವಿಸ್ತರಣೆಯ ಪರಿಸರ ಅನುಮತಿ ಸರಿಯಾದುದಲ್ಲವಾಗಿರುವುದರಿಂದ, ಅಂತಹ ಯಾವುದೇ ವಿಸ್ತರಣೆಗಳಿಗೆ ಅನುಮತಿಯನ್ನು ನಿರಾಕರಿಸಲಾಗಿದೆ.
ಆ ನಿಟ್ಟಿನಲ್ಲಿ ಮುಂದುವರಿಯುವ ಮುನ್ನ ಯುಪಿಸಿಎಲ್ ಪ್ಲಾಂಟ್ ಹೆಚ್ಚುವರಿ ಪರಿಸರ ಪರಿಣಾಮ ಅಧ್ಯಯನವನ್ನು ನಡೆಸಿ, ಮೂರು ತಿಂಗಳಿಗೊಮ್ಮೆ ವರದಿ ಸಲ್ಲಿಸಬೇಕು. ಇವೆಲ್ಲ ಕ್ರಮಬದ್ಧವಾಗಿ ಮುಗಿದ ಬಳಿಕವೇ ಪರಿಸರ ಇಲಾಖೆ ಯುಪಿಸಿಎಲ್ಗೆ ಪರಿಸರ ಅನುಮತಿ ನೀಡಬಹುದು. ಅಲ್ಲಿಯ ತನಕ ಪರಿಸರ ಇಲಾಖೆ ನೀಡಿದ 1-08-2017ರ ಆದೇಶ ಅಮಾನತಿನಲ್ಲಿರುತ್ತದೆ.
ಅರ್ಜಿದಾರರಿಗೆ ದಾವಾ ಖರ್ಚಿನ ಬಾಬ್ತು ಯುಪಿಸಿಎಲ್ ಒಂದು ಲಕ್ಷ ರೂ. ನೀಡಬೇಕು.