ಮಾ.17ರಂದು ವೈದ್ಯರಿಗಾಗಿ ಆ್ಯಂಟಿ ಬಯೋಟಿಕ್ ಕುರಿತು ಕಾರ್ಯಾಗಾರ
ಉಡುಪಿ, ಮಾ.16: ಆ್ಯಂಟಿ ಬಯೋಟಿಕ್(ಪ್ರತಿಜೀವಕ) ಔಷಧವನ್ನು ವಿವೇಚನೆಯಿಂದ ಬಳಕೆ ಮಾಡುವ ಕುರಿತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಉಡುಪಿ ಕರಾವಳಿ ಶಾಖೆ, ಮಣಿಪಾಲ ಕೆಎಂಸಿಯ ಆ್ಯಂಟಿ ಬಯೋಟಿಕ್ ಗಾರ್ಡಿಯನ್ಸ್ಶಿಪ್ ಆ್ಯಂಡ್ ಎಜುಕೇಶನ್ ಸಹಯೋಗದೊಂದಿಗೆ ಐಎಂಎ ಸದಸ್ಯ ವೈದ್ಯರಿಗಾಗಿ ಶೈಕ್ಷಣಿಕ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದೆ.
ಮಾ.17ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5ಗಂಟೆಯವರೆಗೆ ಮಣಿಪಾಲ ಕೆಎಂಸಿಯ ಟಿ.ಎಂ.ಎ.ಪೈ ಹಾಲ್ನಲ್ಲಿ ನಡೆಯಲಿರುವ ಈ ಕಾರ್ಯಾ ಗಾರದ ಪ್ರಾಯೋಜಕತ್ವವನ್ನು ದೆಹಲಿ ಭಾರತೀಯ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಸಂಸ್ಥೆ ವಹಿಸಿಕೊಂಡಿದೆ ಎಂದು ಐಎಂಎ ಉಡುಪಿ ಕರಾವಳಿ ಶಾಖೆ ಅಧ್ಯಕ್ಷ ಡಾ. ಗುರುಮೂರ್ತಿ ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಇಂದು ಅನೇಕ ಬ್ಯಾಕ್ಟೀರಿಯಾಗಳು ಆ್ಯಂಟಿ ಬಯೋಟಿಕ್ ಸವಾಲಿನ ಹೊರತಾಗಿಯೂ ಸಾಯುತ್ತಿಲ್ಲ. ಅವುಗಳಿಗೆ ಪ್ರತಿರೋಧವನ್ನು ಬೆಳೆಸುವ ಮೂಲಕ ಅವು ಬದುಕುಳಿಯುತ್ತಿವೆ. ಆದುದರಿಂದ ಈಗ ಹಲವು ಆ್ಯಂಟಿ ಬಯೋಟಿಕ್ ಔಷಧಿಗಳು ಪರಿಣಾಮಕಾರಿಯಾಗಿ ಉಳಿದಿಲ್ಲ. ಇದು ಇಂದಿನ ಬಹಳ ದೊಡ್ಡ ಸವಾಲಾಗಿದೆ ಎಂದರು.
ಔಷಧಿಗಳಲ್ಲಿರುವ ಒಂದು ವರ್ಗವಾಗಿರುವ ಆ್ಯಂಟಿ ಬಯೋಟಿಕ್ಅನ್ನು ಅತ್ಯಂತ ಎಚ್ಚರಿಕೆಯಿಂದ ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸೂಚನೆಯ ಮೇರೆಗೆ ನಿರ್ದಿಷ್ಟ ಸಮಯದವರೆಗೆ ಬಳಸಬೇಕಾಗುತ್ತದೆ. ವೈದ್ಯರ ಸಲಹೆ ಮತ್ತು ಮೇಲ್ವಿಚಾರಣೆ ಇಲ್ಲದೆ ಅವುಗಳನ್ನು ತೆಗೆದುಕೊಳ್ಳಬಾರದು. ಆ್ಯಂಟಿ ಬಯೋಟಿಕ್ಗಳನ್ನು ವಿವೇಚನಾರಹಿತವಾಗಿ ತೆಗೆದುಕೊಂಡರೆ ಅದು ಪ್ರತಿಜೀವಕ ನಿರೋಧಕತೆಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಚಿರಂಜಯ್ ಮುಖೋಪಾಧ್ಯಾಯ್, ಡಾ.ಶಶಿ ಕಿರಣ್ ಉಮಾಕಾಂತ್, ಡಾ.ಕೃಷ್ಣಾನಂದ ಮಲ್ಯ, ಡಾ.ಮುರಳೀಧರ ವಯರ್, ಡಾ.ವಂದನಾ ಉಪಸ್ಥಿತರಿದ್ದರು.