ರಫೇಲ್ ಖರೀದಿಯಲ್ಲಿ ಕೇಂದ್ರ ಸರಕಾರ ಭ್ರಷ್ಟಾಚಾರ: ವಿ.ಆರ್.ಸುದರ್ಶನ್
ಮಂಗಳೂರು, ಮಾ.16: ದೇಶದ ರಕ್ಷಣಾ ವ್ಯವಸ್ಥೆಯ ರಫೇಲ್ ಯುದ್ಧ ವಿಮಾನದ ಒಪ್ಪಂದವನ್ನು ಅಂಬಾನಿ ಕಂಪೆನಿಗೆ ಒದಗಿಸಿಕೊಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ವಿ.ಆರ್.ಸುದರ್ಶನ್ ತಿಳಿಸಿದ್ದಾರೆ.
‘ಬ್ರಹ್ಮಾಂಡ ರಫೇಲ್ ಭ್ರಷ್ಟಾಚಾರ ಸಾರ್ವಜನಿಕ ಮಾಹಿತಿ ಕೈಪಿಡಿ’ಯನ್ನು ನಗರದ ಮಲ್ಲಿಕಟ್ಟೆಯಲ್ಲಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಫ್ರಾನ್ಸ್ನಲ್ಲಿ ರಫೇಲ್ ಯುದ್ಧ ವಿಮಾನ ನಿರ್ಮಿಸುತ್ತಿರುವ ಡಸಾಲ್ಟ್ ಕಂಪೆನಿಯ ಪಾಲುದಾರನಾಗಿ ಅನಿಲ್ ಅಂಬಾನಿ ರಿಲಯನ್ಸ್ ಕಂಪೆನಿಯನ್ನು ರಕ್ಷಣಾ ಇಲಾಖೆಯ ಒಪ್ಪಿಗೆ ಇಲ್ಲದೆಯೇ ನೇಮಕ ಮಾಡುವ ಮೂಲಕ ನರೇಂದ್ರ ಮೋದಿ ನೇರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಅನನುಭವಿ ರಿಲಯನ್ಸ್: ಯಾವುದೇ ವಿದೇಶಿ ಗುತ್ತಿಗೆ ಸಿಗಬೇಕಾದರೂ ಅಂತಹ ಕಂಪೆನಿಗೆ ಆ ಕೆಲಸದಲ್ಲಿ ಉತ್ತಮ ಅನುಭವವಿರಬೇಕು. ಆದರೆ ರಿಲಯನ್ಸ್ ಕಂಪೆನಿಗೆ ಯಾವುದೇ ಅನುಭವವಿಲ್ಲ. ಯುದ್ಧ ವಿಮಾನ ತಯಾರಿಕೆಯ ಅನುಭವವಿರುವ ಸರಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯನ್ನು ಮೂಲೆಗುಂಪು ಮಾಡಿದ್ದಾರೆ. ಇದು ಬಿಜೆಪಿ ನೇತೃತ್ವದಲ್ಲಿ ದೇಶಕ್ಕಾದ ದೊಡ್ಡ ಹೊಡೆತವಾಗಿದೆ ಎಂದು ವಿವರಿಸಿದರು.
ದೇಶದಲ್ಲಿ ಎನ್ಡಿಎ ನೇತೃತ್ವದ ಕೇಂದ್ರ ಸರಕಾರದ ವಿಫಲ ಆಡಳಿತ ಮುಚ್ಚಿ ಹಾಕಲು ಪ್ರಧಾನಿ ಮೋದಿ ಸರ್ಜಿಕಲ್ ಸ್ಟ್ರೈಕ್ಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ನರೇಂದ್ರ ಮೋದಿ ನೀಡಿದ್ದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ದೇಶದ ಜನರನ್ನು ಮತ್ತೊಮ್ಮೆ ಮರಳು ಮಾಡಲು ಹೊರಟಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಜನರು ವಿಚಾರ ವಂತರಾಗಿದ್ದಾರೆ. ಜನರು ಮತ್ತೊಮ್ಮೆ ಮೋಸಕ್ಕೆ ಬಲಿಯಾಗುವುದಿಲ್ಲ ಎಂದರು.
ರಾಮಮಂದಿರ ನಿರ್ಮಾಣ ಚುನಾವಣೆಗೆ ಸೀಮಿತ: ಕಳೆದ 27 ವರ್ಷಗಳಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಬಿಜೆಪಿ ಹವಣಿಸಿತು. ಕೇಂದ್ರದಲ್ಲಿ ಎರಡು ಬಾರಿ ಎನ್ಡಿಎ ಸರಕಾರ ಬಂದಾಗಲೂ ಯಾಕೆ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿಲ್ಲ ? ಬಿಜೆಪಿಯವರು ಚುನಾವಣೆ ಬಂದಾಗ ಮಾತ್ರ ರಾಮಮಂದಿರ ನಿರ್ಮಾಣ ವಿಷಯವನ್ನು ತೆಗೆಯುತ್ತಾರೆ. ರಾಮಮಂದಿರ ನಿರ್ಮಾಣ ಕೇವಲ ಚುನಾವಣೆಗೆ ಸೀಮಿತವಾಗಿ ಉಳಿದಿದೆ ಎಂದು ಬಿಜೆಪಿ ವಿರುದ್ಧ ವಿ.ಆರ್.ಸುದರ್ಶನ್ ವಾಗ್ದಾಳಿ ನಡೆಸಿದರು.
