ಲೋಕಸಭಾ ಚುನಾವಣೆ: ಕಾರ್ಮಿಕರ ಸನ್ನದು ಬಿಡುಗಡೆ
ಕುಂದಾಪುರ, ಮಾ.16: ಕುಂದಾಪುರ ಹಂಚು ಕಾರ್ಮಿಕ ಭವನದಲ್ಲಿ ಶುಕ್ರವಾರ ನಡೆದ ಕಾರ್ಮಿಕರ ಸಭೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪ್ರಸ್ತಾಪಿಸಿದ ಬೇಡಿಕೆಗಳು ಸೇರಿದಂತೆ ಇತರೆ 45 ಅಂಶಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕರ ಸನ್ನದು ಕಿರು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕೇಂದ್ರ ಕಾರ್ಮಿಕ ಸಂಘಟನೆಗಳು ತಮ್ಮ ಹೋರಾಟದ ಮುಂದುವರಿದ ಭಾಗವಾಗಿ 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಮಿಕರ ಸನ್ನದು ಅನ್ನು ಎಲ್ಲಾ ರಾಜಕೀಯ ಪಕ್ಷಗಳ ಮುಂದೆ ಇಟ್ಟಿದೆ. ಭಾತೃತ್ವ ಮತ್ತು ಸಾಮಾಜಿಕ ಸೌಹಾರ್ಧತೆಗಾಗಿ ಕಾರ್ಮಿಕರ ಐಕ್ಯತೆ ಎಂಬ ಘೋಷಣೆಯೊಂದಿಗೆ ರಾಜ್ಯದ ಜನತೆ ಎದುರಿಸುತ್ತಿರುವ ಸವಾಲುಗಳನ್ನು ಮನಗಾಣಬೇಕೆಂದು ಇದರಲ್ಲಿ ಮನವಿ ಮಾಡಲಾಗಿದೆ.
ಕಾರ್ಮಿಕ ಸಂಘಟನೆಗಳ ಬಲಿಷ್ಠ ವಿರೋಧದ ನಡುವೆಯು ಕೇಂದ್ರ ಸರಕಾರ ಕಾರ್ಮಿಕರ 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು ತೆಗೆದು ಹಾಕಿ 4 ಕಾರ್ಮಿಕ ಸಂಹಿತೆಗಳಲ್ಲಿ ವಿಲೀನಗೊಳಿಸಲು ಮುಂದಾಗಿದೆ. ಸರಕಾರವು ಜನತೆಯ ಜ್ವಲಂತ ಸಮಸ್ಯೆಗಳನ್ನು ಹಾಗೂ ತುರ್ತಿನ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿದೆ. ವಸತಿ, ಆರೋಗ್ಯ, ಶಿಕ್ಷಣ, ಸಾರಿಗೆ, ವಿದ್ಯುತ್ ಮುಂತಾದ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿದೆ. ಆದರೆ ಕಾರ್ಮಿಕರ ವೇತನಗಳು ಸ್ಥಗಿತಗೊಂಡಿದೆ ಎಂದು ಸನ್ನದುವಿನಲ್ಲಿ ಪ್ರಸ್ತಾಪಿಸಲಾಗಿದೆ.
ನಿರುದ್ಯೋಗವು ಕೇವಲ ಯುವಜನತೆಗೆ ಮಾತ್ರವಲ್ಲದೆ ಕೈಗಾರಿಕೆ ಮುಚ್ಚುವಿಕೆ ಮತ್ತು ಸ್ಥಗಿತತೆಗಳಿಂದಾಗಿ ಕಾರ್ಮಿಕರ ಬದುಕು ಅತಂತ್ರವಾಗುತ್ತಿದೆ. ಸಾರ್ವ ಜನಿಕ ಬ್ಯಾಂಕ್ಗಳಲ್ಲಿ ಕಾರ್ಮಿಕರು ಮತ್ತು ಸಾಮಾನ್ಯ ಜನತೆ ಉಳಿ ತಾಯ ಮಾಡಿರುವ ಸಾವಿರಾರು ಕೋಟಿ ಹಣವನ್ನು ಕಾರ್ಪೋರೇಟ್ ಲೂಟಿ ಕೋರರು ವಂಚನೆ ಮಾಡಿ ವಿದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಸರಕಾರವು ದೇಶ ಮತ್ತು ವಿದೇಶಿ ದೊಡ್ಡ ಬಂಡವಾಳಗಾರರಿಗೆ ವಾರ್ಷಿಕ 5ಲಕ್ಷ ಕೋಟಿಗೂ ಹೆಚ್ಚು ತೆರಿಗೆ ರಿಯಾಯಿತಿ ಮತ್ತು ವಿನಾಯಿತಿ ನೀಡುತ್ತಿದೆ ಎಂದು ಆರೋಪಿಸ ಲಾಗಿದೆ.
ಬಡವರು, ಕಾರ್ಮಿಕರಿಗೆ ಸಾಮಾಜಿಕ ಕಲ್ಯಾಣ ಖಾತ್ರಿಗೆ ಅಗತ್ಯ ಹಣ ಖರ್ಚು ಮಾಡಲು ನಿರಾಕರಿಸುತ್ತಿದೆ. ಸರಕಾರದ ಈ ನೀತಿಗಳನ್ನು ಸೋಲಿಸಲು ಚುನಾವಣೆ ಸಮಯದಲ್ಲಿ ಬಡವರ, ಕಾರ್ಮಿಕರ ಬೇಡಿಕೆಗಳನ್ನು ಎತ್ತುವ ಸಮಯವಾಗಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ನಾವು ಒತ್ತಾಯಿಸ ಬೇಕಾಗಿದೆ ಎಂಬ ಅಂಶ ಕಾರ್ಮಿಕರ ಸನ್ನದು ಕಿರು ಪುಸ್ತಕದಲ್ಲಿದೆ. ಈ ಬೇಡಿಕೆಗಳನ್ನು ಚುನಾವಣ ವಿಷಯವಾಗಿ ಮಾರ್ಪಡಿಸಲು ಜನರ ಮಧ್ಯೆ ಕೊಂಡೊಯ್ದು ವ್ಯಾಪಕ ಪ್ರಚಾರ ಮಾಡಲು ಸಭೆಯಲ್ಲಿ ತೀರ್ಮಾನಿಸ ಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಖಂಡರಾದ ವಿ.ನರಸಿಂಹ, ಎಚ್.ನರಸಿಂಹ, ವೆಂಕಟೇಶ್ ಕೋಣಿ, ಸುರೇಶ್ ಕಲ್ಲಾಗರ ಮೊದಲಾದವರು ಉಪಸ್ಥಿತರಿದ್ದರು.