ಹಫ್ತಕ್ಕಾಗಿ ಉದ್ಯಮಿಗೆ ಜೀವಬೆದರಿಕೆ ಕರೆ
ಬ್ರಹ್ಮಾವರ, ಮಾ.15: ರೋಯಲ್ ಸೋಡ ಫ್ಯಾಕ್ಟರಿಯ ಮಾಲಕರಾದ ಉಪ್ಪೂರು ಕೆ.ಜಿ.ರಸ್ತೆಯ ರತ್ನಾಕರ ಡಿ. ಶೆಟ್ಟಿ (69) ಎಂಬವರಿಗೆ ಹಫ್ತ ನೀಡು ವಂತೆ ಜೀವ ಬೆದರಿಕೆ ಕರೆ ಬಂದಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.13ರಂದು ಅಪರಿಚಿತ ವ್ಯಕ್ತಿಯೊಬ್ಬ ರತ್ನಾಕರ ಶೆಟ್ಟಿ ಅವರ ಮೊಬೈಲ್ಗೆ ಕರೆ ಮಾಡಿ, ತುಳು ಭಾಷೆಯಲ್ಲಿ ಮಾತನಾಡಿದ್ದನು. ನಿನ್ನನ್ನು ಹಾಗೂ ನಿನ್ನ ಮಗನನ್ನು ಕಡಿದು ಹಾಕುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದನು. ಬಳಿಕ ಮತ್ತೆ ಕರೆ ಮಾಡಿದ ಆತ, ನನಗೆ ಹಣ ಕೊಡು ಇಲ್ಲವಾದಲ್ಲಿ ನಿನ್ನನ್ನು ಹಾಗೂ ನಿನ್ನ ಮಗನನ್ನು ಕೊಲೆ ಮಾಡುತ್ತೇನೆ ಎಂದು ತುಳು ಭಾಷೆಯಲ್ಲಿ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story