ಎನ್ಡಿಎ ನೇತೃತ್ವದ ಕೇಂದ್ರ ಸರಕಾರವು ಎಲ್ಲ ವಿಭಾಗದಲ್ಲೂ ಆಡಳಿತ ನಡೆಸಲು ವಿಫಲವಾಗಿದೆ. ಲೋಕಪಾಲ ಸ್ಥಾಪನೆಯಾಗಲು ಕೇಂದ್ರ ಸರಕಾರ ಬಿಡುತ್ತಿಲ್ಲ. ಲೋಕಪಾಲ ರಚನೆಯಾದರೆ ಕೇಂದ್ರದ ರಫೇಲ್ ಹಗರಣ ಹೊರಗೆ ಬರುತ್ತದೆ ಎನ್ನುವ ಉದ್ದೇಶದಿಂದ ಲೋಕಪಾಲ ಜಾರಿಯಾಗುತ್ತಿಲ್ಲ. ಅಣ್ಣಾ ಹಜಾರೆ ನೇತೃತ್ವದಲ್ಲಿ ಲೋಕಪಾಲ ರಚನೆಗೆ ಹೋರಾಟ ನಡೆಸಲಾಗಿತ್ತು. ಉದ್ದೇಶಪೂರ್ವಕವಾಗಿ ಲೋಕಪಾಲ ರಚನೆಯಲ್ಲಿ ವಿಳಂಬಗತಿ ವಹಿಸಲಾಗು ತ್ತಿದೆ ಎಂದು ವಿ.ಆರ್.ಸುದರ್ಶನ್ ದೂರಿದರು.
ಬ್ರಹ್ಮಾಂಡ ರಫೇಲ್ ಭ್ರಷ್ಟಾಚಾರ ಸಾರ್ವಜನಿಕ ಮಾಹಿತಿ ಕೈಪಿಡಿಯನ್ನು ಜಿಲ್ಲೆಯ ಮೂಲೆಮೂಲೆಗೂ ಕಾಂಗ್ರೆಸ್ ಕಾರ್ಯಕರ್ತರು ತಲುಪಿಸಬೇಕು. ಕೇಂದ್ರ ಸರಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡಬೇಕು. ಜೊತೆಗೆ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ ಹಾಗೂ ತಾರಾನಾಥ ಶೆಟ್ಟಿ, ವಾಸುದೇವ ಬೊಳೂರು, ಹನೀಫ್, ಬಿ.ಎಚ್.ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಒಂದೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸುದರ್ಶನ್
ಲೋಕಸಭಾ ಚುನಾವಣೆಯ ಸಂಬಂಧ ಮಾ.19ರಂದು ಕಾಂಗ್ರೆಸ್ ಪಕ್ಷದ ಕೇಂದ್ರ ಸಮಿತಿಯ ಸಭೆ ನಡೆಯಲಿದೆ. ಜೊತೆಗೆ ರಾಜ್ಯದ ಹಂತದಲ್ಲಿ ಚುನಾವಣಾ ಸಮಿತಿ, ಸ್ಕ್ರೀನಿಂಗ್ ಕಮಿಟಿಗಳು ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ವಿ.ಆರ್. ಸುದರ್ಶನ್ ತಿಳಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಸಭಾ ಚುನಾವಣೆಯಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಕುರಿತು ಈಗಾಗಲೇ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಂಬಂಧಪಟ್ಟ ಎಲ್ಲ ಜಿಲ್ಲಾ ಮುಖಂಡರ ಜೊತೆ ಚರ್ಚೆ ಮಾಡಿದ್ದಾರೆ. ಬ್ಲಾಕ್ ಅಧ್ಯಕ್ಷರು, ಪಕ್ಷದ ಜಿಲ್ಲಾ ಅಧ್ಯಕ್ಷರು, ಮಾಜಿ ಸಚಿವರು, ಮಾಜಿ ಶಾಸಕರು, ಪದಾಧಿಕಾರಗಳ ಜೊತೆ ಸಮಾಲೋಚನೆ ಮಾಡಿ ಸೂಕ್ತ ಮತ್ತು ಸಮರ್ಥ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
‘ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಮೋದಿ ಮತ್ತೊಮ್ಮೆ ಆಯ್ಕೆಯಾಗಲಿ’ ಎನ್ನುವ ಜನಾರ್ದನ ಪೂಜಾರಿ ಹೇಳಿಕೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಸ್ಪಂದಿಸಿದ ಅವರು, ಜನಾರ್ದನ ಪೂಜಾರಿ ಅವರಿಗೆ ರಫೇಲ್ ಹಗರಣದ ಬಗ್ಗೆ ಗೊತ್ತಿಲ್ಲ. ಹಾಗಾಗಿ ಅವರಲ್ಲಿ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.